ಕೋಲಾರ: ಮೆದುಳು ನಿಷ್ಕ್ರೀಯಗೊಂಡಿದ್ದ ಮಹಿಳೆಯ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಶ್ವೇತಾ (29) ಎಂಬುವವರು ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು.
ದೈವ ಭಕ್ತಳಾಗಿದ್ದ ಶ್ವೇತ ಅವರು ಪ್ರತಿನಿತ್ಯ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿತ್ತು. ಎಂದಿನಂತೆ ಅವತ್ತು ಕೂಡ ದೇವರಿಗೆ ಹೂ ಇಟ್ಟು, ಕಳಶಕ್ಕೆಂದು ಎಲೆ ಹಾಗೂ ಬಾಳೆ ಹಣ್ಣು ತರಲು ಮನೆಯ ಹತ್ತಿರವೇ ಇದ್ದ ಅಂಗಡಿಗೆ ಹೋಗಿದ್ರು. ಅಲ್ಲಿ ಇದ್ದಕ್ಕಿದ್ದ ಹಾಗೆ ತಲೆತಿರುಗಿ ಅವರು ಬಿದ್ದಿದ್ದರು. ನಂತರ ಅವರನ್ನು ಕೋಲಾರದ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಕಾರಣ, ಕೈಗೆ ಮತ್ತು ಕಾಲಿಗೆ ಸ್ಟ್ರೋಕ್ ಹೊಡೆದಿರಬಹುದು ಎಂದು ಆಕೆಯ ಕುಟುಂಬಸ್ಥರು ಆಂಧ್ರದ ವಿರೂಪಾಕ್ಷಿಗೆ ನಾಟಿ ಔಷಧ ಕೊಡಿಸಲೆಂದು ಕರೆದುಕೊಂಡು ಹೋಗಿದ್ದರು. ಅಲ್ಲಿ ಶ್ವೇತಾರ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು, ಅಲ್ಲಿಯೇ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸೇರಿದ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ್ರು. ಆದರೆ ವೈದ್ಯರು ಕೈಚೆಲ್ಲಿದ ಪರಿಣಾಮ ಶ್ವೇತಾಳ ಕುಟುಂಬಸ್ಥರು, ಆಕೆಯನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ರು.
ಅಲ್ಲಿ ಒಂದೆರಡು ದಿನ ಚಿಕಿತ್ಸೆ ಕೊಡಿಸಿದ್ದ ಕುಟುಂಬಸ್ಥರಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಅವರನ್ನು ಅಬ್ಬಯ್ಯ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಯೂ ಸಹ ಅದೇ ರೀತಿಯ ಪ್ರತಿಕ್ರಿಯೆ ಬಂದ ನಂತರ, ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಬೆಡ್ ಖಾಲಿ ಇರದ ಹಿನ್ನೆಲೆ ಸೇಂಟ್ ಜಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಬಿಜಿಎಸ್ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿದ್ರು.
ಇದನ್ನೂ ಓದಿ: ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ
ಇಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ವೈದ್ಯರು ಕೈಚೆಲ್ಲಿದ್ದು, ಶ್ವೇತ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದ್ರಿಂದ ಮನನೊಂದಿದ್ದ ಕುಟುಂಬದವರು, ಶ್ವೇತಾಳ ದೇಹ ಮಣ್ಣಲ್ಲಿ ಮಣ್ಣಾಗುವ ಬದಲು, ನಾಲ್ಕು ಜನರಿಗೆ ಉಪಯೋಗವಾಗಲಿ ಎಂದು ಅಂಗಾಗ ದಾನಕ್ಕೆ ಮುಂದಾದ್ರು. ಈ ಹಿನ್ನೆಲೆ ಶ್ವೇತಾಳ ಕಣ್ಣುಗಳು, ಹೃದಯ ಕವಾಟ, ಯಕೃತ್ತು, ಮೂತ್ರಪಿಂಡ, ಚರ್ಮ ಮತ್ತು ಕಾರ್ನಿಯ ಅಂಗಾಂಗಳನ್ನ ದಾನ ಮಾಡಿದ್ದಾರೆ. ಈ ಮೂಲಕ ಶ್ವೇತಾಳ ಕುಟುಂಬಸ್ಥರು ಸಾರ್ಥಕತೆಯನ್ನ ಮೆರೆದಿದ್ದಾರೆ.
ಶ್ವೇತಾಳ ಕುಟುಂಬದಲ್ಲಿ ಒಂಬತ್ತು ಜನ ಸದಸ್ಯರಿದ್ದು, ಅವರೆಲ್ಲರೂ ಸಹ ಜಾಲಪ್ಪ ಆಸ್ಪತ್ರೆಗೆ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದಾರೆ. ರಕ್ತದಾನ ಮಾಡಲು ಮುಂದಾಗದ ಈ ಕಾಲದಲ್ಲಿ ಎಲ್ಲರೂ ಅಂಗಾಂಗ ದಾನಕ್ಕೆ ಮುಂದಾಗಿರುವುದು ಸಂತೋಷದ ವಿಷಯವಾಗಿದೆ. ಅಲ್ಲದೇ ಕುಟುಂಬಸ್ಥರೆಲ್ಲಾ ಅಂಗಾಂಗ ದಾನಕ್ಕೆ ಮುಂದಾಗಿರುವ ಕಾರಣ ಓಂ ಶಕ್ತಿ ಪೌಂಡೇಶನ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.