ಗಂಗಾವತಿ: ತಾಲೂಕಿನ ಸರ್ಕಾರಿ ಶಾಲೆಯ ಬಾಲಕನೋರ್ವ ತ್ಯಾಜ್ಯ ಶುಚಿಗೊಳಿಸುವ ಯಂತ್ರ ಆವಿಷ್ಕಾರ ಮಾಡಿದ್ದು, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾನೆ. ಗಂಗಾವತಿ ನಗರದ ಅತ್ಯಂತ ಹಿಂದುಳಿದ ಬೇಗಾವಾಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕರಿಯಣ್ಣ ನಾಗಪ್ಪ ಎಂಬ 7ನೇ ತರಗತಿಯ ವಿದ್ಯಾರ್ಥಿ ಮನೆಯಲ್ಲಿ ಲಭಿಸುವ ವ್ಯರ್ಥ ಪದಾರ್ಥಗಳಿಂದಲೇ ಯಂತ್ರವೊಂದನ್ನು ಕಂಡು ಹಿಡಿದಿದ್ದಾನೆ.
ಪ್ಲಾಸ್ಟಿಕ್ ಪೈಪ್ ಸೇರಿದಂತೆ ಇತರ ವ್ಯರ್ಥ ಪದಾರ್ಥಗಳನ್ನು ಬಳಸಿಕೊಂಡು ಸೋಲಾರ್ ಶಕ್ತಿಯಿಂದ ಸ್ವಯಂಚಾಲಿತವಾಗಿ ಮನೆಯಲ್ಲಿನ ಮತ್ತು ನೆಲದ ಮೇಲಿನ ತ್ಯಾಜ್ಯ ಶುಚಿಗೊಳಿಸುವ ಯಂತ್ರವನ್ನು ಈ ಬಾಲಕ ಅವಿಷ್ಕರಿಸಿದ್ದಾನೆ.
ಯಂತ್ರ ತಯಾರಿಕೆಯ ಆರಂಭಿಕ ಹಂತದಲ್ಲಿದ್ದಾಗ ಅದು ಶಾಲೆಯ ಶಿಕ್ಷಕ ಶ್ರೀನಿವಾಸ ಎಂಬುವವರ ಗಮನಕ್ಕೆ ಬಂದಿದೆ. ಬಳಿಕ ಅವರು ಬಾಲಕನಿಗೆ ಮಾರ್ಗದರ್ಶನ ನೀಡಿ, ಯಂತ್ರದಲ್ಲಿ ಇನ್ನಷ್ಟು ಸುಧಾರಣೆ ತರಲು ಸಲಹೆ ನೀಡಿದ್ದಾರೆ. ಇದೀಗ ಈ ವಿದ್ಯಾರ್ಥಿಯ ಈ ಆವಿಷ್ಕಾರವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಶಿಕ್ಷಣ ಇಲಾಖೆಯಿಂದ ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಇನ್ಸ್ಪೈಯರ್ ಅವಾರ್ಡ್ ಹಂತಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿಯು ಅಲ್ಲಿಗೆ ತೆರಳಿ ಪ್ರದರ್ಶನ ನೀಡುತ್ತಿದ್ದಾನೆ. ಸೋಮವಾರ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಜಂಬೋ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ರೋಹಿತ್.. 2 ಗಂಟೆ ಚಾರ್ಜ್, 1080 ಕಿ.ಮೀಟರ್ ಪ್ರಯಾಣ