ಮಂಜಿನ ನಗರಿ ಮಡಿಕೇರಿ ದಸರಾ ವೈಭವ.. ನಾಡಹಬ್ಬ ನಡೆದು ಬಂದ ಹಾದಿ

author img

By

Published : Oct 4, 2022, 11:49 AM IST

madikeri Dasara

ದಸರಾವನ್ನು ಮೈಸೂರು ಸ್ವಾಗತಿಸಿದರೆ, ಮಡಿಕೇರಿ ಬೀಳ್ಕೊಡುತ್ತದೆ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ಹೊತ್ತಿನಲ್ಲಿ ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ಪೌರಾಣಿಕ ಇತಿಹಾಸಕ್ಕೆ ಸಾಕ್ಷಿಯಾಗುತ್ತದೆ.

ಮಡಿಕೇರಿ: ಇಲ್ಲಿನ ದಸರಾ ಆಚರಣೆ ಇಂದು ನಿನ್ನೆಯದಲ್ಲ. ಇದಕ್ಕೆ ಗತಕಾಲದ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗ್ತಿದೆ.

1781ರಿಂದ 1809ರವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯ ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧ ಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರು ಎಂಬುದು ಇತಿಹಾಸ.

ಮಹಾಗಣಪತಿಗೆ ಮೊದಲ ಪೂಜೆ: ಆಗಿನ ಕಾಲದಲ್ಲಿ ಪಾಡ್ಯದ ಪ್ರಾತಃಕಾಲದಲ್ಲಿ ಏಳುತ್ತಿದ್ದ ಮಹಾರಾಜರು ಮಂಗಳಸ್ನಾನ ಮಾಡಿ ನವರಾತ್ರಿ ಉತ್ಸವಕ್ಕೆ ಸಂಕಲ್ಪ ತೊಡುತ್ತಿದ್ದರು. ಆ ನಂತರ ಕೋಟೆಯಲ್ಲಿರುವ ಮಹಾಗಣಪತಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನವರಾತ್ರಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ನವರಾತ್ರಿ ಕಾರ್ಯಕ್ರಮಗಳೆಲ್ಲವೂ ಅರಮನೆಯ ಆವರಣದಲ್ಲಿಯೇ ನಡೆಯುತ್ತಿತ್ತು. ನವರಾತ್ರಿ ಉತ್ಸವದಲ್ಲಿ ವಿಶೇಷ ರಾಜರ ದರ್ಬಾರ್, ಕುದುರೆ ಹಾಗೂ ಜಂಬೂಸವಾರಿಯೂ ನಡೆಯುತ್ತಿತ್ತಲ್ಲದೆ, ಕೊಡವರ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದವು.

ಬನ್ನಿ ಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ: ಅಂದು ಮೈಸೂರಿನಲ್ಲಿ ನಡೆಯುವಂತೆ ಜಂಬೂ ಸವಾರಿಯೂ ನಡೆಯುತ್ತಿತ್ತು. ಮಡಿಕೇರಿಯ ಅರಮನೆ ಆವರಣದಿಂದ ಮೆರವಣಿಗೆ ಆರಂಭವಾಗುತ್ತಿತ್ತು. ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದು ಕಡೆ ಮಹಾರಾಜರನ್ನು ಹೊತ್ತ ಆನೆ– ಹೀಗೆ ಎರಡು ಆನೆಗಳು ಮುನ್ನಡೆದರೆ ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು.

ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆಬೀಳುತ್ತಿತ್ತು.

ಜನೋತ್ಸವವಾದ ದಸರಾ: ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನೂ ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ. ಕೆ.ಎಸ್. ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸಿ, ಭಜನಾಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.

ಆ ದಿನಗಳಲ್ಲಿ ಹಿಂದಿನ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಎಲ್ಲಾ ಮಂಟಪಗಳು ನಿರ್ದಿಷ್ಟ ಸಮಯದಲ್ಲಿ ಹಾದುಹೋಗುವಂತೆಯೂ, ಉತ್ತಮ ಕಲಾಕೃತಿ ಹೊಂದಿದ ಮಂಟಪಗಳಿಗೆ ಬಹುಮಾನಗಳನ್ನು ನೀಡುವ ಸಂಪ್ರದಾಯವೂ ಜಾರಿಗೆ ಬಂತು. ಇದರೊಂದಿಗೆ ಮಂಟಪಗಳ ಮೆರವಣಿಗೆಯಲ್ಲಿ ಒಂದು ಧಾರ್ಮಿಕ ಶಿಸ್ತನ್ನು ಕಾಲೇಜು ರಸ್ತೆಯ ರಾಮಮಂದಿರವು ರೂಪಿಸಿತು.

