ಹಾವೇರಿ: ನಗರದ ಇಂಜಿನಿಯರಿಂಗ್ ಕಾಲೇಜು ವಿರುದ್ಧ ಇದೀಗ ಆರೋಪಗಳ ಮೇಲೆ ಆರೋಪಗಳು ಕೇಳಿಬರುತ್ತಿವೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸ್ಟುಡೆಂಟ್ ಲೋನ್ ಸೇರಿದಂತೆ ಕೊನೆಗೆ ಶುಲ್ಕ ಕಟ್ಟಿಸಿಕೊಳ್ಳುವುದರಲ್ಲಿ ಸಹ ಗೋಲ್ಮಾಲ್ ನಡೆದ ಆರೋಪ ಕೇಳಿಬಂದಿವೆ.
ಹಾವೇರಿ ಇಂಜಿನಿಯರಿಂಗ್ ಕಾಲೇಜು ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ದೇವಗಿರಿ ಗ್ರಾಮದ ಹೊರವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜಿನಲ್ಲಿ ಸಿವಿಲ್ ಕಂಪ್ಯೂಟರ್ ಇಂಜಿನಿಯರಿಂಗ್ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ 933 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಕಾಲೇಜಿಗೆ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ.
ರಾಜ್ಯದ ವಿವಿಧೆಡೆಯಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿ ಸಾಲ ಮಹತ್ತರವಾದ ಪಾತ್ರವಹಿಸುತ್ತದೆ. ಆದರೆ, ಕಳೆದ ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಖಾತೆಗೆ ಲೋನ್ ಅಮೌಂಟ್ ಅಥವಾ ವಿದ್ಯಾರ್ಥಿವೇತನದ ಹಣ ದೊರೆತಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಚೆಕ್ಗಳು ನೀಡಿದರೂ ಸಹ ಅವು ಬೌನ್ಸ್ ಆಗಿವೆ.
ಆರು ಜನರ ಮೇಲೆ ಎಫ್ಐಆರ್: ವಿದ್ಯಾರ್ಥಿಗಳಿಗೆ ಬಿಡುಗಡೆಯಾಗಿದ್ದ ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿ ಸಾಲದ ಹಣವನ್ನು ಕಾಲೇಜಿನ ಕೆಲ ಸಿಬ್ಬಂದಿಯೇ ಲೂಟಿ ಹೊಡೆದಿದ್ದಾರೆ. ಇದಷ್ಟೇ ಅಲ್ಲದೆ ವಿದ್ಯಾರ್ಥಿಗಳ ಪ್ರವೇಶಾತಿ ಮತ್ತು ಶುಲ್ಕ ಪಾವತಿ ವೇಳೆ ಸಹ ಅವ್ಯವಹಾರವಾದ ಆರೋಪಗಳು ಕೇಳಿಬಂದಿವೆ. ವಿದ್ಯಾರ್ಥಿಗಳಿಗೆ ನೀಡುವ ರಶೀದಿ ಬೇರೆ ಮತ್ತು ನಿಜವಾದ ರಶೀದಿ ಬೇರೆಯಾಗಿದೆ. ಇದರಲ್ಲಿ ಸಹ ಲಕ್ಷಾಂತರ ರೂಪಾಯಿ ಲೂಟಿಯಾಗಿರುವ ಆರೋಪಗಳಿವೆ. ಈ ಕುರಿತಂತೆ ವಿದ್ಯಾರ್ಥಿಗಳಿಂದ ಆರೋಪಗಳು ಕೇಳಿಬರುತ್ತಿದ್ದಂತೆ ಪ್ರಸ್ತುತ ಕಾಲೇಜು ಪ್ರಾಚಾರ್ಯರಾಗಿರುವ ಡಾ.ಜಗದೀಶ್ ಕೋರಿ ಹಾವೇರಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆರು ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಕಾಲೇಜಿನ ಹಿಂದಿನ ಪ್ರಾಚಾರ್ಯ ಡಾ.ಕೆ.ಬಿ ಪ್ರಕಾಶ್ ಕಾಲೇಜಿನ ಕಚೇರಿ ಅಧೀಕ್ಷಕರಾದ ಹೆಚ್. ವಾಸುದೇವ, ಗುರಪ್ಪ ಸುಂಕದವರ ಪ್ರಥಮ ದರ್ಜಿ ಸಹಾಯಕಿ ಜಯಮ್ಮ ಕಾಚೇರ್, ದ್ವಿತೀಯ ದರ್ಜಿ ಸಹಾಯಕ ರವೀಂದ್ರಕುಮಾರ್, ಅನೀಲ್ ಕುಮಾರ್ ಕಟ್ಟೆಗಾರ ಎಂಬ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಸಾಲ, ಪ್ರವೇಶಾತಿ ಶುಲ್ಕ ಮತ್ತು ಪರೀಕ್ಷಾ ಶುಲ್ಕದ ಹೆಸರಿನಲ್ಲಿ ಸುಮಾರು 3 ಕೋಟಿ 14 ಲಕ್ಷ ರೂಪಾಯಿ ಅವ್ಯವಹಾರವಾಗಿದೆ ಎಂದು ನೂತನ ಪ್ರಾಚಾರ್ಯ ಪ್ರಕರಣ ದಾಖಲಿಸಿದ್ದಾರೆ.
ಇದರಲ್ಲಿ ಪ್ರಾಚಾರ್ಯ ಡಾ. ಕೆ. ಬಿ ಪ್ರಕಾಶ್ ನಿವೃತ್ತಿಯಾಗಿದ್ದು ಉಳಿದ ಐವರನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ಕಾಲೇಜ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಹ ದೂರು ನೀಡಿದ್ದು, ಆರೋಪಿತರ ಮೇಲೆ ಇಲಾಖಾ ತನಿಖೆ ಸಹ ಆಗುತ್ತಿದೆ. ಇದೇ ವೇಳೆ ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ನಿವೃತ್ತ ಪ್ರಾಚಾರ್ಯ ಡಾ. ಕೆ. ಬಿ ಪ್ರಕಾಶ್ ಇದರಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ಇದೆಲ್ಲಾ ಸಿಬ್ಬಂದಿ ಮಾಡಿದ ತಪ್ಪು. ಇದಕ್ಕಾಗಿ ತಮ್ಮ ಮೇಲೆ ಆರೋಪಗಳು ಕೇಳಿಬಂದಿವೆ. ಇದರಲ್ಲಿ ನನ್ನ ಪಾತ್ರವಿದ್ದರೆ ಸರ್ಕಾರ ನೀಡುವ ಯಾವ ಶಿಕ್ಷೆಗಾದರೂ ನಾನು ಸಿದ್ದ ಎಂದು ತಿಳಿಸಿದ್ದಾರೆ.
ಸರ್ಕಾರ ಕುರಿತಂತೆ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅನ್ಯಾಯವಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 'ಜನತಾ ಮಿತ್ರ' ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ ಹೆಚ್ಡಿಕೆ