ಸಿಪಿಐ ಆರೋಗ್ಯದಲ್ಲಿ ಕೊಂಚ ಚೇತರಿಕೆ, ಆದರೂ 24 ಗಂಟೆ ಏನನ್ನೂ ಹೇಳಲು ಆಗಲ್ಲ: ವೈದ್ಯರ ಸ್ಪಷ್ಟನೆ

author img

By

Published : Sep 24, 2022, 8:36 PM IST

ಸಿಪಿಐ

ಗಾಂಜಾ ದಂಧೆಕೋರರಿಂದ ಸಿಪಿಐ ಮೇಲೆ ದಾಳಿ. ಸಿಪಿಐ ಶ್ರೀಮಂತ ಇಲ್ಲಾಳ ಆರೋಗ್ಯದಲ್ಲಿ ಕೊಂಚ ಚೇತರಿಕೆ. ಆದ್ರೂ 24 ಗಂಟೆ ಔಟ್ ಆಫ್ ಡೇಂಜರ್ ಎಂದು ಹೇಳಲು ಸಾಧ್ಯವಿಲ್ಲ ಎಂದ ವೈದ್ಯರು.

ಕಲಬುರಗಿ: ಮಹಾರಾಷ್ಟ್ರದ ಗಾಂಜಾ ದಂಧೆಕೋರರ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಚಿಂತಾಜನ‌ ಸ್ಥಿತಿಯಲ್ಲಿರುವ ಕಲಬುರಗಿ‌ ಗ್ರಾಮೀಣ‌ ಠಾಣೆ‌ ಸಿಪಿಐ ಶ್ರೀಮಂತ ಇಲ್ಲಾಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣುತ್ತಿದೆ. ಆದ್ರೂ 24 ಗಂಟೆಗಳ‌ ಕಾಲ‌ ಏನನ್ನೂ ಹೇಳಲು ಆಗಲ್ಲ‌ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಸಿಪಿಐ ಇಲ್ಲಾಳ ಅವರ ಆರೋಗ್ಯದ ಬಗ್ಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ನಿರ್ದೆಶಕ ಸಿದ್ದರೆಡ್ಡಿ ಹಾಗೂ ವೈದ್ಯರು ಮಾಹಿತಿ ನೀಡಿದರು. ಆಸ್ಪತ್ರೆಗೆ ಕರೆತಂದಾಗ ಇಲ್ಲಾಳ ಅವರ ಬಿಪಿ, ರಕ್ತ‌ ಸಂಚಲನ, ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ, ತುಂಬಾ ಗಂಭೀರ ಸ್ಥಿತಿಯಲ್ಲಿದ್ದರು. ಈಗ ಬಿಪಿ ನಿಯಂತ್ರಣಕ್ಕೆ ಬಂದಿದೆ. ಕಿಡ್ನಿ ಕೂಡ ಸರಿಯಾಗಿ ಕೆಲಸ ಮಾಡುತ್ತಿವೆ. ನಾವು ಅಂದುಕೊಂಡಂತೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

(ಓದಿ: ಹಲ್ಲೆಗೊಳಗಾದ ಸಿಪಿಐ ಇಲ್ಲಾಳಗೆ ಸೂಕ್ತ ಚಿಕಿತ್ಸೆಗೆ ಗೃಹ ಸಚಿವರ ಸೂಚನೆ : ಎಸ್​ಪಿ ಇಶಾ ಪಂತ್)

ಇನ್ನು ಮೆದುಳು, ಎದೆಯಲ್ಲಿ ಗಾಯ ಮತ್ತು ಮುಖದ ಮೂಳೆ ಮುರಿದಿರುವುದು ಕಂಡುಬಂದಿದೆ. ಸದ್ಯಕ್ಕೆ ಯಾವುದೆ ರೀತಿಯ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿಲ್ಲ, ಮೊದಲು ಆರೋಗ್ಯ ಸ್ಥಿರತೆಗೆ ಪ್ರಯತ್ನ ನಡೆದಿದೆ. ಎಮರ್ಜೆನ್ಸಿ ಇಂಟೆನ್ಶಿವ್ ಕೇರ್ ವೈದ್ಯ ಡಾ.ಸುದರ್ಶನ್ ಸೇರಿದಂತೆ 10 ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಬೆಳಗ್ಗೆ ಸಿಪಿಐ ಇಲ್ಲಾಳರ ದೇಹಸ್ಥಿತಿ ಗಂಭೀರವಾಗಿತ್ತು. ಅದಕ್ಕಾಗಿ ಏರ್‌ಲಿಫ್ಟ್ ಮಾಡೊದು ಬೇಡ ಎಂದಿದ್ವಿ, ನಾಳೆ ಕುಟುಂಬಸ್ಥರು ಬೇಕಾದರೆ ಏರ್‌ಲಿಫ್ಟ್ ಮಾಡಬಹುದು ಎಂದು ಸಿದ್ದಾರೆಡ್ಡಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ತುರೂರಿ ಗ್ರಾಮದಲ್ಲಿ ಪೊಲೀಸರ ಮೇಲೆ ಗಾಂಜಾ ದಂಧೆಕೋರರು ದಾಳಿ ಮಾಡಿದ್ದು, ಕಮಲಾಪುರ ಸರ್ಕಲ್ ಇನ್ಸ್​ಪೆಕ್ಟರ್ ಶ್ರೀಮಂತ ಇಲ್ಲಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪರಿಣಾಮ ಸಿಪಿಐ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಹಿಸಲಾಗುತ್ತಿದೆ.

(ಓದಿ: ಪೊಲೀಸರ ಮೇಲೆ ಗಾಂಜಾ ದಂಧೆಕೋರರ ಅಟ್ಟಹಾಸ: ಕಲಬುರಗಿ ಸರ್ಕಲ್ ಇನ್ಸ್​ಪೆಕ್ಟರ್​​ ಸ್ಥಿತಿ ಚಿಂತಾಜನಕ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.