ಫಸಲಿಗೆ ಬಂದ 700 ಅಡಿಕೆ ಮರಗಳ ಮಾರಣಹೋಮ: ತೋಟದ ಮಾಲೀಕನ ಕಣ್ಣೀರು

author img

By

Published : Sep 12, 2021, 8:23 PM IST

perpetrators cut down more than 700 areca nut tree

ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 700ಕ್ಕೂ ಅಧಿಕ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ :ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ದುಷ್ಕರ್ಮಿಗಳು ಫಸಲಿಗೆ ಬಂದಿದ್ದ 700ಕ್ಕೂ ಅಧಿಕ ಅಡಿಕೆ ಮರಗಳನ್ನು ಕಡಿದು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

700 ಅಡಿಕೆ ಮರಗಳನ್ನು ನಾಶ ಮಾಡಿ ದುಷ್ಕರ್ಮಿಗಳು ಪರಾರಿ

ಗ್ರಾಮದ ಖಲೀಲ್ ಅಹ್ಮದ್ ವಾಲೀಕಾರ್ ಎಂಬುವವರು ಆರು ವರ್ಷಗಳ ಹಿಂದೆ, ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಎರಡು ಎಕರೆ ತೋಟದಲ್ಲಿ 750ಕ್ಕೂ ಹೆಚ್ಚು ಅಡಿಕೆ ಸಸಿ ನೆಟ್ಟಿದ್ದರು. ಅವುಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದರು. ಅಡಿಕೆ ತೋಟದಲ್ಲಿ ಬೆಳೆದು ನಿಂತಿದ್ದ ಕೆಲವು ಮರಗಳು ಈ ವರ್ಷ ಫಸಲು ಬಿಡಲಾರಂಭಿಸಿದ್ದವು.

ಆದರೆ ಕಳೆದ ರಾತ್ರಿ ಖಲೀಲ್​​ ಗ್ರಾಮದಲ್ಲಿ ಇಲ್ಲದಿರುವುದನ್ನು ತಿಳಿದುಕೊಂಡ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಅಡಿಕೆ ಮರಗಳನ್ನು ಕೊಚ್ಚಿ ಹಾಕಿದ್ದಾರೆ. ಬೆರಳೆಣಿಕೆ ಮರಗಳನ್ನು ಬಿಟ್ಟಿದ್ದು, ಉಳಿದ ಅಡಿಕೆ ಮರಗಳನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ. ಅಡಿಕೆ ಫಸಲು ಬಿಡುತ್ತಿರುವ ಸಮಯದಲ್ಲಿ ಕಿಡಿಗೇಡಿಗಳು ಈ ರೀತಿ ಮಾಡಿರುವುದು ತೋಟದ ಮಾಲೀಕನ ಕುಟುಂಬವನ್ನು ಕಣ್ಣೀರು ಹಾಕುವಂತೆ ಮಾಡಿದೆ.

ಖಲೀಲ್​​ ತೋಟಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಅವರು ಕೂಡಲೇ ಆಡೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆಡೂರು ಠಾಣೆಯ ಪಿಎಸ್ಐ ನೀಲಪ್ಪ ನರಲಾರ, ಸಿಪಿಐ ಶಿವಶಂಕರ ಗಣಾಚಾರಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರು ಸಹ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಎಸ್​​ಪಿ ವಿಜಯಕುಮಾರ್ ಸಂತೋಷ್ ಭೇಟಿ ನೀಡಿದ್ದಾರೆ. ಖಲೀಲ್​ ಅವರ ತೋಟದಲ್ಲಿ ನಡೆದಿರುವ ದುಷ್ಕೃತ್ಯಕ್ಕೆ ಗ್ರಾಮಸ್ಥರು ಸಹ ಮರುಗಿದ್ದಾರೆ.ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು. ಮುಂದೆಂದೂ ಈ ರೀತಿಯ ದುಷ್ಕೃತ್ಯ ನಡೆಯದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.