ಕೆಆರ್‌ಎಸ್‌ ನೀರಿನ ಮಟ್ಟ ಕುಸಿತ: ಬೊಮ್ಮಾಯಿಗೆ ಬಾಗಿನ ಅರ್ಪಣೆ ಭಾಗ್ಯ ಸಿಗುವುದು ಅನುಮಾನ

author img

By

Published : Sep 24, 2021, 7:27 PM IST

KRS Dam

ಆಗಸ್ಟ್‌ನಲ್ಲಿಯೇ ಭರ್ತಿಯಾಗುತ್ತಿದ್ದ ಕೆಆರ್‌ಎಸ್‌ ಜಲಾಶಯ ಈ ವರ್ಷ ಸೆಪ್ಟಂಬರ್‌ ಆರಂಭವಾದರೂ ತುಂಬಿಲ್ಲ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಾಗಿನ ಅರ್ಪಿಸುವ ಭಾಗ್ಯ ಸಿಗುವುದು ಅನುಮಾನವಾಗಿದೆ.

ಮಂಡ್ಯ: ಸಕ್ಕರೆನಾಡಿನ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾದಾಗ ರಾಜ್ಯದ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಈ ಬಾರಿ ಕೆಆರ್‌ಎಸ್ ತುಂಬುವುದು ಅನುಮಾನವಾಗಿದೆ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಾಗಿನ ಅರ್ಪಿಸುವ ಭಾಗ್ಯ ಸಿಗುವುದು ಡೌಟು.

ಹೌದು, ಕಳೆದ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿತ್ತು. ಅಲ್ಲದೆ, 124.80 ಅಡಿ ಗರಿಷ್ಠ ಮಟ್ಟದ ಜಲಾಶಯ ಆಗಸ್ಟ್ 11 ರಂದು 121 ಅಡಿಗೆ ತಲುಪಿತ್ತು. ಆದ್ರೆ ಜಲಾಶಯದಿಂದ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ನೀರು ಕುಸಿದು 114.20 ಅಡಿಗೆ ಬಂದು ತಲುಪಿದೆ.

ಸೆಪ್ಟಂಬರ್‌ನಲ್ಲಿ ಜಲಾಶಯ ತುಂಬಿದ್ದು ಕಡಿಮೆ:
ಜೂನ್, ಜುಲೈ, ಆಗಸ್ಟ್‌ನಲ್ಲಿ ಸುರಿಯುವ ಮಳೆಗೆ ಜಲಾಶಯ ತುಂಬಿರುವುದೇ ಹೆಚ್ಚು. ಆದ್ರೆ ಸೆಪ್ಟಂಬರ್‌ನಲ್ಲಿ ಮಳೆ ಕಡಿಮೆಯಾಗುವ ಹಿನ್ನೆಲೆಯಲ್ಲಿ ಜಲಾಶಯ ತುಂಬಿದ್ದು ಕಡಿಮೆ. ಕಳೆದ 12 ವರ್ಷಗಳ ಜಲಾಶಯ ತುಂಬಿದ ಮಾಹಿತಿಯಂತೆ 2012 ಸೆ.15 ರಂದು 110.63 ಅಡಿ ತುಂಬಿತ್ತು. ನಂತರ 2015ರ ನವೆಂಬರ್ 15 ರಂದು 111 ಅಡಿ ನೀರು ಸಂಗ್ರಹವಾಗಿದ್ದು, ಬಿಟ್ಟರೆ ಸೆಪ್ಟಂಬರ್‌ನಲ್ಲಿ ಇದುವರೆಗೂ ಜಲಾಶಯ ತುಂಬಿಲ್ಲ.

ತಂದೆಗೂ ತಪ್ಪಿದ್ದ ಅವಕಾಶ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರು ಸಹ ಮುಖ್ಯಮಂತ್ರಿಯಾಗಿದ್ದ ವೇಳೆ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಅವಕಾಶದಿಂದ ವಂಚಿತರಾಗಿದ್ದರು. 1988 ರಲ್ಲಿ ಕೆಆರ್‌ಎಸ್ ಜಲಾಶಯ ತುಂಬಿತ್ತು. ಆದರೆ ಅಂದು ಕಾರಣಾಂತರಗಳಿಂದ ಬಾಗಿನ ಅರ್ಪಿಸಲು ಸಾಧ್ಯವಾಗಿಲ್ಲ. ಆದ್ರೆ ಅಂದಿನ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯ ಅವರು ಬಾಗಿನ ಅರ್ಪಿಸಿದ್ದರು.

ನಂತರ 1989ರಲ್ಲಿ ಸರ್ಕಾರದ ಬದಲಾವಣೆಯಿಂದ ವಿರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದರು. ಈ ಮಧ್ಯೆ 12 ಬಾರಿ ನಾನಾ ಕಾರಣಗಳಿಂದ ಹಾಗೂ ಅಣೆಕಟ್ಟೆ ತುಂಬದ ಪರಿಣಾಮ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯ ನಡೆದಿಲ್ಲ. 1979 ರಿಂದ ಮುಖ್ಯಮಂತ್ರಿಯಾದವರ ಪೈಕಿ ಎಸ್.ಆರ್.ಬೊಮ್ಮಾಯಿ ಹಾಗೂ ಜಗದೀಶ್‌ಶೆಟ್ಟರ್‌ಗೆ ಬಾಗಿನ ಅರ್ಪಿಸುವ ಅವಕಾಶ ಕೈ ತಪ್ಪಿದೆ.

ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ:

ತಮಿಳುನಾಡಿಗೆ ಸೆಪ್ಟೆಂಬರ್ ತಿಂಗಳಲ್ಲಿ ಆರರಿಂದ ಏಳು ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿದೆ. ಆದ್ರೆ ಈ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರಕ್ಕೆ ಕರ್ನಾಟಕ ಹೇಳಿದರಾದರೂ ಪ್ರಾಧಿಕಾರದಿಂದ ಒತ್ತಡ ಹೆಚ್ಚಾದರೆ ನೀರು ಬಿಡಬೇಕಾದ ಸಂದರ್ಭ ಅನಿವಾರ‍್ಯವಾಗಬಹುದು. ಒಟ್ಟಾರೆ ಅಣೆಕಟ್ಟೆ ಭರ್ತಿಯಾಗುವ ಸಂದರ್ಭದಲ್ಲಿ ದಿಢೀರನೇ 121 ಅಡಿಯಿಂದ 7 ಅಡಿ ನೀರು ಅಣೆಕಟ್ಟೆಯಲ್ಲಿ ಕುಸಿತಗೊಂಡಿದೆ.

120 ಅಡಿಗಿಂತ ಹೆಚ್ಚಿದ್ದರೆ ತುಂಬುವ ಸಾಧ್ಯತೆ:

ಕೆಆರ್‌ಎಸ್‌ನ ನೀರಾವರಿ ಅಧಿಕಾರಿಗಳ ಮಾಹಿತಿ ಪ್ರಕಾರ ಕೆಆರ್‌ಎಸ್ ತುಂಬುವುದು ಜುಲೈ ಮತ್ತು ಆಗಸ್ಟ್ ವೇಳೆಗೆ ಮಾತ್ರ. ಒಂದೆರಡು ಬಾರಿ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭದಲ್ಲಿ ಭರ್ತಿಯಾಗಿದೆ. ಆದರೆ ಸೆಪ್ಟೆಂಬರ್ ಅಂತ್ಯದಲ್ಲಿ ಭರ್ತಿಯಾಗಬೇಕೆಂದರೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 120 ಅಡಿಗಿಂತ ಮೇಲಿರಬೇಕು. ಈಗ ನೀರಿನ ಮಟ್ಟ 114 ಕ್ಕೆ ಕುಸಿದಿರುವುದರಿಂದ ಅಣೆಕಟ್ಟೆ ಭರ್ತಿ ಕಷ್ಟಸಾಧ್ಯ.

ದೇವರಾಜ ಅರಸು ಅವರಿಂದ ನಾಂದಿ:

1979 ರಲ್ಲಿ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಣೆಕಟ್ಟೆ ಭರ್ತಿಯಾದಾಗ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅಂದಿನಿಂದ ಇಂದಿನವರೆಗೆ ಅಣೆಕಟ್ಟೆಗೆ ಭರ್ತಿಯಾದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾದವರು ಬಾಗಿನ ಅರ್ಪಿಸುತ್ತಾ ಬಂದಿದ್ದಾರೆ. ಆದರೆ ಅಣೆಕಟ್ಟೆ ಭರ್ತಿಯಾಗದಿದ್ದಾಗ ಅಥವಾ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದ್ದಾಗ ಬಾಗಿನ ಅರ್ಪಿಸದಿರುವ ಉದಾಹರಣೆ ಸಹ ಇದೆ.

ಬಾಗಿನ ಅರ್ಪಣೆಗೆ ನಡೆದಿತ್ತು ಸಿದ್ಧತೆ:

ವಾಡಿಕೆಯಂತೆ ನದಿಗೆ ನೀರು ಬಿಟ್ಟ ಪರಿಣಾಮ ನೀರಿನ ಸಂಗ್ರಹದಲ್ಲಿ ಕಡಿಮೆಯಾಗಿದೆ. ಆಗಸ್ಟ್ ನಲ್ಲಿ ಕನಿಷ್ಠ 5 ದಿನ ನದಿಗೆ ನೀರು ಬಿಡುವುದನ್ನು ತಡೆದಿದ್ದರೆ ಅಣೆಕಟ್ಟೆ ಭರ್ತಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಾಗಿನ ಅರ್ಪಿಸುವ ಅವಕಾಶವಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಗಳು ಸಹ ನಡೆದಿದ್ದವು. ಆದರೆ ಇದೀಗ ಸಿಎಂಗೆ ಬಾಗಿನ ಅರ್ಪಿಸುವ ಅವಕಾಶ ತಪ್ಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.