ಗಂಗಾವತಿ: ಉಳಿತಾಯ ಖಾತೆಯಲ್ಲಿ ಹಣದ ಅವ್ಯವಹಾರವಾಗಿದೆ ಎಂದು ಆರೋಪಿಸಿದ ವ್ಯಕ್ತಿ ಮಹಿಳಾ ಪೋಸ್ಟ್ ಮಾಸ್ಟರ್ ಒಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಇಲ್ಲಿನ ಜಯನಗರದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಉಷಾ ಕುಲಕರ್ಣಿ ಎಂಬುವವರು ಕುಮಾರ ರಾಮ ಬಡವಾಣೆಯ ನಿವಾಸಿ ಖಾಜಿ ರಜಿ ಅಹ್ಮದ್ ಪಾಷಾ ಎಂಬುವವರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾನು ಈ ಮೊದಲು ಜಯನಗರದಲ್ಲಿರುವ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿಯು ತನ್ನ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಹಿಂಪಡೆದು ಖಾತೆ ಸ್ಥಗಿತಗೊಳಿಸಿದ್ದರು. ಬಳಿಕ ನಾನು ಶ್ರೀರಾಮನಗರಕ್ಕೆ ಅಲ್ಲಿಂದ ಗಂಗಾವತಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಈ ಸಂದರ್ಭದಲ್ಲಿ ತನ್ನ ಬಳಿ ಬಂದ ಆರೋಪಿಯು, ಉಳಿತಾಯ ಖಾತೆಯ ಸ್ಟೇಟ್ಮೆಂಟ್ ಪಡೆದು ಇದರಲ್ಲಿ ಮೂರು ಕಂತಿನ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ನನ್ನ ಮೇಲೆ ಹಾಗೂ ಇತರರ ಮೇಲೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದನು.
ತನಿಖೆ ಮಾಡಿದ ಮೇಲಧಿಕಾರಿಗಳು ವ್ಯಕ್ತಿ ಸಲ್ಲಿಸಿದ ದೂರಿನಲ್ಲಿ ಸತ್ಯಾಂಶವಿಲ್ಲದ್ದರಿಂದ ವರದಿ ನೀಡಿ ಪ್ರಕರಣ ಸಮಾಪ್ತಿಗೊಳಿಸಿದ್ದಾರೆ. ಇದಾದ ಬಳಿಕವೂ ವ್ಯಕ್ತಿ ಗುರುವಾರ ನಾನು ಮನೆಯಿಂದ ಕಚೇರಿಗೆ ಹೋಗುವಾಗ ನನ್ನ ಬೈಕ್ ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಷಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಹಾಕಿ ಸುಡುವುದಾಗಿ ಯುವತಿಗೆ ಬ್ಲ್ಯಾಕ್ಮೇಲ್: ಆರೋಪಿ ಶಾರುಖ್ ಬಂಧನ