ಮತ್ತೆ ಮುನ್ನೆಲೆಗೆ ಬಂದ ಪರೇಶ್ ಮೇಸ್ತ ಪ್ರಕರಣ.. ಸಹಜ ಸಾವಿಗೆ ರಾಜಕೀಯ ಬಣ್ಣ- ಕಾಂಗ್ರೆಸ್ ಆರೋಪ

author img

By

Published : Oct 2, 2022, 5:42 PM IST

ಪರೇಶ್ ಮೆಸ್ತಾ ಪ್ರಕರಣದ ಕುರಿತು ಹೋರಾಟ

ಪರೇಶ್ ಮೇಸ್ತ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜೀವ ಪಡೆಯಲು ಹೊರಟಿದ್ದು. ವಿರೋಧ ಪಕ್ಷವಾದ ಕಾಂಗ್ರೆಸ್​ನವರು ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ.

ಕಾರವಾರ: ಪರೇಶ್ ಮೇಸ್ತ ಪ್ರಕರಣ ಕಳೆದ ವಿಧಾನಸಭಾ ಚುನಾವಣೆ ವೇಳೆ ಉತ್ತರ ಕನ್ನಡ ಜಿಲ್ಲೆಯ ಹಾಟ್ ಇಶ್ಯೂ ಆಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಇದೇ ಪ್ರಕರಣವನ್ನ ಇಟ್ಟುಕೊಂಡು ಹೋರಾಟ ನಡೆಸಿದ್ದರು. ಸದ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು ವಿರೋಧ ಪಕ್ಷ ಕಾಂಗ್ರೆಸ್ ಇದೇ ಪ್ರಕರಣವನ್ನ ಕೆದಕಲು ಪ್ರಾರಂಭಿಸಿದೆ. ಐದು ವರ್ಷದಿಂದ ನಡೆಸುತ್ತಿರುವ ತನಿಖೆಯನ್ನು ಇತ್ಯರ್ಥಗೊಳಿಸಿ ಎನ್ನುವ ಆಗ್ರಹವನ್ನು ಕಾಂಗ್ರೆಸ್ ನಾಯಕರು ಮಾಡಲು ಪ್ರಾರಂಭಿಸಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು, ಕಳೆದ 2018ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದು ಪರೇಶ್ ಮೇಸ್ತ ಎನ್ನುವ ಯುವಕನ ಸಾವಿನ ಪ್ರಕರಣ ಇಡೀ ರಾಜ್ಯದಲ್ಲಿ ತಲ್ಲಣ ಮಾಡಿಸಿತ್ತು. ಕೋಮುಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಕೋಮು ದ್ವೇಷದಿಂದಲೇ ಕೊಲೆ ಮಾಡಿರುವುದಾಗಿ ಬಿಜೆಪಿ ನಾಯಕರು, ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ನಡೆಸಿದ್ದರು.

ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಈ ಪ್ರಕರಣ ಮುಜುಗರ ತಂದಿದ್ದು, ಸಿಬಿಐ ತನಿಖೆಗೆ ಸಹ ವಹಿಸಲಾಗಿತ್ತು. ಸದ್ಯ ಇದೇ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜೀವ ಪಡೆಯಲು ಹೊರಟಿದ್ದು. ವಿರೋಧ ಪಕ್ಷವಾದ ಕಾಂಗ್ರೆಸ್​ನವರು ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ.

