ಚಿರತೆ ದಾಳಿಗೆ ನಾಲ್ವರು ಬಲಿ: ನರಭಕ್ಷಕನ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಪ್ರಾರಂಭ

author img

By

Published : Jan 23, 2023, 6:15 PM IST

leaopard

ಕಳೆದ ಮೂರು ತಿಂಗಳಿನಲ್ಲಿ ತಾಲೂಕಿನ ನಾಲ್ಕು ಮಂದಿ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಜನರ ಕಣ್ಣಿಗೆ ಸಿಗದೇ ತಪ್ಪಿಸಿಕೊಂಡಿರುವ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬಲೆ ಬೀಸಿದೆ. ಈ ಹಿನ್ನೆಲೆಯಲ್ಲಿ ಚಿರತೆ ದಾಳಿಗೆ ಕಾರಣವೇನು, ಅದರ ಸೆರೆಗೆ ಕಾರ್ಯಾಚರಣೆ ಹೇಗೆ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಸಂಪೂರ್ಣ ಸ್ಟೋರಿ ಇಲ್ಲಿದೆ.

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿಗೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾಡು ಪ್ರಾಣಿಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದ್ದರೂ, ಕಾಡು ಪ್ರಾಣಿಗಳು ಮಾತ್ರ ಅವರ ಕಣ್ತಪ್ಪಿಸಿ ದಾಳಿ ಮಾಡುತ್ತಿವೆ. ಕಳೆದ ಮೂರು ತಿಂಗಳಿನಲ್ಲಿ ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಈ ಚಿರತೆ ಸೆರೆಗೆ ಅರಣ್ಯ ಇಲಾಖೆ ವಿಶೇಷ ತಂಡ ರಚನೆ ಮಾಡಿದ್ದು, ಕಾರ್ಯಾಚರಣೆ ಆರಂಭವಾಗಿದೆ.

ಟಿ. ನರಸೀಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿನಿಂದ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದು, ಕಳೆದ ಮೂರು ತಿಂಗಳಿನಿಂದ ಅರಣ್ಯ ಇಲಾಖೆ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಒಂದು ಚಿರತೆ ಸಹ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದು, ಆದರೂ ಚಿರತೆ ದಾಳಿ ಮುಂದುವರೆದಿದೆ.

ಒಂದೇ ಚಿರತೆಯಿಂದ ದಾಳಿ‌ ಶಂಕೆ: ತಾಲೂಕಿನ ಎಸ್. ಕೆಬ್ಬೇಹುಂಡಿ, ಕಣ್ಣನಾಯಕನಹಳ್ಳಿ, ಹೊರಳ ಹಳ್ಳಿ ಸೇರಿದಂತೆ, ಈ ಮೂರು ಗ್ರಾಮಗಳ ಸುತ್ತ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ, ಮೂರು ಜನರ ಮೇಲೆ ಈ ಚಿರತೆ ದಾಳಿ ಮಾಡಿದ್ದು, ಒಂದೇ ಚಿರತೆ ಎಂದು ಅಂದಾಜಿಸಲಾಗಿದೆ. ಈ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ 80 ಜನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 12 ಟ್ರಾಪ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ಚಿರತೆ ಮಾತ್ರ ಕಾಣಸಿಗುತ್ತಿಲ್ಲ. ಆದರೂ ಚಿರತೆ ಸಂಜೆ ವೇಳೆಯಲ್ಲಿ ಗ್ರಾಮದ ಬಳಿ ಬಂದು, ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು, ಗ್ರಾಮದ ಜನರ ಭಯಕ್ಕೆ ಕಾರಣವಾಗಿದೆ.

