JDS ಅಧಃಪತನ ಪ್ರಾರಂಭವಾಗಿದೆ: ಡಿ.ವಿ.ಸದಾನಂದಗೌಡ

author img

By

Published : Nov 22, 2021, 10:45 AM IST

DV Sadananda Gowda

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಆಚೆಗೆ ಬರುವ ಸೂಚನೆ ಇದೆ. ಜೆಡಿಎಸ್ ಪಕ್ಷಕ್ಕೆ ಕೊನೆಯ ಶವಪೆಟ್ಟಿಗೆ ಮಳೆ ಹೊಡೆಯುವ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ(DV Sadananda Gowda) ಲೇವಡಿ ಮಾಡಿದರು.

ಹಾಸನ: ಜೆಡಿಎಸ್ ಪಕ್ಷದ ಅಧಃಪತನ ಪ್ರಾರಂಭವಾಗಿದ್ದು, ಅಲ್ಲಿದ್ದ ಶಾಸಕರು ಹೊರಬರಲು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ(DV Sadananda Gowda) ವಾಗ್ದಾಳಿ ನಡೆಸಿದರು.

ಹಾಸನದ ಸಾಲಗಾಮೆ ರಸ್ತೆಯ ಮಲೆನಾಡು ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ 'ಜನ ಸ್ವರಾಜ್ ಸಮಾವೇಶ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

'ಜನ ಸ್ವರಾಜ್ ಸಮಾವೇಶ' ಕಾರ್ಯಕ್ರಮ ಉದ್ಘಾಟಿಸಿದ ಡಿ.ವಿ.ಸದಾನಂದಗೌಡ

ಮೋದಿ ದೇಶದ ಪ್ರಧಾನಿ ಅಲ್ಲ, ಈ ದೇಶದ ಸೇವಕ. ಆದರೆ, ಕುಟುಂಬವೇ ಸರ್ವಸ್ವ, ಕುಟುಂಬವೇ ಎಲ್ಲ ಎನ್ನುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೊಂದಿದೆ. ಆ ಕುಟುಂಬದ 8ನೇ ಸದಸ್ಯರು ವಿಧಾನ ಪರಿಷತ್ ಪ್ರವೇಶಿಸುವ ದಯನೀಯ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.

ಹಾಸನ ಜಿಲ್ಲೆಯಲ್ಲಿ ಈ ಹಿಂದೆ ಬಿಜೆಪಿ ಪಕ್ಷದ 4 ಶಾಸಕರು ವಿಧಾನಸಭೆಯಲ್ಲಿದ್ದರು. ಜಿಲ್ಲೆಯಲ್ಲಿ ನಾವೇನು ಸಣ್ಣವರಲ್ಲ. ಜೆಡಿಎಸ್ ಪಕ್ಷದ ಶಾಸಕರು ಅಲ್ಲಿಂದ ಹೊರಬರಲು ಪ್ರಾರಂಭಿಸಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಚೆಗೆ ಬರುವ ಸೂಚನೆ ಇದೆ. ಜೆಡಿಎಸ್ ಪಕ್ಷಕ್ಕೆ ಕೊನೆಯ ಶವಪೆಟ್ಟಿಗೆ ಮಳೆ ಒಡೆಯುವ ಸ್ಥಿತಿ ಬಂದಿದೆ. ಹಾಸನ ಜಿಲ್ಲೆ ಕುರುಡು ಕಾಂಚಾಣ ಹರಿದಾಡುವ ಮಾಹಿತಿ ನಮಗೆ ಬಂದಿದೆ ಎಂದು ಸಚಿವರು ಹೇಳಿದರು.

ಇನ್ನೂ ಎಷ್ಟು ಜನರನ್ನು ನೀವು ಗೆಲ್ಲಿಸುತ್ತೀರಾ?

ಹಾಸನ ಜನ ಬುದ್ಧಿವಂತರು. ಆದರೆ ನಿರಂತರವಾಗಿ ಕುಟುಂಬಕ್ಕೆ ಯಾಕೆ ಶರಣಾಗುತ್ತೀರಿ?. ಈ ಜಿಲ್ಲೆಯಲ್ಲಿಯೂ ಪ್ರಜಾತಂತ್ರ ವ್ಯವಸ್ಥೆ ಜಾರಿಯಾಗಬೇಕು. ಒಂದು ಕುಟುಂಬಕ್ಕೆ ಯಾಕೆ ಶರಣಾಗುತ್ತಿದ್ದೀರಿ ಅರ್ಥವಾಗುತ್ತಿಲ್ಲ. ವಿಧಾನಸಭೆಗೆ ಹೆಚ್.ಡಿ.ರೇವಣ್ಣ, ಸಂಸತ್‌ಗೆ ಪ್ರಜ್ವಲ್ ಸಾಕಿತ್ತು.

