ಕೊಪ್ಪಳದಲ್ಲಿ ಯುವಕ - ಬಾಲಕಿ ಸಾವು, ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?

author img

By

Published : Jan 14, 2023, 8:52 PM IST

Updated : Jan 15, 2023, 7:45 PM IST

lovers-committed-suicide-in-koppala

ಕೊಪ್ಪಳದಲ್ಲಿ ಯುವಕ, ಬಾಲಕಿ ಸಾವು - ಬಾಲಕಿಯನ್ನು ಕೊಂದ ಬಳಿಕ ಯುವಕ ಆತ್ಮಹತ್ಯೆ ಶಂಕೆ - ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಪ್ಪಳದಲ್ಲಿ ಯುವಕ - ಬಾಲಕಿ ಸಾವು, ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?

ಕೊಪ್ಪಳ: ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯುವಕನೋರ್ವ ಅಪ್ರಾಪ್ತೆಯ ಮನೆಗೆ ತೆರಳಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ ಬಳಿಕ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಬಾಲಕಿ ಹಾಗೂ ಪ್ರಕಾಶ ಭಜಂತ್ರಿ ಮೃತಪಟ್ಟವರು. ಇಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋಪಗೊಂಡ ಪ್ರಕಾಶ್​ ಶನಿವಾರ ಏಕಾಏಕಿ ಬಾಲಕಿಯ ಮನೆಗೆ ಬಂದು ಆಕೆಯನ್ನು ಚಾಕುವಿನಿಂದ ಕುತ್ತಿಗೆಗೆ ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಎಸ್​ಪಿ ಅರುಣಾಗ್ಷು ಗಿರಿ ಮಾಹಿತಿ ನೀಡಿದ್ದಾರೆ.

'ಬಾಲಕಿ ಹಾಗೂ ಯುವಕನ ನಡುವಿನ ಪ್ರೇಮದ ವಿಚಾರ ಇವರಿಬ್ಬರ ಮನೆಯವರಿಗೆ ಕೆಲ ದಿನಗಳ ಹಿಂದೆ ಗೊತ್ತಾಗಿತ್ತು. ಬಳಿಕ ಎರಡೂ ಕಡೆಯವರು ದೂರವಾಗುವಂತೆ ಬುದ್ದಿಮಾತು ಹೇಳಿದ್ದರು. ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಪ್ರಾಪ್ತೆಯು ಪ್ರಕಾಶನಿಂದ ದೂರವಾಗಲು ಯತ್ನಿಸಿದ್ದಾಳೆ. ಆದರೂ ಕೂಡ ಯುವಕ ಪ್ರೀತಿಸುವುದನ್ನು ಬಿಟ್ಟಿರಲಿಲ್ಲ. ಅಪ್ರಾಪ್ತೆಗೆ ಪ್ರೀತಿ ಮಾಡುವಂತೆ ಒತ್ತಾಯಿಸುತ್ತಲೇ ಇದ್ದ' ಎಂದು ಎಸ್​ಪಿ ಹೇಳಿದ್ದಾರೆ.

'ಬಾಲಕಿ ತನ್ನ ಪ್ರೀತಿ ನಿರಾಕರಣೆ ಮಾಡಿದಕ್ಕೆ ಕೋಪಗೊಂಡಿದ್ದ ಪ್ರಕಾಶ್​ ಶನಿವಾರ ಚಾಕು ಸಮೇತ ಆಗಮಿಸಿ ಬಾಲಕಿಯನ್ನು ಕೊಲೆ ಮಾಡಿದ್ದಾನೆ.‌ ನಂತರ ಅದೇ ಚಾಕುವಿನಿಂದ ತನ್ನ ಕುತ್ತಿಗೆಯನ್ನು ತಾನೇ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು. ಘಟನೆ ಸಂಬಂಧ ಬಾಲಕಿಯ ತಾಯಿ ದೂರು ನೀಡಿದ್ದು, ಈ ಸಂಬಂಧ ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ' ಎಂದು ಎಸ್​ಪಿ ತಿಳಿಸಿದರು.

ಅಡವಿಬಾವಿ ಪ್ರಕರಣವನ್ನು ನೆನಪಿದ ಘಟನೆ : ಹಲವು ವಿಷಯಕ್ಕೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಕಳೆದ ಕೆಲವು ತಿಂಗಳುಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ಯುವಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿತ್ತು. ಜಿಲ್ಲೆಯ ಕುಷ್ಟಗಿ ತಾಲೂಕಿನ ಅಡವಿಬಾವಿ ಎಂಬ ಗ್ರಾಮದಲ್ಲಿ ಒಂದೇ ಜಾತಿಯ ಹಾಗೂ ಮದುವೆಗೆ ಪಾಲಕರ ಒಪ್ಪಿಗೆ ಇದ್ದರೂ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಮರೇಶ ಮಾಲಿಪಾಟೀಲ(21), ಯಲ್ಲಮ್ಮ ಗೋನಾಳ (18) ಎಂಬವರು ಆತ್ಮಹತ್ಯೆಗೆ ಶರಣಾಗಿದ್ದರು.

ಈ ಜೋಡಿ ಅನ್ಯೋನ್ಯವಾಗಿರುವುದನ್ನು ಕಂಡು ಎರಡು ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಇಬ್ಬರಿಗೆ ನಿಶ್ಚಿತಾರ್ಥ ಮಾಡಿದ್ದರು. ಅಮರೇಶ ಮಾಲಿಪಾಟೀಲ, ತಾವರಗೇರಾ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ. ಯಲ್ಲಮ್ಮ ಗೋನಾಳ‌ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಸೋದರ ಸಂಬಂಧಿಯಾಗಿದ್ದರಿಂದ ಇವರ ಪ್ರೀತಿಗೆ ಪಾಲಕರ ವಿರೋಧ ಇರಲಿಲ್ಲ. ಖುಷಿ ಖುಷಿಯಾಗಿದ್ದ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದು ಗ್ರಾಮಸ್ಥರನ್ನು, ಮನೆಯವರನ್ನು ಬೆಚ್ಚಿಬೀಳುವಂತೆ ಮಾಡಿತ್ತು.

ಇದನ್ನೂ ಓದಿ : ಬಿಎಂಟಿಸಿ ಬಸ್‌ಗಳಲ್ಲಿ ಕಳ್ಳರ ಕೈಚಳಕ: 25 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ಗಳು ವಶಕ್ಕೆ

Last Updated :Jan 15, 2023, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.