ಟಿಪ್ಪು ಕನ್ನಂಬಾಡಿ ನಿರ್ಮಿಸಿದ್ದರೆ ಕಾವೇರಿ ನೀರಿಗಾಗಿ ಗಲಾಟೆ ನಡೆಯುತ್ತಲೇ ಇರಲಿಲ್ಲ: ಭಗವಾನ್

author img

By

Published : Jan 20, 2023, 7:12 PM IST

Prof. K S Bhagavan in Book release programme

ಮಂಡ್ಯ ಜಿಲ್ಲೆಯಲ್ಲಿ ನಡೆದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ ಕೆ ಎಸ್​ ಭಗವಾನ್​ ಭಾಗವಹಿಸಿದ್ದಾರೆ.

​ಮಂಡ್ಯ: ಟಿಪ್ಪು ಸುಲ್ತಾನ್​ ಕನ್ನಂಬಾಡಿ ಕಟ್ಟೆ ಕಟ್ಟಲು ಮುಂದಾಗಿದ್ದ. ಅಂದು ಟಿಪ್ಪು ಸುಲ್ತಾನ್​ ಅಣೆಕಟ್ಟು ಕಟ್ಟಿಸಿದ್ದರೆ, ಇಂದು ಕರ್ನಾಟಕ ಹಾಗೂ ತಮಿಳುನಾಡು ನಡುವೆ ನೀರಿಗಾಗಿ ಗಲಾಟೆಯೇ ಆಗುತ್ತಿರಲಿಲ್ಲ ಎಂದು ಸಾಹಿತಿ ಪ್ರೊ ಕೆ ಎಸ್​ ಭಗವಾನ್ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ಕನ್ನಂಬಾಡಿ ಕಟ್ಟೆ ಕಟ್ಟಬೇಕು ಎಂದು ಮನಸ್ಸು ಮಾಡಿದ್ದ. ಆದರೆ, ಅಷ್ಟೊತ್ತಿಗೆ 4ನೇ ಆಂಗ್ಲೋ ಮೈಸೂರು ಯುದ್ಧ ನಡೆಯಿತು. ಇದರಿಂದಾಗಿ ಅಣೆಕಟ್ಟು ನಿರ್ಮಾಣ ಕಾರ್ಯ ನಿಂತು ಹೋಯಿತು. ಒಂದು ವೇಳೆ ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಿ ಮುಗಿಸಿದ್ದರೆ, ಕಾವೇರಿ ನೀರಿಗಾಗಿ ಇವತ್ತು ಗಲಾಟೆಯೇ ನಡೆಯುತ್ತಿರಲಿಲ್ಲ. ಯಾಕೆಂದರೆ, ಆಗ ತಮಿಳುನಾಡು ಪ್ರದೇಶವು ಸಂಪೂರ್ಣವಾಗಿ ಟಿಪ್ಪು ಸುಲ್ತಾನ್​​ ಆಡಳಿತದ ವಶದಲ್ಲಿತ್ತು. ಹೀಗಾಗಿ ಟಿಪ್ಪುಗೆ ಯಾರ ಅನುಮತಿ ಕೇಳುವ ಅಗತ್ಯವೇ ಇರಲಿಲ್ಲ. ಅಲ್ಲದೆ, ಡ್ಯಾಂ‌ ನಿರ್ಮಿಸಿದ್ದರೆ, ಕರ್ನಾಟಕ ಹಾಗೂ ತಮಿಳುನಾಡಿನ ಜನರು ಬಹಳ ನೆಮ್ಮದಿಯಿಂದ ಇರುತ್ತಿದ್ದರು. ಆದರೆ, ಅಂತಹ ಅವಕಾಶ ನಮಗೆ ತಪ್ಪಿ ಹೋಯಿತು ಎಂದು ಪ್ರೊ. ಭಗವಾನ್ ಹೇಳಿದರು.