ಆದರೆ ಇನ್ನೂ ಎಷ್ಟು ಜನರನ್ನು ನೀವು ಗೆಲ್ಲಿಸುತ್ತೀರಾ ಹೇಳಿ? ಎಂದು ಹಾಸನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಜಿ ಪ್ರಧಾನಿ ಹೆಚ್‌ಡಿಡಿ ಕುಟುಂಬದ ವಿರುದ್ಧ ಗುಡುಗಿದರು.

ಪ್ರಜಾತಂತ್ರ ವ್ಯವಸ್ಥೆ ಅಣಕಿಸುವಂತೆ ರಾಜಕೀಯ ಮಾಡುತ್ತಿದ್ದಾರೆ. ಹೆಂಡ ಮಾರುವವರನ್ನು ಕರೆತರುವ ಪ್ರಯತ್ನ ಮಾಡುತ್ತಿದೆ. ಆದರೆ ನಾವು ಒಳ್ಳೆಯ ಅಭ್ಯರ್ಥಿಯನ್ನ ತಂದು ನಿಲ್ಲಿಸಿದ್ದೇವೆ.

ಬೆಳಗ್ಗೆ ತಂದೆಗೆ ನಮಸ್ಕಾರ, ಮಧ್ಯಾಹ್ನ ಮಗನಿಗೆ ನಮಸ್ಕಾರ, ಸಂಜೆ ಸೊಸೆಗೆ ಸಮಸ್ಕಾರ ಮಾಡಬೇಕು. ಇದಕ್ಕೆ ಬೇಸತ್ತು ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಕೆ. ಗೋಪಾಲಯ್ಯ ಜೆಡಿಎಸ್ ಪಕ್ಷ ತೊರೆದು ಬಂದರು ಎಂದು ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ದೇವೇಗೌಡ ಕುಟುಂಬದಲ್ಲಿ ರಾಜಕಾರಣಕ್ಕೆ ಬರದಿದ್ದವರು ಯಾರು?:

ಹೆಚ್.ಡಿ ದೇವೇಗೌಡ ಕುಟುಂಬದಲ್ಲಿ ಎಷ್ಟು ಜನ ರಾಜಕೀಯದಲ್ಲಿದ್ದಾರೆ ಗೊತ್ತಾ?. ದೇವೇಗೌಡ ಕುಟುಂಬದಲ್ಲಿ ರಾಜಕಾರಣಕ್ಕೆ ಬರದಿದ್ದವರು ಯಾರು?. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಭವಾನಿ, ನಿಖಿಲ್, ಪ್ರಜ್ವಲ್, ಅನಿತಾ ಇವರನ್ನ ಬಿಟ್ಟರೆ ಬೇರೆ ಯಾರಿದ್ದಾರೆ? ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ದೇವೇಗೌಡರನ್ನು ಚುನಾವಣೆಯಲ್ಲಿ ನಾವು ಸೋಲಿಸಿದ್ವಾ?. ಮಂಡ್ಯ ಎಂಪಿ ಚುನಾವಣೆಯಲ್ಲಿ ನಿಖಿಲ್ ಸೋಲಿಸಿಲ್ಲವೆ?. 8 ಜನ ರಾಜಕೀಯದಲ್ಲಿರುವ ಕುಟುಂಬ ಬೇರೆ ಯಾವುದಿದೆ?. ಒಂದೇ ಕುಟುಂಬದ 8 ಜನ ರಾಜಕಾರಣ ಮಾಡಬಾರದು. ಅದನ್ನು ಈ ಚುನಾವಣೆ ಮೂಲಕ ನಿರ್ಧಾರ ಮಾಡಬೇಕು ಎಂದು ಸಚಿವ ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: ಕಸಾಪಕ್ಕೆ ನಾಡೋಜ ಡಾ.ಮಹೇಶ ಜೋಷಿ ಅಧ್ಯಕ್ಷ: ಅಧಿಕೃತ ಘೋಷಣೆಯೊಂದೇ ಬಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.