ರಾಮನಗರದಲ್ಲಿ ಮಹಿಳೆ ಕೊಂದು ಚಿನ್ನಾಭರಣ ದೋಚಿದ ಆರೋಪಿಗಳು..

author img

By

Published : Sep 12, 2022, 9:45 PM IST

ಕೆಂಪಮ್ಮ

ರಾಮನಗರ ತಾಲೂಕಿನ ಅಚ್ಚಲು ಗ್ರಾಮದಲ್ಲಿ ಕೆಂಪಮ್ಮ ಎಂಬುವವರನ್ನು ಅದೇ ಗ್ರಾಮದ ಯುವಕರು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ರಾಮನಗರ: ಕಾಡಿನಲ್ಲಿ ಮೇಯಲು ಬಿಟ್ಟಿದ್ದ ದನಗಳನ್ನು ಮನೆಗೆ ವಾಪಸ್ ಕರೆ ತರಲು ಹೋಗಿದ್ದ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಕೆಂಪಮ್ಮ (49) ಎಂಬುವರನ್ನು ಅದೇ ಗ್ರಾಮದ ಯುವಕರು ಸೇರಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 8 ರಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಲಿಂಗರಾಜು (19) ಮತ್ತು ರವಿ (20) ಹಾಗೂ ಅಪ್ರಾಪ್ತ ಬಾಲಕನೊಬ್ಬ ಸೇರಿಕೊಂಡು ಕೆಂಪಮ್ಮ ಅವರನ್ನು ಕೊಲೆ ಮಾಡಿ 51 ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಕೊಟ್ಟಿದ್ದ ಸಾಲವೇ ಕೊಲೆಗೆ ಕಾರಣವಾಯ್ತು: ಕೊಲೆಯಾದ ಕೆಂಪಮ್ಮ ಅಚ್ಚಲು ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿದ್ದು, ಈ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದರು. ಇವರಲ್ಲಿ ಲಿಂಗರಾಜು ಈಕೆಯ ಬಳಿ 600 ರೂ ಸಾಲ ಮಾಡಿಕೊಂಡಿದ್ದನು. ಅಲ್ಲದೇ ಹೊರಗೂ ತನ್ನ ಚಟಗಳಿಗಾಗಿ 15 ಸಾವಿರ ರೂ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಮತ್ತೊಬ್ಬ ಆರೋಪಿಯೂ ಸಹ ಸಾಲದ ಸುಳಿಯಲ್ಲಿ ಸಿಲುಕಿದ್ದ. ಸೆ. 8 ರಂದು ಅಂಗಡಿಗೆ ಹೋಗಿದ್ದ ಲಿಂಗರಾಜುವಿಗೆ ಕೆಂಪಮ್ಮ ಹಣ ವಾಪಾಸ್ ಕೊಡುವಂತೆ ಒತ್ತಾಯಿಸಿದ್ದರು.

ಇದರಿಂದ ಕುಪಿತಗೊಂಡ ಲಿಂಗರಾಜು ಮತ್ತು ಇತರರು ಹಸು ಕರೆತರಲು ಹೋಗಿದ್ದ ಕೆಂಪಮ್ಮ ಎಂಬಾಕೆಯನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಅರ್ಕಾವತಿ ನದಿ ದಡದಲ್ಲಿ ಬಿಟ್ಟು ಹೋಗಿದ್ದರು.

ಕೊಲೆ ಮಾಡಿದ ನಂತರ ಚೀಲದಲ್ಲಿ ಕೆಂಪಮ್ಮ ಶವವನ್ನು ಕಟ್ಟಿ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿಯಲ್ಲಿ ಎಸೆದು ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಯೋಜನೆಯನ್ನು ಆರೋಪಿಗಳು ಮಾಡಿದ್ದರು. ಆದರೆ, ಮತ್ತೊಂದು ದಡದಲ್ಲಿ ಕೆಲವರು ಮೀನು ಹಿಡಿಯುತ್ತಿದ್ದರು. ಒಂದು ವೇಳೆ ಚೀಲವನ್ನು ನದಿಗೆ ಎಸೆದರೆ ಖಂಡಿತವಾಗಿ ಸಿಕ್ಕಿ ಬೀಳುತ್ತೇವೆ ಎನ್ನುವ ಆತಂಕದಲ್ಲಿ ನದಿಯ ಪಕ್ಕದಲ್ಲಿಯೇ ಬಿಟ್ಟು ಪರಾರಿ ಆಗಿದ್ದರು.

ತಾಳಿ ಕಿತ್ತುಕೊಂಡು ಹೋಗಿರಲಿಲ್ಲ: ಸಾಲ ತೀರಿಸುವ ಸಲುವಾಗಿಯೇ ಕೊಲೆ ಮಾಡಿ ಒಡವೆ ದೋಚಿದ್ದ ಆರೋಪಿಗಳು ತಾಳಿಯನ್ನು ಮಾತ್ರ ಕದಿಯುವ ಮನಸ್ಸು ಮಾಡಿರಲಿಲ್ಲ. ತಾಳಿ ಕದಿಯುವುದು ಮಹಾ ಪಾಪ ಎನ್ನುವ ಕಾರಣಕ್ಕೆ ಚಿನ್ನದ ಸರ ಕದ್ದರೂ ತಾಳಿಯನ್ನು ಅಲ್ಲಿಯೇ ಉಳಿಸಿದ್ದರು. ಒಟ್ಟಾರೆ ಕದ್ದಿದ್ದ 21 ಗ್ರಾಂ ಚಿನ್ನವನ್ನು ಮೂವರು ಹಂಚಿಕೆ ಮಾಡಿಕೊಂಡಿದ್ದರು ಎಂದು ರಾಮನಗರದ ಎಸ್​ಪಿ ಸಂತೋಷ ಬಾಬು ತಿಳಿಸಿದ್ದಾರೆ.

ಓದಿ: ವಿಜಯನಗರ: ಜಲಾಶಯದಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕರ ಶವ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.