ಸುಸಜ್ಜಿತ ಆಸ್ಪತ್ರೆಗಾಗಿ ಟ್ವಿಟರ್ ಅಭಿಯಾನ ಕೈಗೊಂಡ ಉತ್ತರ ಕನ್ನಡ ಜನತೆ

author img

By

Published : Jul 24, 2022, 4:09 PM IST

Updated : Jul 24, 2022, 4:34 PM IST

Uttara Kannada people will start a Twitter campaign for well-equipped hospital

ಸುಸಜ್ಜಿತ ಆಸ್ಪತ್ರೆಗಾಗಿ ಇಂದು ಟ್ವಿಟರ್ ಅಭಿಯಾನ- ಉತ್ತರ ಕನ್ನಡ ಜಿಲ್ಲೆಯ ಜನರಿಂದ ಹೋರಾಟಕ್ಕೆ ಮುನ್ನುಡಿ- ಸಂಜೆ 5 ಗಂಟೆಗೆ ಏಕಕಾಲಕ್ಕೆ ಒಟ್ಟಾಗಿ WeNeedEmergencyHospitalInUttarakannada ಅಭಿಯಾನ ಶುರು

ಕಾರವಾರ(ಉತ್ತರ ಕನ್ನಡ): ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಅವಘಡಗಳು ಸಂಭವಿಸುತ್ತಿರುತ್ತವೆ. ಆದರೆ ಇಲ್ಲಿ ತುರ್ತು ಚಿಕಿತ್ಸಾ ಆಸ್ಪತ್ರೆ ಇಲ್ಲ. ಈ ನಿಟ್ಟಿನಲ್ಲಿ ಇದೀಗ ಮತ್ತೆ ಜಿಲ್ಲೆಯ ಜನತೆ ಒಟ್ಟಾಗಿ ಸುಸಜ್ಜಿತ ಆಸ್ಪತ್ರೆಗಾಗಿ ವಿಭಿನ್ನ ಅಭಿಯಾನದ ಮೂಲಕ ಹೋರಾಟಕ್ಕೆ ಇಳಿಯಲು ಮುಂದಾಗಿದ್ದಾರೆ.

ಜಿಲ್ಲೆಗೆ ಬರುವ ಪ್ರವಾಸಿಗರಿಗೆ, ಜಿಲ್ಲೆಯ ಜನತೆ 'ದಯವಿಟ್ಟು ಯಾವುದೇ ಅಪಘಾತಗಳನ್ನು ಮಾಡಿಕೊಳ್ಳಬೇಡಿ, ಚಿಕಿತ್ಸೆ ಪಡೆದುಕೊಳ್ಳಲು ನಮ್ಮಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ' ಎಂದು ಮನವಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶ ಹರಿದಾಡುತ್ತಿದೆ.

ಸುಸಜ್ಜಿತ ಆಸ್ಪತ್ರೆಗಾಗಿ ಟ್ವಿಟರ್ ಅಭಿಯಾನ ಕೈಗೊಳ್ಳಲಿರುವ ಉತ್ತರ ಕನ್ನಡ ಜನತೆ

ಇಷ್ಟು ದೊಡ್ಡ ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ತುರ್ತು ಚಿಕಿತ್ಸೆ ನೀಡುವ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ತುರ್ತು ಅನಾರೋಗ್ಯದ ಪರಿಸ್ಥಿತಿಯಲ್ಲಿ ದೇವರ ಮೇಲೆ ಭಾರ ಹಾಕಿ ನೆರೆಯ ಜಿಲ್ಲೆಯ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ಏರಿ ಹೋಗಬೇಕಾದ ಅನಿವಾರ್ಯತೆಯನ್ನು ಜಿಲ್ಲೆಯ ಜನತೆ ಎದುರಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜನರು ಎಮರ್ಜೆನ್ಸಿ/ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ಜನ ಪ್ರತಿನಿಧಿಗಳಿಗೆ ಮನವಿ ಮಾಡಿ ಬೇಸತ್ತಿರುವ ಜನರು ಇದೀಗ ಹೋರಾಟದ ಹಾದಿ ತುಳಿಯಲು ಮುಂದಾಗಿದ್ದಾರೆ. ಇಂದು ಟ್ವಿಟರ್ ಅಭಿಯಾನದ ಮೂಲಕ ಹೋರಾಟಕ್ಕೆ ಮುನ್ನುಡಿಯಿಡುತ್ತಿದ್ದಾರೆ. ಜಿಲ್ಲೆಯ ಜನರು ಸಂಜೆ 5 ಗಂಟೆಗೆ ಏಕಕಾಲಕ್ಕೆ ಒಟ್ಟಾಗಿ WeNeedEmergencyHospitalInUttarakannada ಎನ್ನುವ ಹ್ಯಾಷ್‌ಟ್ಯಾಗ್‌ನೊಂದಿಗೆ ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ, ಸಿಎಂ ಬೊಮ್ಮಾಯಿ ಸೇರಿದಂತೆ ಪ್ರಮುಖರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ NoHospitalNoVote ಎನ್ನುವ ಹ್ಯಾಷ್‌ಟ್ಯಾಗ್ ಸಹ ಬಳಸಲಿದ್ದು, ಆಸ್ಪತ್ರೆ ನಿರ್ಮಿಸದಿದ್ರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಇದನ್ನೂ ಓದಿ: ರಸ್ತೆಗಾಗಿ ರೈತರ ಫಸಲು ನಾಶ.. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಕಾರವಾರದ ಕೆಲವರು ಒಟ್ಟಾಗಿ ಸುಸಜ್ಜಿತ ಆಸ್ಪತ್ರೆಗಾಗಿ ರಕ್ತದ ಮೂಲಕ ಪ್ರಧಾನಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಅಗಸ್ಟ್ 15ರೊಳಗೆ ಉತ್ತರಕನ್ನಡಕ್ಕೆ ತುರ್ತು ಚಿಕಿತ್ಸಾ ಆಸ್ಪತ್ರೆಯನ್ನು ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಿದ್ದಾರೆ. ಒಟ್ಟಾರೆ ಆಸ್ಪತ್ರೆಗಾಗಿ ಜಿಲ್ಲೆಯಾದ್ಯಂತ ಹೋರಾಟ ರೂಪುಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದನ್ನು ಕಾದುನೋಡಬೇಕು.

Last Updated :Jul 24, 2022, 4:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.