ನಾಡಹಬ್ಬ ದಸರಾಕ್ಕೆ ಸಿದ್ಧತೆ: ಅಕ್ಟೋಬರ್ 1ಕ್ಕೆ ಚಿನ್ನದ‌ ಸಿಂಹಾಸನ ಜೋಡಣೆ

author img

By

Published : Sep 25, 2021, 12:11 PM IST

Updated : Sep 25, 2021, 1:05 PM IST

mysure Dasara

ನಾಡಹಬ್ಬ ದಸರಾಗೆ ಅರಮನೆಯಲ್ಲಿ ಸಿದ್ಧತೆ ಜೋರಾಗಿದೆ. ಅಕ್ಟೋಬರ್ 1 ರಂದು ಅರಮನೆಯ ಸ್ಟ್ರಾಂಗ್ ರೂಂ ನಲ್ಲಿರುವ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್​ಗೆ ತಂದು ಜೋಡಣೆ ಮಾಡಲಾಗುವುದು.

ಮೈಸೂರು: ಶರನ್ನವರಾತ್ರಿ ಧಾರ್ಮಿಕ ಕಾರ್ಯಗಳಿಗೆ ಅರಮನೆಯಲ್ಲಿ ಸಿದ್ಧತೆ ಮುಂದುವರೆದಿದ್ದು, ಅಕ್ಟೋಬರ್ 1 ರಂದು ಅಭಿಜಿತ್ ಲಗ್ನದಲ್ಲಿ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್​ಗಾಗಿ ರತ್ನ ಖಚಿತ ಸಿಂಹಾಸನ ಜೋಡಣೆ ನಡೆಯಲಿದೆ.

ನಾಡಹಬ್ಬ ದಸರಾಗೆ ಅರಮನೆಯಲ್ಲಿ ಸಿದ್ಧತೆ ಜೋರಾಗಿದೆ. ಈ ಮಧ್ಯೆ ಶರನ್ನವರಾತ್ರಿಗೆ ರಾಜಮನೆತನದ ಅರಮನೆಯೊಳಗೆ ರಾಜಮನೆತನದವರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅಕ್ಟೋಬರ್ 1 ರಂದು ಅರಮನೆಯ ಸ್ಟ್ರಾಂಗ್ ರೂಂನಲ್ಲಿರುವ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್​ಗೆ ತಂದು ಜೋಡಣೆ ಮಾಡಲಾಗುವುದು.

ಪ್ರತಿದಿನ ಖಾಸಗಿ ದರ್ಬಾರ್

ನಂತರ ಅಕ್ಟೋಬರ್ 7ರಂದು ಈ‌ ಸಿಂಹಾಸನಕ್ಕೆ ರಾಜ ವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿ, ಸಿಂಹಾಸನಕ್ಕೆ ಸಿಂಹದ ತಲೆ ಜೋಡಿಸುತ್ತಾರೆ. ಬಳಿಕ ಶರನ್ನವರಾತ್ರಿಯ ಪೂಜೆ ಸಲ್ಲಿಸಿ, ಅಕ್ಟೋಬರ್ 7 ರಿಂದ 15 ರ ವರೆಗೆ ಪ್ರತಿ ದಿನ ಖಾಸಗಿ ದರ್ಬಾರ್ ನಡೆಸಲಿದ್ದಾರೆ.‌

ನಾಡಹಬ್ಬ ದಸರಾ

ಸಿಂಹಾಸನ ಜೋಡಣೆಗೂ ಮುನ್ನ ನಡೆಯುವ ಪೂಜೆಗಳು ಯಾವುವು?

ಅಕ್ಟೋಬರ್ 1 ರಂದು ಅರಮನೆಯ ನೆಲಮಳಿಗೆಯಲ್ಲಿರುವ ಸ್ಟ್ರಾಂಗ್ ರೂಂ ಬೀಗ ತೆಗೆಯುವ ಮುನ್ನ ಅರಮನೆಯ ಕಲ್ಯಾಣ ‌ಮಂಟಪದಲ್ಲಿ ಗಣಪತಿ‌ ಹೋಮ , ಚಾಮುಂಡೇಶ್ವರಿ ಪೂಜೆ ಸೇರಿದಂತೆ ಇತರ ಎಲ್ಲ ರೀತಿಯ ಪೂಜಾ ಕೈಂಕರ್ಯಗಳನ್ನು‌‌ ರಾಜ ಪುರೋಹಿತರು ನಡೆಸಲಿದ್ದು, ನಂತರ‌‌ ಹೋಮ‌ ಪೂರ್ಣಾಹುತಿ ಮಾಡಿ ದರ್ಬಾರ್ ಹಾಲ್‌ನಲ್ಲಿ ಚಿನ್ನದ ಸಿಂಹಾಸನ ಜೋಡಣೆ ಮಾಡಲಾಗುವುದು.

