ಕರಾವಳಿಯಲ್ಲಿ ಕಳೆ ಕಟ್ಟಿದ ಹೊಸ್ತುಹಬ್ಬ: ಹೊಸ ಫಲಕ್ಕೆ ಪೂಜೆ ಸಲ್ಲಿಸಿ ಮನೆ ತುಂಬಿಸಿಕೊಂಡ ರೈತರು!

author img

By

Published : Oct 16, 2021, 6:39 PM IST

ಕರಾವಳಿಯಲ್ಲಿ ಕಳೆ ಕಟ್ಟಿದ ಹೊಸ್ತುಹಬ್ಬ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ದಸರಾ, ಗಂಗಾಷ್ಠಮಿ ಸಂದರ್ಭದಲ್ಲಿ ಹೊಸ್ತಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ತಲೆ ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಬ್ಬ ಹರಿದಿನಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕುಮಟಾದ ಬರ್ಗಿಯಲ್ಲಿ ಆಚರಿಸಲಾಗುವ ಈ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟತೆ ಹೊಂದಿದೆ.

ಕಾರವಾರ: ಮಳೆಗಾಲ ಮುಗಿಯುವ ಹೊತ್ತಿಗೆ ತೆನೆಯೊಡೆದು ಬರುವ ಹೊಸ ಫಲವನ್ನು ಮನೆಗೆ ತರುವ ಕ್ಷಣವನ್ನು ಹೊಸ್ತಿನ ಹಬ್ಬವಾಗಿ ಕರಾವಳಿ ಭಾಗಗಳಲ್ಲಿ ಆಚರಿಸಲಾಗುತ್ತದೆ. ಒಂದೊಮ್ಮೆ ಈ ಹಬ್ಬ ಆಚರಣೆ ಆಗದೇ ಇದ್ದಲ್ಲಿ ಗ್ರಾಮದಲ್ಲಿ ಮತ್ಯಾವ ಹಬ್ಬವೂ ನಡೆಯುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ಇಂದು ಊರಿಗೆ ಊರೇ ಒಂದಾಗಿ ಗದ್ದೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆಗಳನ್ನು ಮನೆ ತುಂಬಿಸಿಕೊಳ್ಳುವ ಮೂಲಕ ಭಿನ್ನವಾಗಿ ಆಚರಿಸಿದ್ದಾರೆ.

ಕರಾವಳಿಯಲ್ಲಿ ಕಳೆ ಕಟ್ಟಿದ ಹೊಸ್ತುಹಬ್ಬ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ದಸರಾ, ಗಂಗಾಷ್ಠಮಿ ಸಂದರ್ಭದಲ್ಲಿ ಹೊಸ್ತಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ತಲೆ ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಬ್ಬ ಹರಿದಿನಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕುಮಟಾದ ಬರ್ಗಿಯಲ್ಲಿ ಆಚರಿಸಲಾಗುವ ಈ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ.

ಮಳೆಗಾಲ ಮುಗಿಯುವ ಹೊತ್ತಲ್ಲಿ ವಿಶೇಷ ಪೂಜೆ

ಮಳೆಗಾಲ ಮುಗಿಯುವ ಹೊತ್ತಿಗೆ ಹೊಲಗಳಲ್ಲಿ ಫಸಲೊಡೆದ ಫಲವನ್ನು ಮನೆ ತುಂಬಿಸಿಕೊಳ್ಳುವ ಪೂರ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ‌. ಈ ಹಬ್ಬವನ್ನು ಹರಣ ಮುಹೂರ್ತ, ಹೊಸ ಧಾನ್ಯ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಹಬ್ಬದ ದಿನ ವಾದ್ಯಮೇಳದೊಂದಿಗೆ ಜನರು ಹಾಗೂ ಅರ್ಚಕರು ಹೊಸ್ತಿನ ಹಬ್ಬಕ್ಕಾಗಿಯೇ ಮೀಸಲಿಟ್ಟಿರುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಕದಿರು ಹೊತ್ತು ತರುತ್ತಾರೆ. ಇದರಲ್ಲಿ ಊರಿನ ಎಲ್ಲ ಸಮುದಾಯದವರು ಒಟ್ಟಾಗಿಯೇ ಪಾಲ್ಗೊಂಡು ಹಬ್ಬ ಆಚರಣೆ ಮಾಡುವುದು ವಿಶೇಷ.

ಸಾವಿರಾರು ಭಕ್ತರೊಂದಿಗೆ ಮೆರವಣಿಗೆ

ಬರ್ಗಿಯಲ್ಲಿ ಹೊಸ್ತಿನ ಹಬ್ಬದ ವೇಳೆ ಗ್ರಾಮ ದೇವತೆಗಳಾದ ಘಟಬೀರ, ಯಜಮಾನ ದೇವರ ಕಳಸವು ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತದೆ. ಆ ವೇಳೆ, ಕಳಸವನ್ನು ಹೊತ್ತ ಅರ್ಚಕರಿಗೆ ದರ್ಶನವಾಗುತ್ತದೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಿದ ಬಳಿಕ ಎರಡು ಕಳಸಗಳು ಯಜಮಾನ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆಸೀನವಾಗುತ್ತದೆ.

ನಂತರ ಘಟಬೀರ, ಯಜಮಾನ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರು ಮತ್ತು ಗ್ರಾಮದ ಭಕ್ತರು ಸೇರಿ ಹೊಸ್ತಿ ಹಬ್ಬಕ್ಕೆ ಅಂತಾನೆ ಮೀಸಲಾಗಿಟ್ಟಿರುವ ಗದ್ದೆಗೆ ತೆರಳಿ ಗದ್ದೆಗೆ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಗತ್ತೆ.

ಪೂಜೆಯ ನಂತರ ಕೊಯ್ದ ಕದಿರನ್ನು ಪ್ರತಿಯೊಬ್ಬರೂ ತಲೆಯ ಮೇಲೆ ಹೊತ್ತಿಕೊಂಡು ಮನೆಗೆ ಬರತ್ತಾರೆ. ಹೊತ್ತು ತಂದ ಕದಿರನ್ನು ತುಳಸಿ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಿಂದ ತಂದಿರುವ ಕದಿರನ ಜೊತೆ ತಮ್ಮ ತಮ್ಮ ಗದ್ದೆಗೆ ಪೂಜೆ ಸಲ್ಲಿಸಿ, ತಂದಿರುವ ಕದಿರನ್ನು ಸೇರಿಸಿ ಪೂಜೆ ಸಲ್ಲಿಸಿ, ಮನೆ ಬಾಗಿಲಿಗೆ ಹಾಗೂ ರೈತರು ಕೃಷಿ ಉಪಕರಣಗಳಿಗೆ ಕದಿರು ಕಟ್ಟಲಾಗತ್ತೆ.

ಮನೆಯಲ್ಲಿ ಧಾನ್ಯ ಲಕ್ಷ್ಮಿ ನೆಲೆಸಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಬರ್ಗಿಯಲ್ಲಿ ಹೊಸ್ತಿನ ಹಬ್ಬವನ್ನು ಆಚರಿಸದೇ ಹೋದರೆ ಮುಂದೆ ಗ್ರಾಮದಲ್ಲಿ ನಡೆಯಬಹುದಾದ ಸಂಕ್ರಾಂತಿ ಸೇರಿದಂತೆ ಯಾವ ಹಬ್ಬ ಹರಿದಿನಗಳನ್ನು ಗ್ರಾಮದಲ್ಲಿ ಆಚರಿಸಲಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.