ಈಡಿಗ ಹಕ್ಕೊತ್ತಾಯ ಸಮಾವೇಶ ಹಾಗೂ ಸಭೆಗೆ ನನ್ನ ಸಹಮತವಿಲ್ಲ: ಕಾಗೋಡು ತಿಮ್ಮಪ್ಪ

author img

By

Published : Jan 21, 2023, 10:31 PM IST

Kagodu Thimmappa reaction on ediga conference

ಶಿವಮೊಗ್ಗದಲ್ಲಿ ನಡೆಯಲಿರುವ ಈಡಿಗ ಹಕ್ಕೊತ್ತಾಯ ಸಮಾವೇಶ ಹಾಗೂ ಸಭೆಗೆ ನನ್ನ ಸಹಮತವಿಲ್ಲ - ಸುಮಾರು 19,000 ಜನರಿಗೆ ನಾನು ಕಂದಾಯ ಸಚಿವನಾಗಿದ್ದಾಗ ಹಕ್ಕುಪತ್ರಗಳನ್ನು ಕೊಟ್ಟಿದ್ದೇನೆ - ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಹೇಳಿಕೆ

ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ಭಾನುವಾರ ಶಿವಮೊಗ್ಗದಲ್ಲಿ ನಡೆಯಲಿರುವ ಈಡಿಗ ಹಕ್ಕೊತ್ತಾಯ ಸಮಾವೇಶ ಹಾಗೂ ಸಭೆಗೆ ನನ್ನ ಸಹಮತವಿಲ್ಲ. ನಾನು ಜಾತಿವಾದಿ ಅಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಹೇಳಿದರು. ಶಿವಮೊಗ್ಗದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಳುಗಡೆ ರೈತರಿಗೆ ಎಲ್ಲಿ ಭೂಮಿ ಮೀಸಲಾಗಿತ್ತೋ ಅಲ್ಲಿ ನೀಡಲಾಗಿತ್ತು. ಆದರೆ ಅವರು ಯಾರೂ ಹೋಗಲಿಲ್ಲ. ಹಾಗಾಗಿ ಮುಳುಗಡೆ ರೈತರಿಗೆ ಭೂಮಿ ಸಿಕ್ಕಿಲ್ಲ ಅಂತ ದೂರುವುದು ತಪ್ಪು ಎಂದರು.

ಭೂಮಿ ನೀಡಿ ನಾನೇ ಆ ಜಾಗಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದೆ. ಆದರೆ ಅಲ್ಲಿ ದನ ಮೇಯಲು ಜಾಗ ಇಲ್ಲ, ಅದಕ್ಕೆ ಜಾಗ ಇಲ್ಲ, ಇದಕ್ಕೆ ಜಾಗ ಇಲ್ಲ ಎಂದು ನಿರಾಕರಿಸಿದ್ದರು. ಅದಕ್ಕಾಗಿ ಎಲ್ಲೆಲ್ಲಿ ಅರಣ್ಯ ಸಿಗುತ್ತೋ ಅಲ್ಲಿ ಸೇರಿಕೊಂಡರು. ಸುಮಾರು 19,000 ಜನರಿಗೆ ನಾನು ಕಂದಾಯ ಸಚಿವನಾಗಿದ್ದಾಗ ಹಕ್ಕುಪತ್ರಗಳನ್ನು ಕೊಟ್ಟಿದ್ದೆ. ಬಾಕಿ ಹಾಗೇ ಇದೆ. ಶರಾವತಿ ಸಂತ್ರಸ್ತರು ಮಾಡಿಕೊಂಡ ವ್ಯವಹಾರ ಹೀಗಿರುವಾಗ ಅದಕ್ಕೆ ನಮ್ಮನ್ನ ಗುರಿ ಮಾಡುವುದು ತಪ್ಪು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಈಡಿಗ ಅಭಿವೃದ್ಧಿ ನಿಗಮ, ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ, ಹಾಗೂ ಶರಾವತಿ ಸಂತ್ರಸ್ತರ ಹಕ್ಕುಗಳಿಗಾಗಿ ನಾಳೆ ಬೃಹತ್ ಹೋರಾಟ ಹಮ್ಮಿಕೊಂಡಿರುವ ವಿಚಾರವಾಗಿ ಮಾತನಾಡಿದ ಕಾಗೋಡು ತಿಮ್ಮಪ್ಪ, ಈ ಹೋರಾಟಕ್ಕೆ ನನ್ನ ಸಹಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ಒಂದು ಜಾತಿಗೋಸ್ಕರ ನಾವು ಬದುಕಿಲ್ಲ: ಜಾತಿ ನಿಗಮಗಳನ್ನ ಮಾಡ್ತಾ ಹೋದರೆ ಎಲ್ಲಾ ಜಾತಿಗಳು ನಿಗಮ ಬೇಕು ಅಂತ ಕೇಳ್ತಾರೆ. ನಾನು ಹಾಗೆಲ್ಲಾ ಕೇಳಲು ಸಾಧ್ಯವಿಲ್ಲ. ನಾವು ಹೋರಾಟ ಮಾಡಿದ್ದು ಬರೀ ಜಾತಿ ಕಾರಣಕ್ಕಾಗಿ ಅಲ್ಲ. ಎಲ್ಲಾ ವರ್ಗದ ಜನರಿಗೆ ಅದರಲ್ಲೂ ಹಿಂದುಳಿದ ಪರಿಶಿಷ್ಟ, ಜಾತಿ ಪಂಗಡದ ಸಮುದಾಯಗಳಿಗೆ ಸವಲತ್ತುಗಳು ಸಿಗಬೇಕು ಅಂತ ಹೋರಾಟ ಮಾಡಿದ್ದೇವೆ. ಆದರೆ ಯಾವುದೇ ಒಂದು ಜಾತಿಗೋಸ್ಕರ ನಾವು ಬದುಕಿಲ್ಲ ಎಂದು ತಿಮ್ಮಪ್ಪ ತಿಳಿಸಿದರು.