ಮಾಜಿ ಶಾಸಕ ಸತೀಶ್ ಸೈಲ್ ಅವರು ಮಾತನಾಡಿದರು

ಸಿಬಿಐ ತನಿಖೆ ಪ್ರಾರಂಭಿಸಿ ಐದು ವರ್ಷವಾದರೂ ಇನ್ನೂ ಆರೋಪಿಗಳನ್ನ ಪತ್ತೆಹಚ್ಚಿಲ್ಲ. ಬಿಜೆಪಿಗರು ಈ ಬಾರಿ ಸಹ ಇದೇ ವಿಚಾರವನ್ನ ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಪರೇಶ್ ಮೇಸ್ತ ಸಾವಿನ ಹಿಂದೆ ಯಾರು ಇದ್ದಾರೆ? ಎಂದು ಸ್ಪಷ್ಟಪಡಿಸಲಿ, ಇಲ್ಲ ಅಸಹಜ ಸಾವಾಗಿದ್ದರೆ ಅಸಹಜ ಎಂದು ಘೋಷಿಸಲಿ ಎನ್ನುವ ಆಗ್ರಹವನ್ನ ಕಾಂಗ್ರೆಸ್ ನಾಯಕರು ಮಾಡಲು ಹೊರಟಿದ್ದಾರೆ.

ಇನ್ನು ಪರೇಶ್ ಮೇಸ್ತ ಸಾವಿನ ನಂತರ ಮಣಿಪಾಲಿನ ವೈದ್ಯರು ಹೊನ್ನಾವರಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಸದ್ಯ ಮರಣೋತ್ತರ ಪರೀಕ್ಷೆ ವರದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಸಹಜ ಸಾವು ಎಂದು ವರದಿಯಲ್ಲಿದೆ. ಆದರೂ ಬಿಜೆಪಿ ಇದನ್ನ ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ.

ಬಿಜೆಪಿಗರ ವಿರುದ್ಧ ಕಿಡಿ: ಮಣಿಪಾಲ್ ವೈದ್ಯರೇ ಸುಳ್ಳು ಮರಣೋತ್ತರ ಪರೀಕ್ಷೆ ವರದಿ ನೀಡಿದ್ದರೆ ಅವರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲಿ. ಅದನ್ನ ಬಿಟ್ಟು ಪ್ರಕರಣ ಇನ್ನು ಜೀವಂತ ಇಟ್ಟು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿಗರ ವಿರುದ್ಧ ಕಿಡಿಕಾರಲು ಪ್ರಾರಂಭಿಸಿದ್ದಾರೆ.

ಕೆಲ ದಿನದ ಹಿಂದೆ ಬಿಜೆಪಿ ನಾಯಕರು ಪರೇಶ್ ಮೇಸ್ತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆಯಲ್ಲಿ ಸಾಕ್ಷಿ ನಾಶ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರನ್ನೇ ಮೂರನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿಗರು ಸುಖಾಸುಮ್ಮನೇ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕೈ ನಾಯಕರು ಕಿಡಿಕಾರಿದ್ದಾರೆ.

ಮತ್ತೆ ಜೀವ ಪಡೆದ ಪರೇಶ್​ ಮೆಸ್ತಾ ಪ್ರಕರಣ: ಒಟ್ಟಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಜಿಲ್ಲೆಯಲ್ಲಿ ಮತ್ತೆ ಪರೇಶ್ ಮೇಸ್ತ ಪ್ರಕರಣ ಜೀವ ಪಡೆದಿದೆ. ಕಳೆದ ಬಾರಿ ಪ್ರಕರಣದ ಲಾಭ ಪಡೆದಿದ್ದ ಬಿಜೆಪಿಗೆ ಇನ್ನೂ ಪ್ರಕರಣ ಇತ್ಯರ್ಥ ಮಾಡದಿರುವುದು ಈ ಬಾರಿ ಹಿನ್ನಡೆಯಾಗಲಿದೆಯೇ ಇಲ್ಲವೋ ಅನ್ನುವುದನ್ನ ಕಾದು ನೋಡಬೇಕಾಗಿದೆ.

ಓದಿ: ವಕ್ಫ್ ಬೋರ್ಡ್​ಗೆ ಪರೇಶ ಮೆಸ್ತಾ ಪ್ರಕರಣದ ಆರೋಪಿ ನೇಮಕ: ವಿರೋಧದ ಬೆನ್ನಲ್ಲೇ ಆದೇಶಕ್ಕೆ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.