ಅರಮನೆ ಪ್ರವೇಶ ನಿರ್ಬಂಧ: ಅಕ್ಟೋಬರ್‌ 1ರಂದು ಚಿನ್ನದ ಸಿಂಹಾಸನ ಜೋಡಣೆ ಇರುವುದರಿಂದ‌ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅರಮನೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ, ಅಕ್ಟೋಬರ್ 31 ರಂದು ಸಿಂಹಾಸನವನ್ನು ವಿಸರ್ಜನೆ ಮಾಡುವುದರಿಂದ ಅಂದು ಸಹ ಬೆಳಗ್ಗೆ 8 ರಿಂದ 1.30 ರವರೆಗೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.

ರತ್ನ ಖಚಿತ ಸಿಂಹಾಸನ
ರತ್ನ ಖಚಿತ ಸಿಂಹಾಸನ

ಅಕ್ಟೋಬರ್ 7 ರಂದು ನವರಾತ್ರಿ ಆರಂಭದ ದಿನ ಖಾಸಗಿ ದರ್ಬಾರ್ ಹಾಗೂ ಅರಮನೆಯಲ್ಲಿ ಪೂಜೆಗಳು ನಡೆಯುವುದರಿಂದ ಮತ್ತು ಅಕ್ಟೋಬರ್ 14 ರಂದು ಆಯುಧಪೂಜೆ ಸೇರದಂತೆ ಅರಮನೆಯಲ್ಲಿ ವಿವಿಧ‌ ಧಾರ್ಮಿಕ ‌ಕಾರ್ಯಕ್ರಮಗಳು ನಡೆಯುವುದರಿಂದ ಅಂದು ಸಹ ಬೆಳಗ್ಗೆ 8 ರಿಂದ 3 ಗಂಟೆಯವರೆಗೆ ಅರಮನೆಗೆ ಪ್ರವಾಸಿಗರಿಗೆ ನಿಷೇಧ ವಿಧಿಸಲಾಗಿದೆ. ಜೊತೆಗೆ ಅಕ್ಟೋಬರ್ 15 ರಂದು ಜಂಬೂಸವಾರಿ ನಡೆಯುವುದರಿಂದ ‌ಅಂದು ದಿನವಿಡೀ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ.

ಶರನ್ನವರಾತ್ರಿಯ ಪೂಜಾ ವಿಧಿ - ವಿಧಾನಗಳ ವಿವರ:

ಅಕ್ಟೋಬರ್ 7 ರಿಂದ 15 ರವರೆಗೆ ಅರಮನೆಯ ಒಳಗೆ ರಾಜ ಪರಂಪರೆಯಂತೆ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕರಿಗೆ ಹಾಗೂ ಇತರರಿಗೆ ಪ್ರವೇಶವಿಲ್ಲ. ಎಲ್ಲ ಪೂಜಾ ವಿಧಿ‌ವಿಧಾನಗಳು ನಡೆಯಲಿದ್ದು, ಅಕ್ಟೋಬರ್ 7 ರಂದು ರತ್ನ ಖಚಿತ ‌ಸಿಂಹಾಸನಕ್ಕೆ ಪೂಜೆ‌ ಸಲ್ಲಿಸಿ,‌ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.‌

ಅಕ್ಟೋಬರ್ 14 ರಂದು 11.02 ರಿಂದ 11.22 ರ ಶುಭ ಲಗ್ನದಲ್ಲಿ ಯದುವೀರ್ ಆಯುಧ ಪೂಜೆ ನಡೆಸಲಿದ್ದು, ಅಕ್ಟೋಬರ್ 15 ರಂದು ಕಲ್ಯಾಣ ತೊಟ್ಟಿಯಲ್ಲಿ ಅರಮನೆಯ ಆನೆ, ಕುದುರೆ, ಒಂಟೆ, ಹಸು ಸೇರಿದಂತೆ ಎಲ್ಲ ವಾಹನಗಳಿಗೂ ಪೂಜೆ ಸಲ್ಲಿಸಿ, ನಂತರ ವಿಜಯ ದಶಮಿಯನ್ನು ಬನ್ನಿಪೂಜೆ ಸಲ್ಲಿಸುವ ಮೂಲಕ ನೆರವೇರಿಸಲಿದ್ದಾರೆ. ಆದರೆ, ಈ ಬಾರಿ ಸಾಂಪ್ರದಾಯಿಕ ಜಟ್ಟಿ ಕಾಳಗ ನಡೆಯುವುದಿಲ್ಲ.

Last Updated :Sep 25, 2021, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.