ನಾನು ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ಸುಳ್ಳು ಹಬ್ಬಿಸಲು ಹೊರಟಿದ್ದಾರೆ: ಕಾಗೋಡು ತಿಮ್ಮಪ್ಪ ಜಾತಿವಾದಿ ಅಂತ ಬೇರೆಯವರ ಅಂದುಕೊಳ್ಳೋದು ನನಗೆ ಇಷ್ಟ ಇಲ್ಲ. ನನ್ನ ಬೆಂಬಲ ಅಂತಾದರೆ ಅದು ಹೇಗೆ ಬೇಕು ಎಂಬುದರ ಮೇಲೆ ನಿರ್ಧರಿತ. ಎಲ್ಲಾ ಜಾತಿಯವರನ್ನು ಸೇರಿಸಿಕೊಂಡು ಹೊರಾಟ ಮಾಡಲು ಬೇಕಾದರೆ ನಾನು ಅದಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ. ಬರೀ ಮುಳುಗಡೆ ಮುಳುಗಡೆ ಅಂತ ಯಾಕೆ ಹೇಳುತ್ತಿದ್ದಾರೆ. ಅದರಲ್ಲೂ ನಾನು ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ಸುಳ್ಳು ಹಬ್ಬಿಸಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಷ್ಟು ವರ್ಷಗಳ ತನಕ ಬಿಜೆಪಿ ಯಾವುದೇ ಕೆಲಸವನ್ನು ಮಾಡಿಲ್ಲ: ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಹೋರಾಟಗಳು ಬೇಡ, ಇಷ್ಟು ವರ್ಷಗಳ ತನಕ ಬಿಜೆಪಿ ಯಾವುದೇ ಕೆಲಸವನ್ನು ಮಾಡಿಲ್ಲ. ಈಗೇಕೆ ಈ ವಿಷಯಗಳನ್ನು ಜನರ ಮನಸ್ಸಿನಲ್ಲಿ ತುಂಬುತ್ತಿದ್ದಾರೆ. ಇದು ಅನಗತ್ಯ. ಜನರಿಗೆ ನ್ಯಾಯ ಸಿಗಬೇಕು, ನಾನು ಒಪ್ಪುತ್ತೇನೆ. ಆದರೆ ಯಾವುದೋ ಜಾತಿ ಸಂಘಟನೆ ಮೂಲಕ ಹೋರಾಟ ಮಾಡುತ್ತೇವೆ ಅನ್ನೋದನ್ನ ನಾನು ಒಪ್ಪುವುದಿಲ್ಲ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್​ ಒಡೆಯಲು ತೆಲಂಗಾಣ ಸಿಎಂ ಕೆಸಿಆರ್​ ಯಾಕೆ ಹಣ ಕೊಟ್ಟು ಕಳೆದು‌ಕೊಳ್ಳುತ್ತಾರೆ: ಕೆ ಎಸ್​ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.