ಶಿವಮೊಗ್ಗದಲ್ಲೊಂದು ವಿಚಿತ್ರ ಘಟನೆ: ಹಾವು ಹಿಡಿಯಲು ಹೋದಾಗ ಮಹಿಳೆಯರ ಮೈಮೇಲೆ ಬಂದ ನಾಗದೇವತೆ

author img

By

Published : Sep 30, 2022, 5:41 PM IST

ಹಾವು ಹಿಡಿಯಲು ಹೋದಾಗ ಮಹಿಳೆಯರ ಮೈಮೇಲೆ ಬಂದ ನಾಗದೇವತೆ

ಉರಗ ರಕ್ಷಕ ಸ್ನೇಕ್ ಕಿರಣ್ ನಾಗರ ಹಾವು ಹಿಡಿದು ಕಾಡಿಗೆ ಬಿಡಲು ಮುಂದಾದಗ, ಇಬ್ಬರು ಮಹಿಳೆಯರ ಮೇಲೆ ನಾಗದೇವತೆ ಬಂದ ವಿಚಿತ್ರ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ದೇವರು ಬಂದಿದೆ ಎನ್ನಲಾದ ಮಹಿಳೆಯರು ಹಾವನ್ನು ಇಲ್ಲೇ ಬಿಡುವಂತೆ ಹೇಳಿದ್ದು, ಅದರಂತೆ ಹಾವು ಬಿಡಲಾಗಿದೆ.

ಶಿವಮೊಗ್ಗ: ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು ಬಂದಿದೆ ಎನ್ನಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಾಗರ ಹಾವು ಹಿಡಿಯಬಾರದು, ಅದನ್ನು ಅಲ್ಲಿಯೇ ಬಿಡಬೇಕು ಎಂದು ಉರಗ ರಕ್ಷಕ ಸ್ನೇಕ್ ಕಿರಣ್​ ಅವರಿಗೆ ದೇವರು ಮಹಿಳೆಯರ ಮೂಲಕ ಸೂಚನೆ ನೀಡಿದೆ ಎಂದು ಹೇಳಲಾಗ್ತಿದೆ. ನಗರದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಪಕ್ಕದ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ, ಇಂತಹ ಅಪರೂಪದ ಘಟನೆ ನಡೆದಿದೆ.

ಹಾವು ಕಾಡಿಗೆ ಬಿಡಲು ಸನ್ನದ್ಧ: ಒಂದು ಅಡಿ ನಾಗರ ಹಾವು ನರ್ಸರಿಯಲ್ಲಿ ಕಾಣಿಸಿಕೊಂಡಿದೆ ಎಂದು ನಾಗರಾಜ್ ಎಂಬುವವರು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ನರ್ಸರಿಯಲ್ಲಿ ಹುಡುಕಿದಾಗ ಸುಮಾರು ಒಂದು ಅಡಿ ಉದ್ದದ ನಾಗರ ಹಾವು ಸಿಕ್ಕಿದೆ. ಸ್ನೇಕ್ ಕಿರಣ್ ಅವರು ಹಾವು ರಕ್ಷಣೆ ಮಾಡಿ, ಕಾಡಿಗೆ ಕೊಂಡೊಯ್ದು ಬಿಡಲು ಸನ್ನದ್ಧರಾಗಿದ್ದರು.

ಇಬ್ಬರು ಮಹಿಳೆಯರ ಮೈಮೇಲೆ ಬಂದ ದೇವರು: ಸ್ನೇಕ್ ಕಿರಣ್ ಅವರು ಹಾವು ರಕ್ಷಣೆ ಮಾಡುತ್ತಿದ್ದ ವೇಳೆ ನರ್ಸರಿಯಲ್ಲಿದ್ದ ಮಹಿಳೆಯರು ಸುತ್ತುವರಿದು ನೋಡುತ್ತಿದ್ದರು. ಮಹಿಳೆಯರ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರ ಎಂಬ ಮಹಿಳೆಯರ ವರ್ತನೆ ಬದಲಾಯಿತು. ಇಬ್ಬರು ಜೋರಾಗಿ ಕೂಗಿಕೊಂಡರು, ಹಾವಿನಂತೆ ವರ್ತನೆ ಮಾಡಲು ಶುರು ಮಾಡಿದರು. ನೆಲದಲ್ಲಿ ಬಿದ್ದು ಹೊರಳಾಡಿದರು. ಹಾಗಾಗಿ ಅಕ್ಕಪಕ್ಕದಲ್ಲಿದ್ದ ಉಳಿದ ಮಹಿಳೆಯರು ಹೆದರಿಕೊಂಡು ಓಡಿದ್ದಾರೆ.

‘ಹಾವನ್ನು ಅಲ್ಲಿಯೆ ಬಿಟ್ಟುಬಿಡಿ’ ಎಂದು ಮಹಿಳೆಯರು ಹೇಳ ತೊಡಗಿದರು. ಮೈ ಮೇಲೆ ದೇವರು ಬಂದಿದ್ದನ್ನು ಕಂಡು ಸ್ನೇಕ್ ಕಿರಣ್ ಸಹಿತ ಅಲ್ಲಿದ್ದವರು ಆತಂಕಗೊಂಡಿದ್ದಾರೆ. ಸ್ನೇಕ್ ಕಿರಣ್ ಹಿಡಿದಿರುವ ಹಾವನ್ನು ಎಲ್ಲೂ ಕೊಂಡೊಯ್ಯಬಾರದು. ಇಲ್ಲಿಯೇ ಸಮೀಪದಲ್ಲಿರುವ ಜಾಗದಲ್ಲಿ ಬಿಡಬೇಕು ಎಂದು ಸೂಚನೆ ನೀಡಿದ್ದಾರೆ. ಬಳಿಕ ಮಹಿಳೆಯರು ಹೇಳಿದ ಜಾಗದಲ್ಲೇ ಸ್ನೇಕ್ ಕಿರಣ್ ಅವರು ನಾಗರ ಹಾವನ್ನ ಬಿಟ್ಟಿದ್ದಾರೆ.

