ಎನ್​ಟಿಎ ಎಡವಟ್ಟು: ನಿನ್ನೆ ರಾತ್ರಿ ಹಾಲ್​ ಟಿಕೆಟ್​ ಬಿಡುಗಡೆ, ಇಂದು ಪರೀಕ್ಷೆ

author img

By

Published : Oct 1, 2022, 10:55 PM IST

ಎನ್​ಟಿಎ ಎಡವಟ್ಟುm-problem

ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ(NTA) ಯಿಂದ ಮತ್ತೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಎನ್​ಟಿಎ ಇಂದು ಐಚ್ಛಿಕ ಕನ್ನಡ ವಿಷಯದ ಪರೀಕ್ಷೆ ನಡೆಸಿದೆ. ಆದರೆ, ನಿನ್ನೆ ರಾತ್ರಿ ಹಾಲ್​ ಟಿಕೆಟ್​ ಬಿಡುಗಡೆ ಮಾಡಿದ್ದು, ಇದರಿಂದ ದುರದ ಊರಿನಲ್ಲಿ ಪರೀಕ್ಷಾ ಕೇಂದ್ರ ಇದ್ದವರಿಗೆ ಬರೆಯಲು ಸಮಸ್ಯೆಯಾಗಿದೆ.

ಶಿವಮೊಗ್ಗ : ಪ್ರತಿ ಸಲವೂ ಒಂದಲ್ಲ ಒಂದು ಎಡವಟ್ಟು ಮಾಡುವ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ ಹಾಗೂ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಗಳು ಈ ಬಾರಿಯೂ ಕನ್ನಡ ವಿಷಯದ ಸಹಾಯಕ ಪ್ರಾಧ್ಯಪಕ ಆಕಾಂಕ್ಷಿ ಹಾಗೂ ಜೂನಿಯರ್ ರಿಸರ್ಚ್ ಫೆಲೋಷಿಪ್ ಪಡೆದು ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ಕೈಗೊಳ್ಳುವ ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಚಕಾರ ತರಲು ಹೊರಟಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ನಿರಂತರವಾಗಿ ಅನ್ಯಾಯ ಆಗುತ್ತಲೇ ಇದೆ. ಕಳೆದ ಬಾರಿ ಎನ್​ಟಿಎ ನಡೆಸಿದ ನೆಟ್ ಎಕ್ಸಾಂನ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಹಿಂದಿಯಲ್ಲಿ ನೀಡುವ ಮೂಲಕ ಅನ್ಯಾಯ ಮಾಡಿತ್ತು. ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತಲೆದೋರಿ ಅಭ್ಯರ್ಥಿಗಳು ಉತ್ತರಿಸಿದ್ದನ್ನು ಸೇವ್ ಮಾಡಲು ಆಗದೇ ತಾಂತ್ರಿಕ ಸಮಸ್ಯೆ ಉಂಟಾಗಿತ್ತು.

ಬಳಿಕ ಹಲವು ಕಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರ ಪರಿಣಾಮವಾಗಿ ಎನ್​ಟಿಎ ಮರು ಪರೀಕ್ಷೆ ಕೂಡ ನಡೆಸಿತ್ತು. ಈ ವರ್ಷ ಕೂಡ ಎನ್​ಟಿಎ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಇಂದು ಐಚ್ಛಿಕ ಕನ್ನಡ ವಿಷಯದ ಪರೀಕ್ಷೆ ನಡೆಸಿದೆ. ಆದರೆ ಪರೀಕ್ಷೆಗೂ ಒಂದು ವಾರ ಮೊದಲಾದರೂ ಹಾಲ್ ಟಿಕೇಟ್ ನೀಡಬೇಕಿದ್ದ ಎನ್​ಟಿಎ ಸೆಪ್ಟೆಂಬರ್ 30ರ ತಡರಾತ್ರಿವರೆಗೂ ಹಾಲ್ ಟಿಕೆಟ್​ ನೀಡಿದ್ದರಿಂದಾಗಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ.

ಎನ್​ಟಿಎ ಪರೀಕ್ಷೆಗೆ ಅರ್ಜಿ ಆಹ್ವಾನಿಸುವ ವೇಳೆಯಲ್ಲೇ ಪರೀಕ್ಷಾ ಕೇಂದ್ರಗಳ ಆಯ್ಕೆಗೆ ಅವಕಾಶ ನೀಡಿರುತ್ತದೆ. ಆದರೆ, ಕೊನೆ ಕ್ಷಣದಲ್ಲಿ ಹಾಲ್ ಟಿಕೆಟ್ ಸಿಗುವುದರಿಂದಾಗಿ ವಿದ್ಯಾರ್ಥಿಗಳು ದೂರದ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಿಗೆ ಹೋಗಲಾರದೇ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ. ಇನ್ನೊಂದೆಡೆ ಬಹುತೇಕ ವಿದ್ಯಾರ್ಥಿಗಳಿಗೆ ಎನ್​ಟಿಎ ವೆಬ್ ಸೈಟ್​ನಲ್ಲಿ ಹಾಲ್ ಟಿಕೆಟ್ ದೊರಕುತ್ತಿಲ್ಲ.

ಕೆಲವು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಬಿಟ್ಟಿದ್ದರೂ ಅದರಲ್ಲಿ ಪರೀಕ್ಷಾ ದಿನಾಂಕ, ಸ್ಥಳ, ಸಮಯ ಯಾವುದೂ ಕೂಡ ನಮೂದಾಗಿಲ್ಲ. ಇದು ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಜೂನಿಯರ್ ಫೆಲೋಷಿಪ್ ಪಡೆದು ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಎಚ್​ಡಿ ಅಧ್ಯಯನ ಮಾಡಬೇಕು ಎಂಬ ಮಹದಾಸೆಯಿಂದ ಕಳೆದ ಒಂದು ವರ್ಷದಿಂದ ಕಷ್ಟಪಟ್ಟು ಓದಿದ್ದ ವಿದ್ಯಾರ್ಥಿಗಳು ಯುಜಿಸಿ ಮತ್ತು ಎನ್​ಟಿಎ ಎಡವಟ್ಟಿನಿಂದಾಗಿ ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ. ಕೂಡಲೇ ಮರು ಪರೀಕ್ಷೆ ನಡೆಸುವ ಮೂಲಕ ಕನ್ನಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಇದನ್ನೂ ಓದಿ : ನೀಟ್​ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಶೂನ್ಯ ಅಂಕ: ಹೈಕೋರ್ಟ್​ ಮೆಟ್ಟಿಲೇರಿದ ಲಿಪಾಕ್ಷಿ ಪಾಟಿದಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.