ದಸರಾ ಗಜಪಡೆಗೆ ವಿಶೇಷ ಆಹಾರ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್​

author img

By

Published : Sep 24, 2021, 5:29 PM IST

Special food given for elephants

ನಾಡಹಬ್ಬ ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ 8 ಆನೆಗಳಿಗೆ ವಿಶೇಷವಾದ ಆಹಾರ ನೀಡಲಾಗುತ್ತಿದೆ..

ಮೈಸೂರು : ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ 8 ಗಜಪಡೆಗೆ ಪ್ರತಿದಿನ ವಿಶೇಷ ಆಹಾರ,ತಾಲೀಮು ಹಾಗೂ ಮಜ್ಜನದೊಂದಿಗೆ ಜಂಬೂ ಸವಾರಿಗೆ ಸಿದ್ಧಗೊಳಿಸಲಾಗುತ್ತಿದೆ.

ದಸರಾ ಗಜಪಡೆಗೆ ವಿಶೇಷ ಆಹಾರ

ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ 8 ಆನೆಗಳು ಆಗಮಿಸಿವೆ. ಅಭಿಮನ್ಯು, ಧನಂಜಯ, ವಿಕ್ರಮ,‌ಗೋಪಾಲಸ್ವಾಮಿ, ಅಶ್ವತ್ಥಾಮ, ಕಾವೇರಿ, ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ಈ ಬಾರಿಯ ದಸರಾದಲ್ಲಿ ಭಾಗಿಯಾಗಲಿವೆ.

ಹೀಗಾಗಿ, ಆನೆಗಳಿಗೆ ಪ್ರತಿದಿನ ವಿಶೇಷ ಆಹಾರವಾಗಿ ಹೆಸರುಕಾಳು, ಉದ್ದಿನಕಾಳು, ಗೋಧಿ, ಕುಸಲಕ್ಕಿಯೊಂದಿಗೆ ಬೆಣ್ಣೆ ತರಕಾರಿ ಬೆರೆಸಿ ಕೊಡಲಾಗುತ್ತದೆ. ಜೊತೆಗೆ ಭತ್ತ, ಹಿಂಡಿ, ಕಾಯಿ ಬೆಲ್ಲ, ಹಸಿ‌ಹುಲ್ಲು, ಆಲಮರದ ಸೊಪ್ಪು, ಒಣಹುಲ್ಲು ನೀಡಲಾಗುತ್ತದೆ.

ಅಂಬಾರಿ‌ ಹೋರುವ ಆನೆಗೆ ವಿಶೇಷ ಆಹಾರ : ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಿಗೆ ವಿಶೇಷವಾಗಿ ಕುಸುರಿ ಆಹಾರ ನೀಡಲಾಗುತ್ತದೆ. ಗರಿಕೆ ಹುಲ್ಲಿನಲ್ಲಿ ಗ್ಲೂಕೋಸ್ ಪೌಡರ್,ಅವಲಕ್ಕಿ,ಬೆಲ್ಲ,ತೆಂಗಿನಕಾಯಿಯನ್ನು ಕಟ್ಟಿ ಉಂಡೆ ಆಕಾರದಲ್ಲಿ ನೀಡುವುದೇ ಕುಸುರಿ ಆಹಾರವಾಗಿದೆ. ವಿಜಯದಶಮಿಯ ದಿನ ಈ‌ ಆಹಾರವನ್ನು ನೀಡಲಾಗುತ್ತದೆ.

ಮೂರು ಬಾರಿ ಮಜ್ಜನ : ಬಿಸಿಲು ಹೆಚ್ಚಾಗಿರುವುದರಿಂದ ಆನೆಗಳಿಗೆ ದಿನಕ್ಕೆ ಮೂರು ಬಾರಿ ಸ್ನಾನ ಮಾಡಿಸಲಾಗುತ್ತದೆ. ಬೆಳಗ್ಗೆ ಸ್ನಾನ ಮುಗಿಸಿ ಆನೆಗಳನ್ನು ತಾಲೀಮಿಗೆ ಕರೆದೊಯ್ಯಲಾಗುತ್ತದೆ. ತಾಲೀಮು ಮುಗಿದ ಬಳಿಕ ಆನೆಗಳ‌ ಮೈಮೇಲೆ ನೀರು ಹಾಕುತ್ತಾರೆ. ಮತ್ತೆ ಮಧ್ಯಾಹ್ನ 12 ಗಂಟೆಗೆ ಎರಡನೇ ಬಾರಿ ಸ್ನಾನ ಮಾಡಿಸಲಾಗುತ್ತದೆ. ಸಂಜೆ ತಾಲೀಮಿಗೂ ಮುನ್ನಾ ಸ್ನಾನ ಮಾಡಿಸಲಾಗುತ್ತದೆ.

ಈ 8 ಆನೆಗಳು ಸೆ.13 ರಿಂದ ಅ.17 ರವರೆಗೆ ಜಂಬೂಸವಾರಿ ಮುಗಿಸಿ ಎರಡು ದಿನಗಳ ನಂತರ ಮರಳಿ ತಮ್ಮ ತಮ್ಮ ಶಿಬಿರಕ್ಕೆ ಹಿಂದಿರುಗಲಿವೆ. ಆನೆಗಳ ಆಹಾರಕ್ಕಾಗಿಯೇ ಸುಮಾರು 50 ಲಕ್ಷ ರೂ. ಹಣ ಖರ್ಚಾಗಲಿದೆ.

ಇದನ್ನೂ ಓದಿ: ಬೆಂಗಳೂರಿನ ಲೇಕ್ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟ: ಹಲವರಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.