ಕೊಡಗು: ಬಿಜೆಪಿಗೆ ಏನು ಮಳೆ ನಿಲ್ಲಿಸೋಕೆ ಆಗುತ್ತಾ? ಎಂದು ರಾಜ್ಯದಲ್ಲಿ ಪ್ರವಾಹ ಬಂದರೂ ಸಚಿವರು, ಶಾಸಕರು ಕ್ಷೇತ್ರಗಳಿಗೆ ಹೋಗುತ್ತಿಲ್ಲ ಎಂಬ ಪ್ರತಿಪಕ್ಷದ ಆರೋಪಕ್ಕೆ ಸಚಿವ ಈಶ್ವರಪ್ಪ ಗರಂ ಆದರು.
ನಗರದಲ್ಲಿ ಮಾತನಾಡಿದ ಅವರು, ಮಳೆ ವಿಚಾರದಲ್ಲಿ ರಾಜಕೀಯದ ಪ್ರಶ್ನೆಯೇ ಬರಲ್ಲ. ನಮ್ಮ ಸಚಿವರು, ಶಾಸಕರು ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಕಾಂಗ್ರೆಸ್ನವರು ಸುಮ್ಮನೆ ಟೀಕಿಸುತ್ತಾರೆ. ಕೊಡಗಿನಲ್ಲಿ 45 ವರ್ಷಗಳಿಂದ ಬಂದಿರದ ಮಳೆ ಬಂದಿದೆ. ರಸ್ತೆಗಳು ಹಾಳಾಗಿವೆ ಅನ್ನೋದು ಗೊತ್ತಿದೆ. ಸರ್ಕಾರ ಎಲ್ಲಾ ಕೆಲಸವನ್ನು ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
ಸಿದ್ದರಾಮಯ್ಯರಿಗೆ ಬುದ್ದಿ ಬಂದಿಲ್ಲ:
ಬಿಜೆಪಿ 40% ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸೋತ್ರು. ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡ್ರು. ಹೀಗಿದ್ರೂ ಅವರಿಗೆ ಬುದ್ಧಿ ಬಂದಿಲ್ಲ. ಇವರು ಸರಿ ಅಲ್ಲ ಅಂತ ಜನ ಹೊರಗೆ ಹಾಕಿದ್ದು ಎಲ್ಲವೂ ಚುನಾವಣೆಯಲ್ಲಿ ಗೊತ್ತಾಗುತ್ತೆ. ಸಿದ್ದರಾಮಯ್ಯ ವಿಧಾನಸಭೆ ಒಳಗೂ, ಹೊರಗೂ ಮಾತಾಡಲ್ಲ. ಮುಂದೆ ಕಾಂಗ್ರೆಸ್ನಲ್ಲಿ ಬಹಳ ಜನ ಉಳಿಯಲ್ಲ. ಅನೇಕರು ಪಕ್ಷದಿಂದ ಹೊರಗೆ ಬರ್ತಾರೆ. ಸಿದ್ದರಾಮಯ್ಯ ಸ್ವಾರ್ಥದ ರಾಜಕಾರಣ ಮಾಡ್ತಿದ್ದಾರೆ ಅಂತ ಟೀಕಿಸಿದ್ರು.
ಕಾಂಗ್ರೆಸ್ನ್ನು ಬರ್ಬಾದ್ ಮಾಡುವ ಸಮಾವೇಶ:
ಜನ ಸ್ವರಾಜ್ ಸಮಾವೇಶ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿರೋದಕ್ಕೆ ಕಾಂಗ್ರೆಸ್ಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅನ್ನು ಬರ್ಬಾದ್ ಮಾಡುವ ಸಮಾವೇಶ ಇದು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ? ಅದು ಪ್ರಾದೇಶಿಕ ಪಕ್ಷ ಆಗಿದೆ. ಪಕ್ಷದಲ್ಲಿ ಹಲವು ಗುಂಪುಗಳಾಗಿವೆ. ಡಿಕೆಶಿ ಪರ, ಸಿದ್ದರಾಮಯ್ಯ ಪರ ಘೋಷಣೆ ಕೂಗ್ತಾರೆ. ಇಬ್ಬರಿಗೂ ಒಳಗೊಳಗೇ ಆಸೆ ಇದೆ. ನನ್ನ ಪರವಾಗಿ ಘೋಷಣೆ ಕೂಗಲಿ ಅಂತ. ಜಮೀರ್ ಪರ ಕೂಗಿದವರು ಸಿದ್ದರಾಮಯ್ಯ ಶಿಷ್ಯರು ಅಂತ ಈಶ್ವರಪ್ಪ ಲೇವಡಿ ಮಾಡಿದ್ರು.