ಉತ್ತರಕನ್ನಡದಲ್ಲಿ ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪ.. ತಂತ್ರಜ್ಞಾನಗಳ ಮೂಲಕ ನಿರ್ವಹಣೆಗೆ ಪ್ಲಾನ್​

author img

By

Published : Sep 26, 2021, 8:53 AM IST

Natural Disasters

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಸುರಿಯುವ ಮಳೆ ನೆರೆ ಅವಾಂತರ ಸೃಷ್ಟಿಸುತ್ತಿದ್ದು, ಕೋಟ್ಯಂತರ ರೂ. ಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಪ್ರಾಕೃತಿಕ ವಿಕೋಪಗಳನ್ನ ತಂತ್ರಜ್ಞಾನಗಳ ಮೂಲಕ ನಿರ್ವಹಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಸುರಿಯುವ ಮಳೆ ನೆರೆ ಅವಾಂತರ ಸೃಷ್ಟಿಸುತ್ತಿದ್ದು, ಕೋಟ್ಯಂತರ ರೂ. ಹಾನಿ ಸಂಭವಿಸುತ್ತಿದೆ. ಅಲ್ಲದೇ, ಜನರ ಜೀವನದ ಮೇಲೆ ಸಹ ಇದು ಪರಿಣಾಮ ಬೀರುವ ಹಿನ್ನೆಲೆ ಪ್ರಕೃತಿ ವಿಕೋಪದ ಮೇಲೆ ಕಣ್ಣಿಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

2019ರಲ್ಲಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ನೆರೆ ಅವಾಂತರ ಸೃಷ್ಟಿಯಾಗಿತ್ತು. ಕಳೆದ ವರ್ಷ ಸಹ ಜಿಲ್ಲೆಯ ಕೆಲವೆಡೆ ನೆರೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ವರ್ಷವೂ ಸಹ ಅನೇಕ ಕಡೆ ಭೂಕುಸಿತ ಉಂಟಾಗಿದ್ದು, ಸಾಕಷ್ಟು ಪ್ರಮಾಣದ ಹಾನಿಗೆ ಕಾರಣವಾಗಿತ್ತು. ಪ್ರತಿವರ್ಷ ಒಂದಿಲ್ಲೊಂದು ಅವಾಂತರಗಳು ಎದುರಾಗುತ್ತಿರುವುದರಿಂದ ಜನರಲ್ಲಿ ಭಯ ಆವರಿಸಿದೆ. ಈ ನಿಟ್ಟಿನಲ್ಲಿ ಇದೀಗ ಪ್ರಾಕೃತಿಕ ವಿಕೋಪಗಳನ್ನ ತಂತ್ರಜ್ಞಾನಗಳ ಮೂಲಕ ನಿರ್ವಹಣೆ ಮಾಡಲು ಉತ್ತರಕನ್ನಡ ಜಿಲ್ಲಾಡಳಿತ ಮುಂದಾಗಿದೆ.

ಪ್ರಕೃತಿ ವಿಕೋಪದ ಮೇಲೆ ಕಣ್ಣಿಡಲು ಸಿದ್ಧತೆ ಮಾಡಿಕೊಂಡ ಜಿಲ್ಲಾಡಳಿತ

ಪ್ರಾಕೃತಿಕ ವಿಕೋಪಗಳ ನಿರ್ವಹಣೆ ತಂಡ ನಿಯೋಜನೆ:

ಹೌದು, ಜಿಲ್ಲೆಯಲ್ಲಿ 5 ಜಲಾಶಯಗಳಿದ್ದು, ಒಂದು ಅಣು ವಿದ್ಯುತ್ ಉತ್ಪಾದನಾ ಕೇಂದ್ರ ಸಹ ಇದೆ. ಪಶ್ಟಿಮ ಘಟ್ಟಗಳಿಂದಾಗಿ ಗುಡ್ಡಗಾಡುಗಳಿಂದ ಕೂಡಿರುವ ಜಿಲ್ಲೆ ಇದಾಗಿದ್ದು, ನದಿ ತೀರ ಹಾಗೂ ಗುಡ್ಡಗಳಿಗೆ ಹೊಂದಿಕೊಂಡು ಬಹುತೇಕ ಕಡೆ ಜನವಸತಿ ಪ್ರದೇಶಗಳಿವೆ. ಪ್ರಾಕೃತಿಕ ವಿಕೋಪಗಳು ಸಂಭವಿಸುವ ಪೂರ್ವದಲ್ಲಿಯೇ ಅವುಗಳ ತೀವ್ರತೆಯನ್ನ ಕಂಡುಕೊಂಡರೆ ಮುಂದೆ ಉಂಟಾಗುವ ಹೆಚ್ಚಿನ ಹಾನಿಯನ್ನ ತಪ್ಪಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ತಂಡವೊಂದನ್ನ ನಿಯೋಜಿಸಲಾಗಿದ್ದು, ಈ ತಂಡ ತಂತ್ರಜ್ಞಾನ ಬಳಸಿಕೊಂಡು ವಿಕೋಪಗಳ ಮೇಲೆ ನಿಗಾ ಇರಿಸುತ್ತದೆ. ಇದರಿಂದಾಗಿ ಹಾನಿ ಸಂಭವಿಸಬಹುದಾದ ಪ್ರದೇಶಗಳಿಗೆ ಮಾಹಿತಿ ನೀಡುವ ಮೂಲಕ ಮುನ್ನೆಚ್ಚರಿಕೆ ವಹಿಸುವ ಪ್ಲಾನ್ ಜಿಲ್ಲಾಡಳಿತದ್ದಾಗಿದೆ.

ಮಳೆ ಮುನ್ಸೂಚನೆ ಮೇಲೆ ನಿಗಾ:

ಈಗಾಗಲೇ ಜಿಲ್ಲೆಯಲ್ಲಿ ನೆರೆ ಪ್ರವಾಹ, ಭೂ ಕುಸಿತದಂತಹ ಅವಘಡಗಳಿಗೆ ಒಳಗಾಗಿರುವ ಪ್ರದೇಶಗಳನ್ನು ಗುರುತಿಸಲಾಗಿದೆ. ವಿಪತ್ತು ನಿರ್ವಹಣೆ ತಂಡವು ತಂತ್ರಜ್ಞಾನ ಬಳಸಿಕೊಂಡು ಕಾಲಕಾಲಕ್ಕೆ ಈ ಪ್ರದೇಶಗಳಲ್ಲಿನ ಮಳೆ ಮುನ್ಸೂಚನೆ ಮೇಲೆ ನಿಗಾ ಇರಿಸುತ್ತದೆ. ಈ ಹಿಂದೆ ನೆರೆ ಪ್ರವಾಹ ಎದುರಾಗಿರುವ ಪ್ರದೇಶಗಳಲ್ಲಿ ಅಥವಾ ಜಲಾಶಯ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ಅವಘಡ ಸಂಭವಿಸುವ ಸಾಧ್ಯತೆಗಳಿದ್ದಲ್ಲಿ ಈ ಕುರಿತು ಮುನ್ನೆಚ್ಚರಿಕೆ ಸಂದೇಶವನ್ನು ನೀಡುತ್ತದೆ. ಬಳಿಕ ಜಿಲ್ಲಾಡಳಿತ, ಸ್ಥಳೀಯ ಆಡಳಿತದ ಮೂಲಕ ಆಯಾ ಪ್ರದೇಶಗಳ ಜನರಿಗೆ ಮುನ್ಸೂಚನೆ ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ಅವರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವನ್ನ ಮಾಡಲು ಅನುಕೂಲವಾಗಲಿದೆ.

ಸಾರ್ವಜನಿಕರಿಂದ ಮೆಚ್ಚುಗೆ:

ಕಳೆದ ಮೂರು ವರ್ಷಗಳ ಅವಧಿಯಲ್ಲಿ ನೆರೆಯಿಂದಾಗಿ ಜಿಲ್ಲೆಯಲ್ಲಿ ನೂರಾರು ಕೋಟಿ ರೂ. ಹಾನಿ ಸಂಭವಿಸಿದ್ದು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.