ಇದರ ಜೊತೆಗೆ ಥರ್ಮಲ್ ಡ್ರೋಣ್ ಬಳಸಿ ಚಿರತೆ ಸೆರೆಗೆ ಕಾರ್ಯಚರಣೆ ಆರಂಭಿಸಿದ್ದು, ಮೊದಲ ಆದ್ಯತೆ ಚಿರತೆಯನ್ನು ಸೆರೆ ಹಿಡಿಯುವುದು, ಇಲ್ಲ ಎಂದರೆ ಚಿರತೆಯನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡಲಾಗಿದೆ. ಸಾಧ್ಯವಾದಷ್ಟು ಈ ಭಾಗದ ಗ್ರಾಮದ ಜನರು ಸಂಜೆ ವೇಳೆ ಮನೆಯಿಂದ ಹೊರ ಬರದಂತೆ ಇರುವುದು ಒಳ್ಳೆಯದು ಎಂದು ಎಪಿಸಿಸಿಎಫ್.ಕುಮಾರ್ ಪುಷ್ಕರ್ ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ಮೂರು ತಿಂಗಳಿನಲ್ಲಿ ಚಿರತೆಗೆ ನಾಲ್ಕು ಬಲಿ: ಟಿ. ನರಸೀಪುರ ತಾಲೂಕಿನ ಎಂಎಲ್.ಹುಂಡಿ ಗ್ರಾಮದ, ಕಾಲೇಜು ವಿದ್ಯಾರ್ಥಿ ಮಂಜುನಾಥ್ ಎಂಬುವವರನ್ನು ಅ.30 ರಂದು ಚಿರತೆ ಬಲಿ ಪಡೆದಿತ್ತು. ನಂತರ ಡಿಸೆಂಬರ್ 1ರಂದು ಎಸ್.ಕೆಬ್ಬೇಹುಂಡಿ ಗ್ರಾಮದ ಮೇಘನಾ ಎಂಬ ಯುವತಿಯನ್ನು ಚಿರತೆ ಎಳೆದೊಯ್ದಿತ್ತು. ಜನವರಿ 20 ರಂದು ಕಣ್ಣನಾಯಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬುವವರ ಮೇಲೆ ದಾಳಿ ಮಾಡಿದ್ದು, ಅವರು ಸ್ಥಳದಲ್ಲೇ ಮೃತ ಪಟ್ಟಿದ್ದರು.

ಜ. 21 ರಂದು ಹೊರಳಹಳ್ಳಿಗ್ರಾಮದ 11 ವರ್ಷದ ಬಾಲಕ ಜಯಂತ್ ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿ, ಆತನನ್ನು ಎಳೆದುಕೊಂಡು ಹೋಗಿತ್ತು. ಜೊತೆಗೆ ನಿನ್ನೆ ಸಂಜೆ ಅದೇ ಗ್ರಾಮದಲ್ಲಿ ಬೀದಿ ನಾಯಿಯನ್ನು ಚಿರತೆ ಎಳೆದುಕೊಂಡು ಹೋಗಿದೆ. ಈಗ ಟಿ.ನರಸೀಪುರ ತಾಲೂಕಿನ ಸೊಸಲೆ ಹೋಬಳಿಯ ಕೆಲವು ಗ್ರಾಮದ ಬಳಿ ಚಿರತೆ ದಾಳಿಯಿಂದ ಜನರು ಭಯಭೀತಗೊಂಡಿದ್ದಾರೆ. ಕೂಡಲೇ ಚಿರತೆ ಸೆರೆಗೆ ಕಾರ್ಯಚರಣೆ ನಡೆಸಬೇಕೆಂದು ಜನರು ಒತ್ತಾಯಿಸಿದ್ದಾರೆ.

ಸಂಜೆ ಮನೆಯಿಂದ ಹೊರ ಬರಬೇಡಿ - ಅರಣ್ಯ ಇಲಾಖೆ ಪ್ರಕಟಣೆ: ಟಿ.ನರಸೀಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸಂಜೆ ವೇಳೆ 6ರ ನಂತರ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಯಾವ ಕಾರಣಕ್ಕೂ ಒಂಟಿಯಾಗಿ ಓಡಾಡಬಾರದು. ಸಂಜೆ ಆರರ ಒಳಗೆ ಮನೆ ಸೇರಿಕೊಳ್ಳಬೇಕು. ಯಾವ ಕಾರಣಕ್ಕೂ ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆ ಕಂಡಲ್ಲಿ ಹೆಚ್ಚು ಜನ ಸೇರಿ ಗದ್ದಲ ಮಾಡಬಾರದು. ಚಿರತೆ ಸಾಕು ಪ್ರಾಣಿಗಳನ್ನು ಹತ್ಯೆ ಮಾಡಿದರೆ ಅದನ್ನು ಯಾರೂ ಮುಟ್ಟಬಾರದು. ಚಿರತೆ ಬಗ್ಗೆ ಮಾಹಿತಿ ಇದ್ದರೆ ಅರಣ್ಯ ಇಲಾಖೆ ಸಹಾಯವಾಣಿ ನಂಬರ್​ಗೆ ಕರೆ ಮಾಡಬೇಕೆಂದು ಮಾಹಿತಿ ನೀಡಲಾಗಿದೆ.

