ನ್ಯಾಯಾಂಗದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಅಪಾಯಕಾರಿ : ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ

author img

By

Published : Jan 24, 2023, 3:23 PM IST

Updated : Jan 24, 2023, 4:11 PM IST

central-government-interference-in-judiciary-is-very-dangerous-says-justice-santosh-hegde

ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ- ಶೀಘ್ರ ನ್ಯಾಯ ವ್ಯವಸ್ಥೆ ಜಾರಿಗೆ ಬರಬೇಕು - ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ನ್ಯಾಯಾಂಗದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಅಪಾಯಕಾರಿ : ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ

ಮೈಸೂರು : ಕೇಂದ್ರ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯಲ್ಲಿ, ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನ್ಯಾಯಾಂಗದಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡಬಾರದು. ಈ ರೀತಿ ಹಸ್ತಕ್ಷೇಪ ಮಾಡುವುದು ಅಪಾಯಕಾರಿ ಬೆಳವಣಿಗೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಧರ್ಮ ಮತ್ತು‌ ಭಾಷೆ ವಿಚಾರದಲ್ಲಿ ದೇಶ ವಿಭಜನೆ ಆಗುವ ಆಪಾಯ ಇದೆ. ಇದು ಯಾವಾಗ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದರು.

ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನ ಪ್ರತಿನಿಧಿಗಳು ಜನರ ಮಾಲೀಕರು ಎಂಬ ಭಾವನೆ ಹೊಂದಿದ್ದಾರೆ. ರಾಜಕಾರಣಿಗಳು ಪರಸ್ಪರ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಆದ್ರೆ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿಲ್ಲ‌. ಇದೇ ರೀತಿ ಮುಂದುವರೆದರೆ ಜನ ದಂಗೆ ಏಳುವ ಪರಿಸ್ಥಿತಿ ಬರುತ್ತದೆ. ಅದು ಯಾವಾಗ ಎಂದು ಹೇಳಲು ಸಾಧ್ಯವಿಲ್ಲ ಎಂದು ನಿ. ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

