2024ರ ಚುನಾವಣೆಯಲ್ಲಿ ಬೆಂಗಳೂರಿನಿಂದ ಸುಮಲತಾ ಅಂಬರೀಶ್ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ

author img

By

Published : Jan 14, 2023, 1:32 PM IST

Updated : Jan 14, 2023, 3:51 PM IST

Nikhil Kumaraswamy talked to Media

ಮಂಡ್ಯದಲ್ಲಿ ಕಾಂಗ್ರೆಸ್​ ಜೆಡಿಎಸ್​ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂದ ಮಂಡ್ಯ ಸಂಸದೆ ಸುಮಲತಾ ಹೇಳಿಕೆಗೆ ನಿಖಿಲ್​ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ನಿಖಿಲ್​ ಕುಮಾರಸ್ವಾಮಿ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಸ್ಪರ್ಧಿಸುತ್ತಾರೆ ಎಂದು ಜೆಡಿಎಸ್​ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್​ ಜೆಡಿಎಸ್​ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂಬ ಸುಮಲತಾ ಅಂಬರೀಶ್​ ಅವರ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ​ ಟಾಂಗ್​ ಕೊಟ್ಟಿದ್ದಾರೆ.

ಹುಳ್ಳೇನಹಳ್ಳಿ ಕಬಡ್ಡಿ ಪ್ರೀಮಿಯರ್ ಲೀಗ್-2023 ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ನಿಖಿಲ್​ ಕುಮಾರಸ್ವಾಮಿ ಮಾಧ್ಯಮದ ಜೊತೆ ಮಾತನಾಡಿದರು. ಹೊಂದಾಣಿಕೆ ರಾಜಕಾರಣ ಎನ್ನುವುದು ಮಂಡ್ಯ ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿಯೇ ಪ್ರಾರಂಭವಾಗಿದೆ. ರೈತ ಸಂಘ, ಕಾಂಗ್ರೆಸ್, ಬಿಜೆಪಿಯವರು ಕೇವಲ ಲೋಕಸಭಾ ಚುನಾವಣೆ ಅಷ್ಟೆ ಅಲ್ಲ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರು ಹೊಂದಾಣಿಕೆ ರಾಜಕಾರಣ ಮಾಡಿದ್ರು ಎನ್ನುವುದನ್ನು ಇಡೀ ರಾಜ್ಯವೇ ನೋಡಿದೆ. ಹೊಂದಾಣಿಕೆ ಬಗ್ಗೆ ಸಂಸದರಿಗೆ ಮಾತನಾಡುವ ನೈತಿಕತೆಯ ಹಕ್ಕು ಉಳಿದಿಲ್ಲ. ಮಂಡ್ಯದ ಸಂಸದರು 2024ರ ಲೋಕಸಭಾ ಚುನಾವಣೆಗೆ ಮಂಡ್ಯ ಜಿಲ್ಲೆಯಲ್ಲಿ ಅಲ್ಲ, ಬೆಂಗಳೂರಿನಲ್ಲಿ ಸ್ಪರ್ಧೆ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. ಮೊದಲು ಅದರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ ಹಿನ್ನೆಲೆ ಬಗ್ಗೆ, ಸರ್ಕಾರದ ಕೆಲವು ದೊಡ್ಡ ದೊಡ್ಡ ಸಚಿವರ ಜೊತೆಗಿರುವ ನಂಟಿನ ಬಗ್ಗೆ ನಮ್ಮ ತಂದೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದರು. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವವರು ಬಿಜೆಪಿಯವರು. ಸ್ಯಾಂಟ್ರೋ ರವಿ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಪ್ರಕರಣವನ್ನು ಅಲ್ಲೆ ಮುಚ್ಚಿ ಹಾಕುತ್ತಾರಾ ಗೊತ್ತಿಲ್ಲ. ಆದರೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಪಂಚರತ್ನಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ 6 ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಪ್ರವಾಸ ಮಾಡಿ ಯಶಸ್ವಿಯಾಗಿದೆ. ಇದೀಗ ಯಾತ್ರೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮುಕ್ತಾಯಗೊಳಿಸುತ್ತಿದ್ದಾರೆ. ಮಂಡ್ಯದಲ್ಲಿ ಕುಮಾರಣ್ಣಗೆ ಅದ್ಧೂರಿಯಾಗಿ ಸ್ವಾಗತ ನೀಡಿ ಜನ ಆಶೀರ್ವದಿಸಿದ್ದಾರೆ. ಜನರ ಪ್ರತಿಕ್ರಿಯೆ ನೋಡಿದರೆ ಏಳಕ್ಕೆ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ ಎನ್ನುವ ನಂಬಿಕೆ ಇದೆ. ಕುಮಾರಣ್ಣರ ಬೆಂಬಲಕ್ಕೆ ಜನರು ಇದ್ದಾರೆ ತಿಳಿಸಿದರು.

ಕಬಡ್ಡಿ ಮೈದಾನಕ್ಕಿಳಿದು ರೈಡ್​ ಮಾಡುವ ಮೂಲಕ ನಿಖಿಲ್​ ಸೆಮಿಫೈನಲ್​ ಪಂದ್ಯಕ್ಕೆ ಚಾಲನೆ ನೀಡಿದರು. ಕಬಡ್ಡಿ ಆಟಗಾರರಿಗೆ ನಿಖಿಲ್​ ಶುಭಕೋರಿದ್ದು, ಆಯೋಜಕರು ನಿಖಿಲ್​ ಅವರನ್ನು ಸನ್ಮಾನಿಸಿದದರು. ಇದೇ ವೇಳೆ ನಿಖಿಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವತಿಯರು, ಯುವಕರು ಮುಗಿಬಿದ್ದರು.

ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ ಎಂದಿದ್ದ ಸಂಸದೆ: ಮಂಡ್ಯ ಸಂಸದೆ ಸುಮಲತಾ ಅವರು ಮುಂದಿನ ಲೋಕಸಭಾ ಚುನಾವಣೆಗೆ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಾಗ ಈ ಹಿಂದೆ ಸುಮಲತಾ ಅಂಬರೀಶ್​ ಅವರು ಪ್ರತಿಕ್ರಿಯೆ ನೀಡಿ, ನನಗೆ ಹೊಸ ಕ್ಷೇತ್ರದ ಅವಶ್ಯಕತೆ ಇಲ್ಲ. ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ. ಬೇಕಾದರೆ ರಾಜಕೀಯ ಬಿಡುತ್ತೇನೆಯೇ ಹೊರತು ಮಂಡ್ಯ ಕ್ಷೇಥ್ರವನ್ನು ಬಿಡಲ್ಲ ಎಂದಿದ್ದರು.

ಇದನ್ನೂ ಓದಿ: ಸುಮಲತಾ ಕಾಂಗ್ರೆಸ್ ಸೇರ್ಪಡೆ ಆಸೆಗೆ ಡಿಕೆಶಿ ಅಡ್ಡಿ: ನಾಲ್ಕು ವರ್ಷಗಳ ಹಿಂದಿನ ಗುಟ್ಟು ಬಿಚ್ಚಿಟ್ಟ ಸಂಸದೆ

Last Updated :Jan 14, 2023, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.