ವಿಜಯಪುರ: ಸಾಮಾನ್ಯವಾಗಿ ಪೊಲೀಸ್ ಠಾಣೆ ಅಂದಾಕ್ಷಣ ಕಣ್ಮುಂದೆ ಬರೋದು ಠಾಣೆ ಮುಂದೆ ನಿಂತ ನಾಲ್ಕಾರು ಹಳೆ ವಾಹನಗಳು, ಬಣ್ಣ ಮಾಸಿದ ಗೋಡೆ, ಗಿಡ ಗಂಟಿಗಳು ಬೆಳೆದು ನಿಂತ ಇಕ್ಕಟ್ಟಾದ ಪ್ರದೇಶ. ಇಂತಹ ಠಾಣೆಗಳಿಗೆ ಜನ ಬರುವುದಕ್ಕೂ ಹಿಂದೆ ಮುಂದೆ ನೋಡುವ ಇಂದಿನ ದಿನಗಳಲ್ಲಿ ಜಿಲ್ಲೆಯ ಆದರ್ಶ ನಗರ ಪೊಲೀಸ್ ಠಾಣೆ ಸಾಕಷ್ಟು ಡಿಫರೆಂಟ್ ಆಗಿ ಜನ ಸಾಮಾನ್ಯರನ್ನ ಆಕರ್ಷಿಸುತ್ತಿದೆ.
ಮಾತ್ರವಲ್ಲದೇ ಬಂದಂತಹ ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ಒದಗಿಸುವ ಮೂಲಕ ಜನಸ್ನೇಹಿಯಾಗಿ ರೂಪು ಗೊಂಡಿದೆ. ಠಾಣೆಯ ಪಿಎಸ್ಐ ಪರಿಸರ ಪ್ರೇಮದಿಂದ ಈ ರೀತಿಯ ವಾತಾವರಣ ನಿರ್ಮಾಣವಾಗಿದೆ. ಈ ಪೊಲೀಸ್ ಠಾಣೆ ಪರಿಸರ ಸ್ನೇಹಿ ಜೊತೆಗೆ ಜನಸ್ನೇಹಿ ಯಾಗಿದೆ.
ಪೊಲೀಸ್ ಠಾಣೆ ಗೋಡೆ ಮೇಲೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ನೀಡುವ ಆಕರ್ಷಕ ಚಿತ್ರಗಳು. ಮತ್ತೊಂದೆಡೆ ಠಾಣೆ ಎದುರು ವಿಶಾಲವಾದ ಜಾಗದಲ್ಲಿ ಹಸಿರು ವನ. ವನದಲ್ಲಿ ಪಕ್ಷಿಗಳ ಗೂಡು, ಕುಡಿಯುವ ನೀರು ಕಾಳುಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ. 'ಜನಸ್ನೇಹಿ ಪೊಲೀಸ್’ ಪರಿಕಲ್ಪನೆಯಲ್ಲಿ ಆದರ್ಶ ನಗರ ಠಾಣೆ ಹೊಸ ರೂಪ ಪಡೆದುಕೊಂಡಿದೆ.
ಪೊಲೀಸ್ ಠಾಣೆ ಎಂದಾಗ ಮೂಡುವ ಭಯದ ಸಾಮಾನ್ಯ ಭಾವನೆಯನ್ನು ದೂರ ಮಾಡಲು ಈ ಮೂಲಕ ಪ್ರಯತ್ನಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಪಿಎಸ್ಐ ಆಗಿ ಠಾಣೆಗೆ ಬಂದ ಯತೀಶ್ ಕೆ.ಎನ್ ಮೊದಲು ಠಾಣೆ ವಾತಾವರಣ ಸರಿಪಡಿಸಲು ಯೋಚಿಸಿದ್ದರಂತೆ.
ಅದರಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸ್ಥಳೀಯರ ಸಹಕಾರದಲ್ಲಿ ಠಾಣೆಗೆ ಕಾಂಪೌಂಡ್ ನಿರ್ಮಿಸಿ, ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಬಳಿಕ ಅಪರಾಧ ಜಗತ್ತಿನ ಕುರಿತು ಜಾಗೃತಿ ಮೂಡಿಸುವ ಚಿತ್ರಗಳನ್ನು ಸ್ಥಳೀಯ ಕಲಾವಿದರ ಸಹಾಯದಿಂದ ಬಿಡಿಸಲಾಗಿದೆ. ಇನ್ನೂ ಈ ಕಾರ್ಯಕ್ಕೆ ಖುದ್ದು ವಿಜಯಪುರ ಎಸ್ಪಿ ಹೆಚ್.ಡಿ.ಆನಂದಕುಮಾರ ಪಿ.ಎಸ್.ಐ.ಯತೀಶರ ಹಾಗೂ ಕ್ರೈಮ್ ಪಿ.ಎಸ್.ಐ.ಗುರುಬೆಟ್ಟಿ ಇವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಠಾಣೆಯನ್ನೂ ಜನಸ್ನೇಹಿ ಯಾಗಿಸಲು ಕಾಂಪೌಂಡ್, ಕುಳಿತು ಕೊಳ್ಳಲು ಆಸನ, ಗಾರ್ಡನ್, ಗೋಡೆ ಮೇಲೆ ಬರಹಗಳು ಸೊಗಸಾಗಿ ಮೂಡಿವೆ. ಮಾತ್ರವಲ್ಲದೇ ಪೊಲೀಸ್ ಠಾಣೆ ಅಂದರೆ ಭಯ ಪಡುವ ಇಂದಿನ ದಿನಗಳಲ್ಲಿ ಮಕ್ಕಳು, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪೊಲೀಸ್ ಠಾಣೆ ಆವರಣದಲ್ಲಿ ತಮಗೆ ಬೇಕಾದ ಮಾಹಿತಿ ಪಡೆಯುತ್ತಿದ್ದಾರೆ. ಠಾಣೆ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಗಿಡಗಳನ್ನು ಸಹ ಬೆಳೆಸಲಾಗುತ್ತಿದೆ. ಈ ಮೂಲಕ ಠಾಣೆಯನ್ನು ಮಾದರಿಯನ್ನಾಗಿಸಲಾಗಿದೆ.
ಇದನ್ನೂ ಓದಿ: ತುಮಕೂರು: ಗೋಡೆ ಬರಹದಲ್ಲಿ ತಪ್ಪು ಕನ್ನಡ ಪದ ಬಳಕೆ: ಜನರ ಆಕ್ರೋಶ