ರಾಮರಾಜ್ಯ ಎಂಬ ಮಾತು ಹೆಚ್ಚು ಹರಡಲು ಕಾರಣ ಮಹಾತ್ಮ ಗಾಂಧಿ: ಇದೇ ವೇಳೆ, ರಾಮನ ಕುರಿತು ಮತ್ತೆ ಮಾತು ಮುಂದುವರೆಸಿದ ಪ್ರೊ ಕೆ ಎಸ್​ ಭಗವಾನ್, ದೇಶದಲ್ಲಿ ರಾಮರಾಜ್ಯ ಎಂಬ ಪದವನ್ನು ಕಥೆ ಕಟ್ಟಿ ಬಿಡಲಾಗಿದೆ. ರಾಮರಾಜ್ಯ ಎಂಬ ಮಾತು ಹೆಚ್ಚಾಗಿ ಹರಡಲು ಕಾರಣರಾದವರು ಮಹಾತ್ಮ ಗಾಂಧಿ ಎಂದೆನಿಸುತ್ತದೆ. ಆದರೆ, ವಾಲ್ಮೀಕಿ ರಾಮಾಯಣ, ಉತ್ತರಖಾಂಡ ಓದಿದರೆ ರಾಮರಾಜ್ಯ ಎಂಬ ಮಾತಿಗೆ ಯಾವುದೇ‌ ಆಧಾರವಿಲ್ಲ ಎಂದರು.

‘‘11 ವರ್ಷದ ಆಡಳಿತದಲ್ಲಿ ಮೂರು ಘಟನೆಗಳು ನಡೆದವು. ಯಾರೋ ಸೀತೆಯ ಮೇಲೆ ಅಪವಾದ ಮಾಡಿದರು ಎಂಬ ಕಾರಣಕ್ಕೆ ರಾಮ ಗರ್ಭಿಣಿಯಾಗಿದ್ದ ಸೀತೆಯನ್ನೇ ಕಾಡಿಗೆ ಕಳುಹಿಸಿದ. ಸೀತೆಗೆ ತನ್ನನ್ನು ಸಮರ್ಥಿಸಿಕೊಳ್ಳಲು ಯಾವುದೇ ಅವಕಾಶವನ್ನು‌ ಕೊಡಲಿಲ್ಲ. ನೇರವಾಗಿ ಕಾಡಿಗೆ ಕಳುಹಿಸಿದ. ಒಂದು ವೇಳೆ ಸೀತೆ ಕಾಡಿಗೆ ಹೋದಾಗ ಕಾಡಿನಲ್ಲಿ ವಾಲ್ಮಿಕಿ ಸಿಗದೇ ಇರುತ್ತಿದ್ದರೆ ಗರ್ಭಿಣಿ ಸೀತೆಯ ಕಥೆ ಏನಾಗುತ್ತಿತ್ತು? ಸೀತೆಯನ್ನು ಕಾಡಿಗೆ ಕಳುಹಿಸಿದ ನಂತರ ಅವಳು ಏನಾದಳು ಎನ್ನುವುದನ್ನೇ ರಾಮ ಚಿಂತಿಸಲಿಲ್ಲ. ಅಂದರೆ ಸುಮಾರು 16- 17 ವರ್ಷ ಸೀತೆ ಏನಾದಳು ಎಂಬುದರ ಬಗ್ಗೆ ರಾಮ ವಿಚಾರಿಸಲೇ ಇಲ್ಲ‘‘ ಎಂದು ಹೇಳಿದರು.

ಹೀಗೊಮ್ಮೆ ಸಭೆಯೊಂದು ನಡೆಯುತ್ತಿತ್ತು. ಅಲ್ಲಿಗೆ ಯಾರನ್ನೂ ಬಿಡಬಾರದೆಂದು ಲಕ್ಷ್ಮಣನಿಗೆ ರಾಮ ಹೇಳಿದ್ದನು, ಆ ಸಭೆಗೆ ದುರ್ವಾಸನ ಮುನಿಗೆ ಲಕ್ಷ್ಮಣ ಅವಕಾಶ ನೀಡಿದ್ದಕ್ಕೆ ಕೋಪಗೊಂಡ ರಾಮ ತಮ್ಮ ಲಕ್ಷ್ಮಣನನ್ನೇ ಗಡಿಪಾರು ಮಾಡಿದ್ದನು. ಅಲ್ಲದೆ, ತಪಸ್ಸು ಮಾಡುತ್ತಿದ್ದ ಶೂದ್ರ ಶಂಭುಕನನ್ನು ಕೊಲೆ ಮಾಡಿಸಿದ್ದ. ಇವೆಲ್ಲ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ ಎಂದ ಭಗವಾನ್​, ನೀವೆಲ್ಲ ಹೇಗೆ ರಾಮನನ್ನು ಆದರ್ಶ ವ್ಯಕ್ತಿ ಎಂದು ಕರೆಯುತ್ತೀರಿ ಎಂದು ಪ್ರಶ್ನಿಸಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೆ ಎಸ್​ ಭಗವಾನ್ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ಪ್ರಕರಣ: ಸಾಹಿತಿ ಭಗವಾನ್​ಗೆ ಷರತ್ತುಬದ್ಧ ಜಾಮೀನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.