ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಂಚನೆ: ಕಾಂಗ್ರೆಸ್ ಮುಖಂಡ ಸೇರಿ ಐವರಿಗೆ 7 ವರ್ಷ ಶಿಕ್ಷೆ

author img

By

Published : Sep 10, 2022, 6:43 AM IST

CBI court

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಐದು ಮಂದಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಪಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಂಚನೆ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಐದು ಜನ ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಮತ್ತು 5 ಕೋಟಿ ರೂ.ದಂಡ ವಿಧಿಸಿ ತೀರ್ಪು ನೀಡಿದೆ.

ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್, ಹೆಚ್.ಎಸ್.ನಾಗಲಿಂಗಸ್ವಾಮಿ, ಚಂದ್ರಶೇಖರ್, ಮೂಡಾದ ಪ್ರಥಮ ದರ್ಜೆ ಸಹಾಯಕರಾಗಿದ್ದ ಹೆಚ್.ಕೆ.ನಾಗರಾಜ, ಕೆ.ಬಿ.ಹರ್ಷನ್‌ ಕಠಿಣ ಶಿಕ್ಷೆಗೆ ಒಳಗಾದ ಆಪಾದಿತರು. ಸಿಬಿಐ ನ್ಯಾಯಾಲಯ ಈ ಆಪಾದಿತರಿಗೆ ಕಠಿಣ ಶಿಕ್ಷೆ ಜೊತೆಗೆ ತಲಾ ಒಂದು ಕೋಟಿ ರೂ.ದಂಡ ವಿಧಿಸಿದೆ.

ಏನಿದು ಪ್ರಕರಣ?: ಅಪರಾಧಿಗಳು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 2013ರಲ್ಲಿ ತಲಾ ಒಂದು ಕೋಟಿ ರೂ. ಮೊತ್ತದ ವೋಚರ್ ಮತ್ತು ಚೆಕ್​​ಗಳನ್ನು ಮೋಸದಿಂದ ತುಂಬಿ ಮಂಡ್ಯದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಇರಿಸಿದ್ದರು. ನಂತರ ಆ ಹಣವನ್ನು ಚಂದ್ರಶೇಖರ್ ಅವರಿಗೆ ಸೇರಿದ ಆಕಾಶ್ ಎಂಟರ್ ಪ್ರೈಸಸ್ ನ ಖಾತೆಗೆ ವರ್ಗಾಯಿಸಿಕೊಂಡು ಮೂಡಾಕ್ಕೆ ಹಣ ಮರಳಿಸದೆ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಈ ಹಗರಣ ವಿಧಾನಸಭೆ ಅಧಿವೇಶನದಲ್ಲಿ ಸೇರಿದಂತೆ ಸಾರ್ವಜನಿಕವಾಗಿ ಬಹಳಷ್ಟು ಚರ್ಚೆಗೆ ಒಳಗಾಗಿದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಪಕ್ರರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.

ಕೇಂದ್ರೀಯ ತನಿಖಾ ದಳ ಈ ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮೂಡಾದ 5 ಕೋಟಿ ಹಣವನ್ನು ಪಡೆದು ಹಿಂತಿರುಗಿಸದೆ ವಂಚನೆ ಮಾಡಿದ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್​ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿತ್ತು.

ತನಿಖೆ ವೇಳೆ ತಪ್ಪಿತಸ್ಥರಲ್ಲದ 6 ಜನರನ್ನು ವಿಚಾರಣೆಯಿಂದ ಕೈಬಿಟ್ಟು 5 ಜನರ ವಿರುದ್ಧ ಅಂದಿನ ಸಿಬಿಐ ಡಿವೈಎಸ್​ಪಿ ಕೆ.ವೈ ಗುರುಪ್ರಸಾದ್ ನೇತೃತ್ವದ ತಂಡ ಆರೋಪಿಗಳ ವಿರುದ್ಧ 27.06.2015 ರಂದು ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಬಗ್ಗೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ.

ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಗುರುವಾರ ತೀರ್ಪು ನೀಡಿ ಐದು ಮಂದಿ ಅಪರಾಧಿಗಳಿಗೆ ತಲಾ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ ಒಂದೊಂದು ಕೋಟಿಯಂತೆ ಐದು ಕೋಟಿ ರೂ.ದಂಡವನ್ನು ಮೂಡಾಕ್ಕೆ ಪಾವತಿಸುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಆದಿಕೇಶವುಲು ಆಪ್ತನ ಅನುಮಾನಾಸ್ಪದ ಸಾವು: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.