ಕುಷ್ಟಗಿ (ಕೊಪ್ಪಳ ): ಕುಷ್ಟಗಿ ಪಟ್ಟಣದ ಪರಿಶಿಷ್ಟ ವರ್ಗದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಅಡುಗೆ ಮಾಡುವಾಗ ಬಿಸಿ ನೀರು ಮೈಮೇಲೆ ಬಿದ್ದು ಅಡುಗೆ ಸಹಾಯಕ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ತಾಲೂಕಿನ ತಾವರಗೇರಾ ಗ್ರಾಮದ ಶಿವು ಹಳ್ಳಪ್ಪ ಕೊಂಬಿನ್ ಎಂದು ಗುರುತಿಸಲಾಗಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಸೆ. 22 ರಂದು ಒಲೆಯ ಮೇಲಿದ್ದ ಸಾಂಬಾರಿನ ಪಾತ್ರೆ ಇಳಿಸಲು ಹೋದಾಗ ಕಾಲು ಜಾರಿ ಸುಡುತ್ತಿರುವ ಪಾತ್ರೆಯಲ್ಲಿದ್ದ ಬಿಸಿ ನೀರು ಶಿವು ಅವರ ಮೈ ಮೇಲೆ ಬಿದ್ದಿತ್ತು. ಇದರಿಂದಾಗಿ ದೇಹದ ಹೆಚ್ಚಿನ ಭಾಗಗಳಲ್ಲಿ ಸುಟ್ಟ ಗಾಯಗಳಾಗಿದ್ದು, ಕೂಡಲೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ ಡಿ ಎಂ ದಾಖಲಿಸಿದ್ದು, ಆದರೆ ಶೇ.50 ರಷ್ಟು ದೇಹದ ಭಾಗ ಸುಟ್ಟಿದ್ದರಿಂದ ಸದರಿ ಆಸ್ಪತ್ರೆಯವರು ಚಿಕಿತ್ಸೆಗೆ ಮುಂದಾಗಿರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಹುಬ್ಬಳ್ಳಿಯ ಸೆಕ್ಯೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಶಿವು ಹಳ್ಳಪ್ಪ ಅವರಿಗೆ ತಂದೆ ಮತ್ತು ತಾಯಿ ಇಲ್ಲ. ಅನಾಥರಾಗಿದ್ದು ಮದುವೆಯೂ ಆಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಪರಿಶಿಷ್ಟ ವರ್ಗ ಕಲ್ಯಾಣ ಅಧಿಕಾರಿ ಈರಪ್ಪ ಅವರು, ನಮ್ಮ ನೌಕರ ಹುಬ್ಬಳ್ಳಿ ಸೆಕ್ಯೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಮನೆ ದರೋಡೆ