ಅವಸಾನದತ್ತ ಸಿದ್ದಾಪುರದ ಮಹಿಳಾ ಸತ್ಯಾಗ್ರಹ ಸ್ಮಾರಕ

author img

By

Published : Sep 7, 2021, 9:46 AM IST

Updated : Sep 7, 2021, 10:32 AM IST

siddapur

ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಸೇರಿ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪೊಲೀಸ್ ಠಾಣೆಯಾಗಿದ್ದ ಸ್ಥಳದಲ್ಲೇ ಸಿದ್ದಾಪುರದ ಸತ್ಯಾಗ್ರಹ ಸ್ಮಾರಕ ನಿರ್ಮಿಸಲಾಗಿತ್ತು. ಆದರೆ, ಅದೀಗ ಪಾಳು ಬಿದ್ದಿದ್ದು, ಅಭಿವೃದ್ಧಿಪಡಿಸಲು ಆಗ್ರಹ ಕೇಳಿ ಬರುತ್ತಿದೆ.

ಶಿರಸಿ: ಜಿಲ್ಲೆಯ ಸಿದ್ದಾಪುರ ತಾಲೂಕು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಕರ ನಿರಾಕರಣೆಯ ಸಮರ, ಮಾವಿನಗುಂಡಿಯಲ್ಲಿ ಮಹಿಳೆಯರು ನಡೆಸಿದ್ದ ಸತ್ಯಾಗ್ರಹ ಆ ಕಾಲದ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಅಧ್ಯಾಯಗಳಲ್ಲೊಂದು. ಇದರ ನೆನಪಿಗಾಗಿ 11 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಮಹಿಳಾ ಸತ್ಯಾಗ್ರಹ ಸ್ಮಾರಕ ನಿರ್ವಹಣೆಯಿಲ್ಲದೇ ಅವಸಾನದತ್ತ ಮುಖ ಮಾಡಿದ್ದು, ಸ್ವಾತಂತ್ರ್ಯೋತ್ಸವದ ಅಮೃತ ವರ್ಷದಲ್ಲಿ ಅದನ್ನು ಅಭಿವೃದ್ಧಿ ಪಡಿಸಲು ಆಗ್ರಹ ವ್ಯಕ್ತವಾಗಿದೆ.

ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಸೇರಿ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪೊಲೀಸ್ ಠಾಣೆಯಾಗಿದ್ದ ಸ್ಥಳದಲ್ಲೇ ಈ ಸ್ಮಾರಕ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ರೂಪಿಸಲಾಗಿರೋ ದೃಶ್ಯಾವಳಿಗಳು ಅಂದಿನ ಚಳವಳಿಯನ್ನ ಜೀವಂತವಾಗಿ ಕಣ್ಮುಂದೆ ಬರೋವಂತೆ ಮಾಡಿವೆ.

ಸಿದ್ದಾಪುರದ ಮಹಿಳಾ ಸತ್ಯಾಗ್ರಹ ಸ್ಮಾರಕ

ದೇಶಕ್ಕಾಗಿ ಹೋರಾಡಿದ್ದ ಮಹಿಳೆಯರು ಇಲ್ಲಿ ಮೂರ್ತಿ ರೂಪ ಪಡೆದಿದ್ದಾರೆ. ಶಿವನ ಕೈಯಿಂದ ಗಂಗೆ ಬೀಳುತ್ತಿರುವ ಒಂದು ಶಿವನ ಮೂರ್ತಿಯನ್ನ ನಿರ್ಮಾಣ ಮಾಡಲಾಗಿತ್ತು. 1931 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕರ ನಿರಾಕರಣೆ ಚಳವಳಿಯಲ್ಲಿ ಮಾವಿನಗುಂಡಿ ಪಾತ್ರವೇನು ಅನ್ನೋದು ಈ ಸ್ಮಾರಕವನ್ನ ನೋಡಿದ್ರೆ ತಿಳಿಯುತ್ತದೆ.

ಆದರೆ, ಈಗ ಸ್ಮಾರಕದ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಸರಿಯಾದ ನಿರ್ವಹಣೆಯಿಲ್ಲದೇ ಹುಲ್ಲು ಬೆಳೆದಿದೆ. ಗಂಗೆಯನ್ನ ಧರೆಗಿಳಿಸಬೇಕಿದ್ದ ಶಿವನ ಮೂರ್ತಿ ಒಡೆದುಹೋಗಿದೆ. ಸರಿಯಾದ ಸೂಚನಾ ಫಲಕ ಸಹ ಇಲ್ಲವಾಗಿದ್ದು, ಇರೋ ಸೂಚನಾ ಫಲಕವೂ ತುಕ್ಕು ಹಿಡಿದು ಯಾವಾಗ ಬೀಳುತ್ತದೆಯೋ ಅನ್ನೋ ಭಯದಲ್ಲಿದೆ.

ಒಟ್ಟಿನಲ್ಲಿ ಸ್ವಾತಂತ್ರ್ಯ ಚಳವಳಿಯ ಕರ ನಿರಾಕರಣೆಯನ್ನ ಜೀವಂತವಾಗಿ ನಮ್ಮ ಕಣ್ಮುಂದೆ ತೆರೆದಿಡಬೇಕಿದ್ದ ಅಪರೂಪದ ಸ್ಮಾರಕವೊಂದು ಅವಸಾನದತ್ತ ಮುಖ ಮಾಡಿದೆ. ಜನರ ದುರಾದೃಷ್ಟ ಹಾಗೂ ಅಧಿಕಾರದ ಜಿಡ್ಡುಗಟ್ಟುವಿಕೆಗೆ ಸಾಕ್ಷಿಯಾಗಿದೆ. ಇದರಿಂದ ಈ ಬಾರಿಯಾದರೂ ಅಭಿವೃದ್ಧಿಪಡಿಸಿ, ಯುವ ಪೀಳಿಗೆಗೆ ಚಳವಳಿಯ ಮಹತ್ವ ತಿಳಿಸುವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.

Last Updated :Sep 7, 2021, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.