ಮಕ್ಕಳ ಕಳ್ಳರ ವದಂತಿ.. ಕಾನೂನು ಕೈಗೆ ತೆಗೆದುಕೊಂಡರೆ ಕಠಿಣ ಕ್ರಮದ ಎಚ್ಚರಿಕೆ

author img

By

Published : Sep 18, 2022, 7:16 PM IST

fake news

ಮಕ್ಕಳ ಕಳ್ಳರ ಬಗ್ಗೆ ಸುಳ್ಳು ವದಂತಿಗಳನ್ನು ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ.

ಹಾವೇರಿ : ಮಕ್ಕಳ ಕಳ್ಳತನ ವದಂತಿ ಪ್ರಕರಣ ಹಾವೇರಿಯಲ್ಲಿ ಸಹ ಕಾಣಿಸಿಕೊಂಡಿವೆ. ಮಕ್ಕಳ ಕಳ್ಳತನ ಮಾಡಲು ಬಂದಿದ್ದಾರೆ ಎಂದು ಅಮಾಯಕ, ಅಸಹಾಯಕ ಮತ್ತು ಮಾನಸಿಕ ಅಸ್ವಸ್ಥ ಭಿಕ್ಷುಕರನ್ನು ಸ್ಥಳೀಯರು ಥಳಿಸಿದ ಘಟನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಐದು ಹಲ್ಲೆ ಪ್ರಕರಣಗಳು ವರದಿಯಾಗಿವೆ.

12 ರಂದು ಹಾವೇರಿ ತಾಲೂಕು ದೇವಗಿರಿಯಲ್ಲಿ ಬಾಂಬೆ ಮಿಠಾಯಿ ಮಾರುತ್ತಿದ್ದ ಬಾಲಕನ ಹಿಡಿದು ಥಳಿಸಿದ್ದ ಜನ ನಂತರ ಪೊಲೀಸರಿಗೆ ಒಪ್ಪಿಸಿದ್ದರು. 15 ರಂದು ಬಂಕಾಪುರದಲ್ಲಿ ಮಾತು ಬಾರದ ಭಿಕ್ಷುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದರು. ಅದೇ ಭಿಕ್ಷುಕ ಶಿಗ್ಗಾಂವಿಗೆ 16 ರಂದು ತೆರಳಿದಾಗ ಅಲ್ಲಿ ಸಹ ಥಳಿಸಿದ್ದರು. 15 ರಂದು ಶಿಗ್ಗಾಂವಿ ತಾಲೂಕಿನ ತವರಮೆಳ್ಳಹಳ್ಳಿಯಲ್ಲಿ ಅಮಾಯಕ ಮಹಿಳೆಯನ್ನು ತಡೆದು ಕೂಡಿ ಹಾಕಿ ಸ್ಥಳೀಯರು ಹಲ್ಲೆ ಮಾಡಿದ್ದರು. 16 ರಂದು ರಾಣೆಬೆನ್ನೂರಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹರಡಿತ್ತು. ಈ ಎಲ್ಲ ಪ್ರಕರಣಗಳಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಈ ರೀತಿ ಕೈಗೆ ಕಾನೂನು ತೆಗೆದುಕೊಳ್ಳುವ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಿದೆ.

ಕಾನೂನು ಕೈಗೆ ತೆಗೆದು ಕೊಂಡರೆ ಕಠಿಣ ಕ್ರಮ

ಈ ಕುರಿತಂತೆ ಮಾತನಾಡಿರುವ ಎಸ್​ಪಿ ಹನುಮಂತರಾಯ, ಯಾರೇ ಅಪರಿಚಿತರು ಅನುಮಾನಾಸ್ಪದವಾಗಿ ವರ್ತಿಸಿದರೇ ತಕ್ಷಣ ಪೊಲೀಸ್ ಸ್ಟೇಷನ್‌ಗೆ ಕರೆ ಮಾಡಿ ತಿಳಿಸುವಂತೆ ಹೇಳಿದ್ದಾರೆ. ಅಲ್ಲದೆ ತುರ್ತು ಸೇವೆ 112 ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರ ಬದಲು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುವದಾಗಿ ತಿಳಿಸಿದ್ದಾರೆ.

ಎಲ್ಲಿಯೂ ಮಕ್ಕಳ ಕಳ್ಳತನ ಪ್ರಕರಣ ದಾಖಲಾಗಿಲ್ಲ.. ಜಿಲ್ಲೆಯಲ್ಲಿ ಇದುವರೆಗೊ ಎಲ್ಲಿಯೂ ಮಕ್ಕಳ ಕಳ್ಳತನ ಪ್ರಕರಣಗಳು ನಡೆದಿಲ್ಲಾ ಎಂಬುದನ್ನು ಎಸ್​ಪಿ ಸ್ಪಷ್ಟಪಡಿಸಿದ್ದಾರೆ. ತವರುಮಳ್ಳಹಳ್ಳಿ ಗ್ರಾಮದಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿದ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ. ಅನಿತಾ ಅಲಿಯಾಸ್ ಸೀತಾ ಕೋಂ ರಾಮ ಎಂಬುವರನ್ನು ಗ್ರಾಮಸ್ಥರು ಹಿಡಿದು ಮಕ್ಕಳ ಕಳ್ಳಿ ಎಂದು ಆರೋಪಿಸಿದ್ದರು. ಅಲ್ಲದೆ ಆ ಮಹಿಳೆಗೆ ಸಾರ್ವಜನಿಕ ಸ್ಥಳದಲ್ಲಿ ಕೂರಿಸಿ ಥಳಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಆ ಮಹಿಳೆ ಮಕ್ಕಳ ಕಳ್ಳತನಕ್ಕೆ ಬಂದಿರಲಿಲ್ಲಾ ಎಂದು ಅರಿತ ಪೊಲೀಸರು ಮಹಿಳೆಗೆ ಚಿಕಿತ್ಸೆ ನೀಡಿ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದ್ದರು. ಅನಿತಾ ಮೇಲೆ ಹಲ್ಲೆ ಮಾಡಿದ ಗ್ರಾಮಸ್ಥರ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಲಂ 143, 147, 323, 341 ಮತ್ತು 504 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮನೆಗೆ ನುಗ್ಗಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.