ಸ್ನೇಹಿತರ ಮಧ್ಯೆ ಬೈಕ್ ಓಡಿಸುವ ಸಲುವಾಗಿ ಗಲಾಟೆ : ಗೆಳೆಯನ ಕೊಂದು ನದಿಗೆ ಎಸೆದ ಕಿರಾತಕರು

author img

By

Published : Dec 7, 2021, 10:56 PM IST

ಗೆಳೆಯನನ್ನ ಕೊಂದು ನದಿಗೆ ಎಸೆದ ಕಿರಾತಕರು

ಬೈಕ್ ಓಡಿಸುವ ಸಲುವಾಗಿ ಮೂವರು ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆ ವಿಕೋಪಕ್ಕೆ ತಿರುಗಿ ಓರ್ವನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಮನಗರ: ಸ್ನೇಹಿತರ ನಡುವೆ ಬೈಕ್ ಓಡಿಸುವ ಸಲುವಾಗಿ ಮಾತಿನ ಚಕಮಕಿಯಲ್ಲಿ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಣೇಶ್ ಎಂಬಾತ ಕೊಲೆಗೀಡಾಗಿರುವ ವ್ಯಕ್ತಿ.

ಗಣೇಶ್, ಸುನೀಲ್, ಗಿರೀಶ್ ಬೆಂಗಳೂರು ರಾಜಗೋಪಾಲ ನಗರದಲ್ಲಿ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದರು. ಸೋಮವಾರ ರಾತ್ರಿ ಮದ್ದೂರಿನ ಊರಬ್ಬಕ್ಕೆಂದು ಹೊರಡುವ ವೇಳೆ ಕುಡಿದ ಅಮಲಿನಲ್ಲಿದ್ದ ಸ್ನೇಹಿತರು ಬೈಕ್ ಓಡಿಸುವ ವಿಚಾರವಾಗಿ ಎರಡು ಮೂರು ಕಡೆ ಜಗಳ ಮಾಡಿಕೊಂಡಿದ್ದಾರೆ.

ಸುನೀಲ್ ಬೈಕ್​​​ನ್ನ ಗಣೇಶ್ ತಾನೇ ಓಡಿಸಬೇಕು ಎಂದು ಪಟ್ಟುಹಿಡಿದಿದ್ದ. ಹೀಗಾಗಿ ಆತನಿಗೆ ಬೈಕ್ ಓಡಿಸಲು ಕೊಟ್ಟಿದ್ದಾರೆ. ಈ ವೇಳೆ ಗಣೇಶ್​​ ಎರಡು ಕಡೆ ಬೈಕ್ ಬೀಳಿಸಿದ್ದಾನೆ. ಇದರಿಂದ ಕೋಪಗೊಂಡ ಸುನಿಲ್, ಮಾರೇನಹಳ್ಳಿ ಬಳಿ ತಲೆಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಬಳಿಕ ಹೆಗಲ ಮೇಲೆ ಮೃತದೇಹವನ್ನ ಸಾಗಿಸಿ ಅರ್ಕಾವತಿ ನದಿಗೆ ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇದನ್ನ ಗಮನಿಸಿದ ಸಾರ್ವಜನಿಕರು ಪೊಲೀಸರರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣವೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುನೀಲ್, ಗಿರೀಶ್ ಬಂಧಿತ ಆರೋಪಿಗಳು. ಸದ್ಯ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.