ಚಿರತೆ ಸೆರೆಗೆ ವಿಶೇಷ ಪಡೆ: ನರಹಂತಕ ಚಿರತೆ ಸೊಸಲೆ ಹೊಬಳಿಯ ಎಂ ಎಸ್. ಹುಂಡಿ, ಎಸ್‌. ಕೆಬ್ಬೇಹುಂಡಿ, ಕಣ್ಣನಾಯಕನಹಳ್ಳಿ ಹಾಗೂ ಹೊರಳ ಹಳ್ಳಿ ಗ್ರಾಮಗಳಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಚಿರತೆ ಒಂದೇ ಆಗಿದ್ದು, ಈ ಚಿರತೆ ಸೆರೆಗೆ ವಿಶೇಷ ಪಡೆ ರಚನೆ ಮಾಡಲಾಗಿದೆ ಎಂದು ನಿನ್ನೆ ಸುತ್ತೂರಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಸ್ಥಳೀಯ ಟಿ. ನರಸೀಪುರ ಶಾಸಕರಿಗೆ ಮಾಹಿತಿ ನೀಡಿದ್ದರು.

ಚಿರತೆ ಮನುಷ್ಯರ ಮೇಲೆ ದಾಳಿಗೆ ಕಾರಣ ಏನು: ಸಾಮಾನ್ಯವಾಗಿ ಚಿರತೆ ಸರಣಿಯಾಗಿ ಮನುಷ್ಯರ ಮೇಲೆ ದಾಳಿ ಮಾಡಿದ ಪ್ರಕರಣಗಳು ಕಡಿಮೆ. ಚಿರತೆ ಸಾಮಾನ್ಯವಾಗಿ ನಾಯಿ, ಮೇಕೆ, ಕುರಿ ಹಾಗೂ ಕೋಳಿಗಳನ್ನು ಹಿಡಿದು ತಿನ್ನುತ್ತವೆ. ಒಂದು ಬಾರಿ ಮನುಷ್ಯನ ಮೇಲೆ ದಾಳಿ ಮಾಡಿ ಮನುಷ್ಯನನ್ನು ತಿಂದರೆ, ಅದು ಮನುಷ್ಯರನ್ನೆ ಹಿಡಿಯುತ್ತದೆ. ಹಾಗಾಗಿ ಈ ಚಿರತೆ ಮುಂದೆಯೂ ಮನುಷ್ಯರನ್ನೆ ಹಿಡಿಯುತ್ತದೆ. ಮುಖ್ಯವಾಗಿ ಟಿ. ನರಸೀಪುರದಲ್ಲಿ ದಾಳಿ‌ ಮಾಡುತ್ತಿರುವ ಚಿರತೆ, ಗ್ರಾಮದ ಕಬ್ಬಿನ ಗದ್ದೆಗಳಲ್ಲಿ ಮರಿ ಹಾಕಿರಬಹುದು. ಆಹಾರ ಸಿಗದೆ ಈ ರೀತಿ ದಾಳಿ ಮಾಡುತ್ತಿರಬಹುದು. ಜೊತೆಗೆ ನರಹಂತಕ ಚಿರತೆ ಗಾಬರಿ ಆದಂತೆ ಕಾಣುತ್ತಿದೆ ಎನ್ನುತ್ತಾರೆ ವನ್ಯಜೀವಿ ತಜ್ಞ ‌ರಾಜ್ ಕುಮಾರ್.

ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಕಾಡು ಪ್ರಾಣಿಗಳ ಹಾವಳಿ : ಸೌದೆ ತರಲು ಹೋದ ಬಾಲಕ ಹುಲಿ ದಾಳಿಗೆ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.