ಕಾಲೇಜು ಬಾತ್ರೂಂನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ
Updated on: Jan 24, 2023, 10:33 AM IST

ಕಾಲೇಜು ಬಾತ್ರೂಂನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ
Updated on: Jan 24, 2023, 10:33 AM IST
ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಬಾತ್ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ: ಶೈಕ್ಷಣಿಕ ವಿಷಯವಾಗಿ ತೀವ್ರ ಮಾನಸಿಕ ಖಿನ್ನತೆಗೊಳಗಾಗಿದ್ದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಬಾತ್ರೂಂನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಾಗರಬೆಟ್ಟದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಸೋಮವಾರ ನಡೆದಿದೆ. ಕೊಪ್ಪಳ ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಕೋಮಲಾಪೂರದ ಪದ್ಮಾವತಿ ಸಂಜಯ ಮೇಟಿ (17) ಸಾವಿಗೆ ಶರಣಾದ ವಿದ್ಯಾರ್ಥಿನಿ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಬಾತ್ರೂಂ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಳು. ಸಾಕಷ್ಟು ಸಮಯ ಕಳೆದರೂ ಹೊರಬಾರದಿರುವುದನ್ನು ಕಂಡು ಕಿಟಕಿ ಮೂಲಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಶಾಲೆಯ ಸಿಬ್ಬಂದಿ, ಪೋಷಕರು ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸ್ಐ ಎಚ್.ಬಿ.ಸುತಗುಂಡಾರ ನೇತೃತ್ವದ ತಂಡ ಬಾಗಿಲು ಒಡೆದು ಪರಿಶೀಲಿಸಿದ್ದು, ವಿದ್ಯಾರ್ಥಿನಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಡೆತ್ನೋಟ್: "ನನ್ನನ್ನು ಕ್ಷಮಿಸಿ. ಸೈನ್ಸ್ ವಿಷಯ ಇಷ್ಟವಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟಿದ್ದಾಳೆ. ಪೊಲೀಸರು ಪ್ರಕರಣ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪಕ್ಕದ ನಿವಾಸದಿಂದ ಮನೆಗೆ ಬರಲು ತಡ ಮಾಡಿದ ಪತಿ: ಮನನೊಂದು ಪತ್ನಿ ಆತ್ಮಹತ್ಯೆ
