ರಾಮನಗರ: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಪ್ರೇಯಸಿಗೆ ಚಾಕುವಿನಿಂದ ಇರಿದು ತಾನೂ ಕೂಡ ಚಾಕುವಿನಿಂದ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ನಗರದ ಕೋಟೆ ಬಡಾವಣೆಯ ವರದರಾಜ ಸ್ವಾಮಿ ದೇವಾಲಯದ ಬಳಿಯ ಮನೆಯೊಂದರಲ್ಲಿ ಘಟನೆ ನಡೆದಿದ್ದು, ಕೋಟೆ ಬಡಾವಣೆಯ ಬಾಡಿಗೆ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದ ಮೇಘನಾ ಚಾಕು ಇರಿತಕ್ಕೆ ಒಳಗಾದ ಯುವತಿಯಾಗಿದ್ದಾರೆ. ಚಾಕು ಇರಿದ ಯುವಕ ರಾಮನಗರದ ವೆಂಕಟೇಶ್ ಎಂದು ತಿಳಿದು ಬಂದಿದ್ದು, ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಭಗ್ನ ಪ್ರೇಮಿ ಚಾಕುವಿನಿಂದ ಯುವತಿಯ ಹೊಟ್ಟೆಗೆ ಹಾಗೂ ಬೆನ್ನಿನ ಭಾಗಕ್ಕೆ ಇರಿದು ತಾನು ಕೂಡ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಯುವಕ - ಯುವತಿ ಕಳೆದ ಎರಡು - ಮೂರು ವರ್ಷಗಳ ಹಿಂದೆ ನಗರದ ಮೊಬೈಲ್ ಶೋರೂಂ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಒಬ್ಬರಿಗೊಬ್ಬರು ಪರಿಚಯವಾಗಿತ್ತು. ಯುವಕ ವೆಂಕಟೇಶ್, ಮೇಘನಾ ಬಳಿ ಪ್ರೇಮ ನಿವೇದನೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಯುವತಿ ಮೊಬೈಲ್ ಶೋರೂಂ ನಲ್ಲಿ ಕೆಲಸ ಬಿಟ್ಟು ಬೆಂಗಳೂರಿನ ಜ್ಯುವೆಲರಿ ಶಾಪ್ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ.
ಯುವತಿ ಮನೆಯಲ್ಲಿರುವ ವಿಚಾರ ತಿಳಿದು ಮನೆಗೆ ತೆರಳಿದ ಯುವಕ ವೆಂಕಟೇಶ್ ಯುವತಿ ಮೇಘನಾಗೆ ಮೂರು ನಾಲ್ಕು ಬಾರಿ ಚಾಕುವಿನಿಂದ ಇರಿದು ತಾನು ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರ ಸ್ಥಿತಿಯು ಚಿಂತಾಜನಕವಾಗಿತ್ತು. ಹೀಗಾಗಿ ಅವರಿಬ್ಬರಿಗೂ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಚನ್ನಪಟ್ಟಣ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ಬೆಂಗಳೂರು: ಹಾಡಹಗಲೇ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