ಕೆಂದ್ರ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ : ನ್ಯಾಯಾಂಗದ ಬಗ್ಗೆ ರಾಜಕಾರಣಿಗಳಿಗೆ ಅಷ್ಟೊಂದು ಜ್ಞಾನ ಇರುವುದಿಲ್ಲ. ಹೀಗಿರುವಾಗ ನ್ಯಾಯಾಧೀಶರ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಂತೋಷ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನವೀಯ ಮೌಲ್ಯ ಅಗತ್ಯ : ಲೋಕಾಯುಕ್ತ ನ್ಯಾಯಮೂರ್ತಿ ಆಗುವ ಮುನ್ನ ನನಗೆ ಸಮಾಜದ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆದರೆ ಲೋಕಾಯುಕ್ತ ನ್ಯಾಯಮೂರ್ತಿ ಆದ ಮೇಲೆ ನಮ್ಮ ಸಮಾಜದಲ್ಲಿ ಎಷ್ಟು ಕಠಿಣ ಸಮಸ್ಯೆಗಳು ಇವೆ ಎಂಬುದು ತಿಳಿಯಿತು. ಸಮಾಜದಲ್ಲಿ ಶ್ರೀಮಂತನಾದರೆ ಸಾಕು, ಅವರಿಗೆ ಸಲಾಂ ಹೊಡೆಯುತ್ತಾರೆ. ಜೈಲಿನಿಂದ ಹೊರಗೆ ಬಂದವರಿಗೆ ಅದ್ಧೂರಿ ಸ್ವಾಗತ ಸಿಗುತ್ತದೆ. ಇವತ್ತಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ. ಒಂದು ಬೇಕು ಹಾಗೂ ಮತ್ತಷ್ಟು ಬೇಕೂ ಎಂಬ ದುರಾಸೆ ಜನರಲ್ಲಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ 50 ವರ್ಷಗಳಿಂದಲೂ ಭ್ರಷ್ಟಾಚಾರ ನಡೆಯುತ್ತಿದೆ. ಇವತ್ತು 40 ಪರ್ಸೆಂಟ್​ ಕಮಿಷನ್ ಸರ್ಕಾರ ಎಂದು ಹೇಳುವ ಮಟ್ಟಕ್ಕೆ ಬಂದು ನಿಂತಿದ್ದೇವೆ. ಲೋಕಾಯುಕ್ತ ಮತ್ತಷ್ಟು ಬಲಿಷ್ಠವಾಗಿ, ಮೇಲಿನ ಮಟ್ಟದ ಅಧಿಕಾರಿಗಳನ್ನು ಹಿಡಿದು ಶಿಕ್ಷಿಸಿದರೆ ಕೆಳಗಿನ ಮಟ್ಟದ ಅಧಿಕಾರಿಗಳು‌ ಬುದ್ಧಿ ಕಲಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಶೀಘ್ರ ನ್ಯಾಯ ವ್ಯವಸ್ಥೆ ಜಾರಿಗೆ ಬರಬೇಕು : ಇತ್ತೀಚೆಗೆ ನ್ಯಾಯಾಲಯದಲ್ಲಿ ಪ್ರಕರಣಗಳು ದೀರ್ಘಕಾಲ ಎಳೆದುಕೊಂಡು ಹೋಗುತ್ತಿರುವುದು ಸರಿಯಲ್ಲ. ಇಲ್ಲಿ ಗೆದ್ದವನು ಸೋತ. ಸೋತವನು ಸತ್ತ ಹಾಗೆ ಆಗುತ್ತಿದೆ. ಸಮಸ್ಯೆಗಳನ್ನು ಬಗೆಹರಿಸಲು ಮಧ್ಯವರ್ತಿಗಳ ಬಳಿ ಹೋಗುವ ವ್ಯವಸ್ಥೆ ಆಗುತ್ತಿದ್ದು, ಇದರಿಂದ ಸಮಾಜಕ್ಕೆ ಬೇರೆಯ ಸಂದೇಶವೇ ಹೋಗುತ್ತಿದೆ. ದುರಾಸೆ ಬಿಡಬೇಕು, ಸರಳ ಜೀವನ ನಡೆಸಬೇಕು ಎಂದು ಅವರು ತಿಳಿಸಿದರು.

ನನಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಇವುಗಳಿಂದ ಬಂದ ಹಣವನ್ನು ಅನಾಥಾಶ್ರಮ, ಸಂಘ ಸಂಸ್ಥೆಗಳಿಗೆ ಕೊಟ್ಟಿದ್ದೇನೆ. ಯಾರಿಂದಲೂ ಒಂದು ರೂಪಾಯಿ ಪಡೆದಿಲ್ಲ. ನನ್ನ ಹೆಸರಿನಲ್ಲಿ ಒಂದು ಅಪಾರ್ಟ್ ಮೆಂಟ್ ಮಾತ್ರ ಇದೆ. ಬೇರೆ ಆಸ್ತಿ ಇಲ್ಲ. ನಾವು ಯಾವಾಗಲೂ ಶುದ್ಧವಾಗಿರಬೇಕು ಎಂದು ಪತ್ರಿಕಾ ಸಂವಾದದಲ್ಲಿ ನ್ಯಾ. ಸಂತೋಷ್​ ಹೆಗ್ಡೆ ಹೇಳಿದರು.

ಇದನ್ನೂ ಓದಿ : ಮತದಾರರ ಪಟ್ಟಿ ಅವ್ಯವಹಾರ ಸಂವಿಧಾನಕ್ಕೆ ವಿರುದ್ಧವಾದದ್ದು: ಸಂತೋಷ್ ಹೆಗ್ಡೆ

Last Updated :Jan 24, 2023, 4:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.