ಅದೇನೆಂದರೆ, ವಿಜಯದಶಮಿ ದಿನದಂದು ನಡೆಯುವ ಮೆರವಣಿಗೆಯಲ್ಲಿ ಪೇಟೆ ಶ್ರೀರಾಮಮಂದಿರದ ಮಂಟಪ ಮಂಗಳವಾದ್ಯ ಹಾಗೂ ಕಳಶದೊಂದಿಗೆ ಬಾರದ ಹೊರತು ಕುಂದುರುಮೊಟ್ಟೆ ಶ್ರೀಚೌಟಿಮಾರಿಯಮ್ಮ ಕರಗ ಹೊರಡುವಂತಿಲ್ಲ. ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಕರಗಗಳಾಗಲೀ, ಮಂಟಪಗಳಾಗಲೀ ಮೆರವಣಿಗೆಯಲ್ಲಿ ಬರುವಂತಿಲ್ಲ. ಎಲ್ಲಾ ಕರಗಗಳು ಹಾಗೂಮಂಟಪಗಳು ಶ್ರೀ ದಂಡಿನಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರವೇ ಬನ್ನಿ ಕಡಿಯಲು ಮೆರವಣಿಗೆಯಲ್ಲಿ ಸಾಗಬೇಕು.

ಹಾಗಾಗಿ ಅಂದು ಪೇಟೆಯ ಶ್ರೀರಾಮಮಂದಿರದಿಂದ ಕಳಶ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಶ್ರೀ ಚೌಟಿಮಾರಿಯಮ್ಮ ದೇವಾಲಯಕ್ಕೆ ತೆರಳಿ ಅಲ್ಲಿ ಕರಗ ಪೂಜೆಯನ್ನು ಸ್ವೀಕರಿಸಿ, ಬಳಿಕ ಶ್ರೀ ಕಂಚಿ ಕಾಮಾಕ್ಷಮ್ಮ ದೇವಾಲಯಕ್ಕೆ ಹೋಗಿ ಅಲ್ಲಿಯೂ ಪೂಜೆಯನ್ನು ಸ್ವೀಕರಿಸಿ ಅಲ್ಲಿಂದ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಆಗಮಿಸುತ್ತದೆ. ಅದೇ ಸಮಯಕ್ಕೆ ಕೋಟೆಮಾರಿಯಮ್ಮ ದೇವಾಲಯದ ಕರಗ ಕೂಡ ಅಲ್ಲಿಗೆ ಬರುತ್ತದೆ. ಬಳಿಕ ಪೇಟೆ ರಾಮಮಂದಿರದ ಕಳಶ ಪೂಜೆ ನಡೆದು ಮೆರವಣಿಗೆ ಸಾಗುತ್ತದೆ.

ದಶಮಂಟಪಗಳ ಮೆರವಣಿಗೆ: ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನೂ ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ. ಕೆ.ಎಸ್. ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸಿ, ಭಜನಾಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.

ಮಡಿಕೇರಿ ನಗರದ ವಿವಿಧ ದೇವಾಲಯಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀ ಕೋಟೆಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ, ಶ್ರೀಕುಂದುರುಮೊಟ್ಟೆ ಚೌಟಿಮಾರಿಯಮ್ಮ, ಶ್ರೀದಂಡಿನಮಾರಿಯಮ್ಮ, ಶ್ರೀಕೋದಂಡರಾಮಮಂದಿರ, ಶ್ರೀಚೌಡೇಶ್ವರಿ, ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀಭಗವತಿ ಹಾಗೂ ಶ್ರೀಕೋಟೆಗಣಪತಿ ದೇವಾಲಯಗಳ ದಶಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.

ಕಲಾಕೃತಿಗಳ ಮೆರವಣಿಗೆ: ಹಿಂದೆ ಕೇವಲ ಐದೋ ಹತ್ತೋ ಸಾವಿರ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿದ್ದ ಮಂಟಪಗಳು ಇಂದು ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. ಜಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆಯಲ್ಲದೆ, ದೇವಲೋಕವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ.

ನಗರದ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಗಳಲ್ಲಿ ಜನೋತ್ಸವ ಕಾರ್ಯಕ್ರಮಗಳು ನಡೆದರೆ, ನಗರದಾದ್ಯಂತ ರಾತ್ರಿಪೂರ್ತಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ದಸರಾ ಸಮಿತಿಯು ಮಡಿಕೇರಿ ದಸರಾಕ್ಕೆ ಮೆರುಗು ನೀಡುವ ಉದ್ದೇಶದಿಂದ ಮೈಸೂರು ದಸರಾ ಮಾದರಿಯಲ್ಲಿ 9 ದಿನಗಳ ಕಾಲ ಕ್ರೀಡಾಕೂಟ, ಕವಿಗೋಷ್ಠಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

ಇದನ್ನೂ ಓದಿ: ಐತಿಹಾಸಿಕ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.