ಕುಷ್ಟಗಿ (ಕೊಪ್ಪಳ) : ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಕಾಡಂಚಿನ ಗದ್ದೇರಹಟ್ಟಿ ಗ್ರಾಮದ ಏಕೈಕ ರಸ್ತೆಯ ಸಂಪರ್ಕ ಹಳ್ಳದ ಹಿನ್ನೀರಿನಿಂದಾಗಿ ಕಡಿತಗೊಂಡಿದೆ.
ತಾವರಗೇರಾ ರಾಯನ ಕೆರೆ ಭರ್ತಿಯಾಗಿ ಚಟ್ನಿಕೆರೆಯ ಮೂಲಕ ಹರಿಯುವ ಕನ್ನಾಳ ಹಳ್ಳ ಪುರ ಕೆರೆ ಸೇರುತ್ತದೆ. ಇದು ಪುರ ಕೆರೆ ಸೇರುವ ಸಂದರ್ಭದಲ್ಲಿ ಗುಡ್ಡಕ್ಕೆ ಒತ್ತಿ ನಿಲ್ಲುವ ಹಳ್ಳದ ನೀರಿನಿಂದ ಗದ್ದೇರಹಟ್ಟಿ ಸಂಪರ್ಕಿಸುವ ರಸ್ತೆ ಮುಳುಗುತ್ತದೆ. ಪ್ರತಿ ಬಾರಿಯೂ ಹಳ್ಳದ ಹಿನ್ನೀರಿನಿಂದ ರಸ್ತೆ ಮುಳುಗಿ, ಸಂಪರ್ಕ ಕಡಿತವಾಗುತ್ತದೆ.
ಇದು ಶಾಲೆಗೆ ಹೋಗುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಪಾಲಕರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ರಸ್ತೆ ದಾಟಿಸುವ ದೃಶ್ಯ ಸಾಮಾನ್ಯವಾಗಿದೆ. ಈ ಪ್ರದೇಶ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ಯಾವುದೇ ಕಟ್ಟಡ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಯಾಗಿದೆ.
ಈ ಕುರಿತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ಮಾತನಾಡಿ, ಗದ್ದೇರಹಟ್ಟಿಯಲ್ಲಿ ವಾಸವಿರುವ ಜನರ ಅಳಲು ಕೇಳುವವರಿಲ್ಲ. ಭರವಸೆ ನೀಡುತ್ತಿದ್ದಾರೆ, ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ. ಗದ್ದೇರಹಟ್ಟಿ ಸಂಪರ್ಕಿಸುವ ರಸ್ತೆಯಲ್ಲಿ ಕನ್ನಾಳ ಹಳ್ಳದ ಹಿನ್ನೀರು ಅಡ್ಡಗಟ್ಟಿದರೆ ಸಮಸ್ಯೆಗೆ ಕಾರಣವಾಗುತ್ತಿದೆ.
ಈ ರಸ್ತೆಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್, ಮಿನಿ ಸೇತುವೆ ನಿರ್ಮಿಸಬೇಕಿರುವುದು ಅಗತ್ಯ. ಇಲ್ಲವಾದಲ್ಲಿ ಹಳ್ಳದ ಹಿನ್ನೀರು ಬಂದಾಗೊಮ್ಮೆ ಶಾಲೆಗೆ ಗೈರಾಗುವುದು, ಅನಾರೋಗ್ಯ ಸಂದರ್ಭದಲ್ಲಿ ಆಸ್ಪತ್ರೆ ಹೋಗುವುದು ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಜಿಲ್ಲಾಡಳಿತ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.