ದುಬಾರೆ ರಿವರ್​ ರ‍್ಯಾಫ್ಟಿಂಗ್​​​ ಬಂದ್: ನೂರಾರು ಕೆಲಸಗಾರರು ಕಂಗಾಲು, ಪ್ರವಾಸಿಗರಿಗೂ ನಿರಾಸೆ

author img

By

Published : Sep 14, 2021, 7:54 PM IST

river rafting

ಕೊರೊನಾ ಭೀತಿಯ ಕಾರಣ ದುಬಾರೆ ಪ್ರವಾಸಿ ತಾಣದಲ್ಲಿ ರಿವರ್​ ರ‍್ಯಾಫ್ಟಿಂಗ್​​ ಮಾಡುವುದಕ್ಕೆ ಸದ್ಯ ಜಿಲ್ಲಾಡಳಿತ ನಿಷೇಧ ಹೇರಿದೆ.

ಮಡಿಕೇರಿ/ಕೊಡಗು:ಕೊರೊನಾ ಹಿನ್ನೆಲೆಯಲ್ಲಿ ಬಂದ್​ ಆಗಿದ್ದ ಟೂರಿಸಂ ಇದೀಗ ಓಪನ್ ಆಗಿದೆ. ಕೊಡಗಿನ ಎಲ್ಲ ಪ್ರವಾಸಿತಾಣಗಳು ತೆರೆದಿದ್ರೂ ದುಬಾರೆಯಲ್ಲಿ ರಿವರ್​ ರ‍್ಯಾಫ್ಟಿಂಗ್ ಬಂದ್​ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. ಹೀಗಾಗಿ, ಇದನ್ನೇ ಆದಾಯದ ಭಾಗವಾಗಿ ಮಾಡಿಕೊಂಡಿದ್ದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ದುಬಾರೆಯಲ್ಲಿ‌, ಕಲ್ಲು ಬಂಡೆಗಳ ಮಧ್ಯೆ ರಭಸದಿಂದ ಹರಿಯೋ ನದಿಯಲ್ಲಿ ಜಲಕ್ರೀಡೆಯಾಡೋದು ಪ್ರವಾಸಿಗರಿಗೆ ಬಲು ಇಷ್ಟ. ದುಬಾರೆ ಕಾವೇರಿ ನದಿಯಲ್ಲಿ ಪ್ರತಿನಿತ್ಯ ನೂರಾರು ಮಂದಿ ರ‍್ಯಾಫ್ಟಿಂಗ್ ಎಂಜಾಯ್ ಮಾಡ್ತಾರೆ. ಆದ್ರೆ, ಕೊರೊನಾ ಕಾರಣಕ್ಕೆ ದುಬಾರೆ ರಿವರ್ ರ‍್ಯಾಫ್ಟಿಂಗ್ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ದುಬಾರೆ ರಿವರ್​ ರ‍್ಯಾಪ್ಟಿಂಗ್​​ ಬಂದ್

ಜುಲೈನಲ್ಲಿ ಲಾಕ್​ಡೌನ್ ಓಪನ್ ಆದ್ಮೇಲೆ ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್​​​ ಆರಂಭವಾಗಿತ್ತು. ಹಾಗಾಗಿ ಸಾಲ ಮಾಡಿ ರ‍್ಯಾಫ್ಟಿಂಗ್ ಬೋಟ್ ಖರೀದಿಸಿದ್ದ ಮಾಲೀಕರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ರ‍್ಯಾಫ್ಟಿಂಗ್​​ ಆರಂಭವಾಗಿ ಕೆಲವೇ ದಿನಗಳಲ್ಲಿ ಮತ್ತೆ ಸ್ಥಗಿತಗೊಳಿಸಲಾಗಿದೆ. ಆದರೆ ಇದರ ಅರಿವಿಲ್ಲದ ನೂರಾರು ಪ್ರವಾಸಿಗರು ರ‍್ಯಾಫ್ಟಿಂಗ್​​​ ಮಾಡಲು ದುಬಾರೆಯತ್ತ ಆಗಮಿಸ್ತಾ ಇದ್ದಾರೆ. ರ‍್ಯಾಫ್ಟಿಂಗ್ ಇಲ್ಲ ಎಂದು ತಿಳಿದು ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ.

ಬೋಟ್ ಮಾಲೀಕರ ಗೋಳು:

ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೋಟ್ ಖರೀದಿ ಮಾಡಿರೋ ಮಾಲೀಕರು ಕಳೆದ 16 ತಿಂಗಳಿನಿಂದ ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಇಲ್ಲಿ 60 ಬೋಟ್​ಗಳಿದ್ದು ಪ್ರತನಿತ್ಯ ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದ್ರೆ ಇದೀಗ 60 ಬೋಟ್​ಗಳ ಮಾಲೀಕರು ಮತ್ತು 120 ನೌಕರರು ಆದಾಯವಿಲ್ಲದೆ ಭಾರಿ ನಷ್ಟದಲ್ಲಿದ್ದಾರೆ. ಪಡೆದ ಸಾಲಕ್ಕೆ ಬಡ್ಡಿ ಕಟ್ಟಲೂ ಆಗದೆ ಪರಿತಪಿಸುತ್ತಿದ್ದಾರೆ.

ಇನ್ನು ಮಳೆಗಾಲದ ಕೆಲವು ತಿಂಗಳು ಮಾತ್ರ ನದಿಯಲ್ಲಿ ರ‍್ಯಾಫ್ಟಿಂಗ್ ಮಾಡಲು ಅವಕಾಶ ಇರೋದು. ಈ ಟೈಮ್​​ನಲ್ಲಿ ಮಾತ್ರ ಒಂದಷ್ಟು ಸಂಪಾದನೆ ಮಾಡಲು ಸಾಧ್ಯ. ಆದರೆ ಇಂಥ ಸಮಯದಲ್ಲೇ ಜಿಲ್ಲಾಡಳಿತ ಹೀಗೆ ಮಾಡಿದ್ರೆ ಹೇಗೆ ಎಂಬುದು ರ‍್ಯಾಫ್ಟಿಂಗ್ ಹುಡುಗರ ಮತ್ತು ಮಾಲೀಕರ ಅಳಲು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.