ಯಾದಗಿರಿ: ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಶತ ಪ್ರಯತ್ನ ನಡೆಸುತ್ತಿದೆ. ಆದರೆ, ಕೆಲ ಜನರು ಮಾಹಿತಿ ಕೊರತೆಯಿಂದಲೋ ಅಥವಾ ಭಯದಿಂದಲೋ ಈ ಅಭಿಯಾನಕ್ಕೆ ಅಡ್ಡಿಯಾಗುತ್ತಿದ್ದಾರೆ. ಇದೇ ರೀತಿ ತಾಲೂಕಿನ ಹಳಿಗೇರಾ ಗ್ರಾಮದಲ್ಲಿ ಸ್ವಾಮೀಜಿ ಒಬ್ಬರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ.
ಅಲ್ಲದೇ, ಲಸಿಕೆ ನೀಡಲು ಬಂದ ಸಿಬ್ಬಂದಿ ಎದುರು 'ಬೇರೆ ಯಾವುದಾದರೂ ಇಂಜೆಕ್ಷನ್ ಮಾಡಿಸಿಕೊಳ್ಳುತ್ತೇನೆ. ಲಸಿಕೆ ಮಾತ್ರ ಹಾಕಿಸಿಕೊಳ್ಳಲ್ಲ. ಕೊರೊನಾ ಹಾವಳಿ ಅಂಜಿಸುವುದಕ್ಕೆ ನಾನು ಹುಟ್ಟಿದ್ದೇನೆ. ಕೊರೊನಾ ಇದು ದೇವಿಯ ಹಾವಳಿ. ಹೀಗಾಗಿ, ಲಸಿಕೆ ಪಡೆಯಲ್ಲ' ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಸ್ವಾಮೀಜಿ ಅವರ ಮನವೊಲಿಸುವಲ್ಲಿ ಸಿಬ್ಬಂದಿ ಸೋತಿದ್ದಾರೆ ಎಂಬುದು ತಿಳಿದು ಬಂದಿದೆ.
ಇದೇ ರೀತಿ ತಾಲೂಕಿನಲ್ಲಿ ಲಸಿಕೆ ನೀಡಲು ಬಂದ ಅಧಿಕಾರಿಗಳ ಮುಂದೆ ಮಹಿಳೆಯೊಬ್ಬರು ರಂಪಾಟ ನಡೆಸಿರುವ ಘಟನೆ ನಡೆದಿದೆ. ತಾಲೂಕಿನ ಮುದ್ನಾಳ ಗ್ರಾಮದ ಜಮೀನೊಂದರಲ್ಲಿ ಅಧಿಕಾರಿಗಳು ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮಹಿಳೆಗೆ ಹೇಳಿದ್ದಾರೆ. ಆಗ ಅವರು 'ನನ್ನ ಜೀವ ಹೋಗಲಿ, ನಾನು ಮಾತ್ರ ಲಸಿಕೆ ಪಡೆಯಲ್ಲ'ವೆಂದು ರಂಪಾಟ ನಡೆಸಿದ್ದಾರೆ.
ನಾನು ನಿನ್ನ ಕಾಲಿಗೆ ಬೀಳುತ್ತೇನೆ, ಲಸಿಕೆ ಹಾಕಿಸಿಕೋ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಭಾಕರ್ ಅವರು ಮಹಿಳೆಗೆ ಮನವಿ ಮಾಡಿ ಆಕೆಯ ಮನವೊಲಿಸಿ ಒಪ್ಪಿಸಿದ್ದಾರೆ.
ಓದಿ: ದೂರು ದಾಖಲಿಸುವಲ್ಲಿ ಲೋಪ : 12 ಮಂದಿ ವಿರುದ್ಧದ ಗ್ಯಾಂಬ್ಲಿಂಗ್ ಕೇಸ್ ರದ್ದುಪಡಿಸಿದ ಹೈಕೋರ್ಟ್