₹6 ಕೋಟಿ ಮೌಲ್ಯದ ಮೊಬೈಲ್ ತುಂಬಿದ್ದ ಕಂಟೇನರ್​ ದರೋಡೆ ಮಾಡಿದ್ದ ಗ್ಯಾಂಗ್ :​ ಓರ್ವ ಆರೋಪಿ ಬಂಧನ

author img

By

Published : Sep 15, 2021, 3:06 PM IST

ಕಂಟೇನರ್​ ದರೋಡೆ ಮಾಡಿದ್ದ ಗ್ಯಾಂಗ್

ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಕುಮಾರ್ ಅವರ ನೇತೃತ್ವದಲ್ಲಿ ನಾಲ್ಕು ಪೊಲೀಸ್ ತಂಡಗಳನ್ನ ರಚನೆ ಮಾಡಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು..

ಕೋಲಾರ : ಆರು ಕೋಟಿ ಮೌಲ್ಯದ MI ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಭಂದಿಸಿದಂತೆ, ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಓರ್ವ ಆರೋಪಿಯನ್ನ ಕೋಲಾರ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯ ಸಮುದ್ರ ಬಳಿ ಆಗಸ್ಟ್ 6ರಂದು ಚೆನ್ನೈನಿಂದ ಬೆಂಗಳೂರಿಗೆ ಹೋಗುತ್ತಿದ್ದ ಮೊಬೈಲ್ ತುಂಬಿದ್ದ ಕಂಟೇನರ್ ದರೋಡೆ ಮಾಡಲಾಗಿತ್ತು.

ತಮಿಳುನಾಡಿನ ಕಾಂಚೀಪುರಂನಿಂದ ಬೆಂಗಳೂರಿಗೆ ಸಾಗಾಣಿಕೆ ಮಾಡಲಾಗುತ್ತಿದ್ದ ಲಾರಿಯನ್ನ ಮುಳಬಾಗಿಲು ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-75ರ ದೇವರಾಯ ಸಮುದ್ರದ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಲಕನನ್ನ ಕಟ್ಟಿಹಾಕಿ, ಥಳಿಸಿ ಬಾಯಿಗೆ ಬಟ್ಟೆ ಇಟ್ಟು, ಲಾರಿ ಸಮೇತ ಪರಾರಿಯಾಗಿದ್ದರು.

ನಂತರ ಅದೇ ಹೆದ್ದಾರಿಯ ನೆರ್ನಹಳ್ಳಿ ಗೇಟ್ ಬಳಿ ಕಂಟೇನರ್ ನಿಲ್ಲಿಸಿ, ಬೇರೊಂದು ಲಾರಿಯ ಮೂಲಕ ಮೊಬೈಲ್​​ಗಳನ್ನ ತುಂಬಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌.

ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಕುಮಾರ್ ಅವರ ನೇತೃತ್ವದಲ್ಲಿ ನಾಲ್ಕು ಪೊಲೀಸ್ ತಂಡಗಳನ್ನ ರಚನೆ ಮಾಡಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಓರ್ವ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳ ಪತ್ತೆಗೂ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.