ಅಲ್ಲದೇ ಮಹಿಳೆಯರಿಗೆ ಪೂಜೆ ಮಾಡಿದ್ದಾರೆ. ಇದಾದ ಮೇಲೆ ಮಹಿಳೆಯರು ಶಾಂತವಾಗಿದ್ದಾರೆ. ಹಾವು ಹಿಡಿದ ಸಂದರ್ಭ ಮೈಮೇಲೆ ದೇವರು ಬಂದಿದ್ದನ್ನು ಕಂಡು ಸ್ನೇಕ್ ಕಿರಣ್, ನಾಗರಾಜ್ ಮತ್ತು ಮಹಿಳೆಯರು ಕೆಲಕಾಲ ಆತಂಕಗೊಂಡಿದ್ದರು.

ಈ ಬಗ್ಗೆ ಸ್ನೇಕ್ ಕಿರಣ್ ಹೇಳಿದ್ದೇನು?: ಎಂದಿನಂತೆ ಹಾವು ಹಿಡಿದ ಮೇಲೆ ಹಾವಿನ ಬಗ್ಗೆ ಮಾಹಿತಿ ನೀಡುವಾಗ ನರ್ಸರಿಯಲ್ಲಿ ಕೆಲಸ ಮಾಡುವ ಓರ್ವ ಮಹಿಳೆಯ ಮೈ ಮೇಲೆ ಏಕಾಏಕಿ ದೇವರು ಬಂದಿದೆ. ಈ ಮಹಿಳೆ ಹಾವು ಬಿಟ್ಟು ಬಿಡುವಂತೆ ಹೇಳುತ್ತಿದ್ದಂತೆ ಇನ್ನೊಬ್ಬ ಮಹಿಳೆ ಸಹ ದೇವರು ಬಂದಂತೆ ಹಾವಿನ ರೀತಿ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾರೆ.

ಅದು ನಿಮಗೆ ಏನೂ ಮಾಡಲ್ಲ, ಅದನ್ನು ಬಿಟ್ಟು ಬಿಡಿ ಎಂದು ಜೋರಾಗಿ ಹೇಳುತ್ತಿದ್ದಂತಯೇ ಸ್ನೇಕ್ ಕಿರಣ್ ಬಾಟಲಿಯಲ್ಲಿ ಹಿಡಿದಿದ್ದ ಹಾವನ್ನು ನರ್ಸರಿ ಪಕ್ಕದಲ್ಲಿಯೇ ಬಿಟ್ಟು ಬಂದಿದ್ದಾರೆ.

ಈ ವೇಳೆ ಮಾತನಾಡಿದ ನರ್ಸರಿ ಮೇಲ್ಸ್ತುವಾರಿ ಶಿವಣ್ಣ, ಇಲ್ಲಿ ಹಾವು ಕಾಣಿಸಿಕೊಂಡ ಕಾರಣ ಅವರನ್ನು ಕರೆಸಿದ್ದೆವು. ನಿತ್ಯ ಕೆಲಸಕ್ಕೆ ಬರ್ತಾರೆ. ಇದರಿಂದ ಯಾರಿಗೂ ತೊಂದರೆ ಆಗಬಾರದು ಎಂದು ಹಾವು ಹಿಡಿಯಲು ಕರೆಸಲಾಗಿತ್ತು.ಇಂದು ನಮಗೆ ವಿಶೇಷ ಅನುಭವವಾಗಿದೆ ಎಂದಿದ್ದಾರೆ.

ಹಾವು ಬಿಟ್ಟು ಬಂದ ನಂತರ ಮೈ ಮೇಲೆ ದೇವರು ಬಂದ ಮಹಿಳೆಯು ನಿನಗೆ ನಾನು ಏನೂ ಮಾಡಲ್ಲ. ನಿನಗೆ ಮುಂದೆ ಎಲ್ಲ ಒಳ್ಳೆಯದಾಗುತ್ತದೆ. ನೀನು ಏನ್ ಅಂದುಕೊಳ್ಳುತ್ತಿಯಾ ಅದೆಲ್ಲಾ ಆಗುತ್ತದೆ ಎಂದು ಹೇಳಿ ಕರ್ಪೂರ ತಿಂದಿದ್ದಾರೆ. ಇದರಿಂದ ಗಲಿಬಿಲಿ ಗೊಂಡ ಸ್ನೇಕ್ ಕಿರಣ್ ಮಾರಿಕಾಂಬ ದೇವಿ ವನದ ಕಡೆ ಬಂದು ದೇವಿಗೆ ದೀರ್ಘದಂಡ ನಮಸ್ಕಾರ ಹಾಕಿ, ನಾನು ಹಾವಿನ ರಕ್ಷಣೆಗೆ ಇರೋದು, ನಾವೆಲ್ಲಾರು ಹಾವನ್ನು ರಕ್ಷಿಸೋಣ ಎಂದು ಕೇಳಿ ಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.