ಹೆಚ್​ ಡಿ ರೇವಣ್ಣ ನನ್ನ ವಿರುದ್ಧ ಗೆದ್ದು ತೋರಿಸಲಿ.. ಶಾಸಕ ಪ್ರೀತಮ್ ಗೌಡ ಸವಾಲು

author img

By

Published : Sep 4, 2022, 7:58 PM IST

minister-pritham-gowda-challenges-hd-revanna

ರೇವಣ್ಣ ಅವರು ಅವರ ಕ್ಷೇತ್ರವನ್ನು ಬಿಟ್ಟು ನಮ್ಮ ಕ್ಷೇತ್ರದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದರೆ, ರೇವಣ್ಣ ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಶಾಸಕ ಪ್ರೀತಮ್ ಗೌಡ ಸವಾಲೆಸೆದಿದ್ದಾರೆ.

ಹಾಸನ : ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಹಿರಿಯರಾಗಿದ್ದು, ಅವರ ಬಗ್ಗೆ ನನಗೆ ಗೌರವವಿದೆ. ರಾಜಕಾರಣ ಅಂತ ಬಂದಾಗ ಮಾತ್ರ ಅವರು ಯಾವ ರಾಜಕೀಯ ಮಾಡುತ್ತಾರೋ ಅದೇ ರಾಜಕೀಯವನ್ನು ನಾನು ಕೂಡ ಮಾಡುತ್ತೇನೆ. ಇಬ್ಬರೂ ಜನರ ಏಳಿಗೆಗಾಗಿ ಕೆಲಸ ಮಾಡೋಣ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಅವರು ರೇವಣ್ಣಗೆ ತಿರುಗೇಟು ನೀಡಿದ್ದಾರೆ.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹಾಸನ ವಿಧಾನಸಭಾ ಕ್ಷೇತ್ರ ಘಟಾನುಘಟಿ ನಾಯಕರನ್ನು ಹೊಂದಿರುವ ಕ್ಷೇತ್ರವಾಗಿದೆ. ಜನರ ಆಶೀರ್ವಾದ, ತಾಯಿ ಹಾಸನಾಂಬೆಯ ಕೃಪೆಯಿಂದ ನಾನು ಶಾಸಕನಾಗಿ ಆಯ್ಕೆಗೊಂಡು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಪಕ್ಷದ ಮುಖಂಡರು ರಾಜಕಾರಣ ಹಾಗೂ ಚುನಾಯಿತ ಜನಪ್ರತಿನಿಧಿಯಾಗಲು ಪ್ರಯತ್ನಪಡುತ್ತಿದ್ದಾರೆ. ಇವರಲ್ಲಿ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರನ್ನೇ ಜನ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

ರೇವಣ್ಣ ಹಿರಿಯರು. ಅವರನ್ನು ತಡೆಯುವ ಶಕ್ತಿ ನನಗೆಲ್ಲಿದೆ. ಈ ಹಿಂದೆ ಅವರಿಗೆ ನಾನು ಏಕೆ ಸವಾಲು ಹಾಕಿದೆ ಎಂಬ ಉದ್ದೇಶ ರೇವಣ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಹಿಂದೆ ನಾನು ನೀಡಿದ ಮಾತಿಗೆ ಇಂದಿಗೂ ಬದ್ಧನಾಗಿದ್ದೇನೆ. ಅದನ್ನು ಮತ್ತೆ ಹೇಳಬೇಕಿಲ್ಲ ಎಂದರು.

ರೇವಣ್ಣ ನನ್ನ ವಿರುದ್ದ ಗೆದ್ದು ತೋರಿಸಲಿ.. ಶಾಸಕ ಪ್ರೀತಮ್ ಗೌಡ

ನನ್ನ ವಿರುದ್ಧ ಚುನಾವಣೆಗೆ ನಿಂತು ಗೆಲ್ಲಲಿ : ರೇವಣ್ಣ ಹೊಳೆನರಸೀಪುರ ಶಾಸಕ. ಅವರು ಅವರ ಕ್ಷೇತ್ರದ ಕೆಲಸವನ್ನು ಮಾಡಬೇಕು. ಅದನ್ನು ಬಿಟ್ಟು ಹಾಸನ ವಿಧಾನಸಭಾ ಕ್ಷೇತ್ರದ ಕೆಲಸಗಳಿಗೆ ಹಸ್ತಕ್ಷೇಪ ಮಾಡುತ್ತಾರೆ. ಟ್ರಕ್ ಟರ್ಮಿನಲ್ ವಿಚಾರವಾಗಿ ರೇವಣ್ಣ ಹಸ್ತಕ್ಷೇಪ ಮಾಡುತ್ತಾರೆ. ಅವರು ಮಾಜಿ ಸಚಿವರು. ಈಗಿರುವ ಸರ್ಕಾರದ ಭಾಗವಲ್ಲ. ಅವರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದರೆ, ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತು ಗೆಲ್ಲಲಿ ಎಂದು ಪಂಥ್ವಾಹನ ನೀಡಿದರು.

​ದಿನ ಬೆಳಗಾದರೆ ರೇವಣ್ಣವರು ಮಾಧ್ಯಮಗೋಷ್ಟಿ ನಡೆಸಿ ಹಾಸನ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಮಾತನಾಡುತ್ತಾರೆ. ಹಾಸನದ ಒಬ್ಬ ಜನಪ್ರತಿನಿಧಿಯಾಗಿ ನನಗೆ ರೇವಣ್ಣ ಅವರಿಂದ ಕಿರಿಕಿರಿ ಆಗುತ್ತಿರುವುದು ಸತ್ಯ. ಅವರು ಹೊಳೆನರಸೀಪುರ ಶಾಸಕರಾಗಿ ಹಾಸನ ವಿಧಾನಸಭಾ ಕ್ಷೇತ್ರದ ಬಿಎಂ ರಸ್ತೆ ಒಡೆದರು. ದಾಸರಕೊಪ್ಪಲಿನ ರೈತರಿಗೆ ರೇವಣ್ಣ ಅವರು ತೊಂದರೆ ಕೊಟ್ಟಿದ್ದಾರೆ. ಇದೇ ರೀತಿ ಸಾಕಷ್ಟು ನೋವನ್ನು ಹಾಸನ ವಿಧಾನಸಭಾ ಕ್ಷೇತ್ರದ ಮತದಾರರು ಅನುಭವಿಸಿದ್ದಾರೆ ಶಾಸಕ ಪ್ರೀತಮ್ ವಾಗ್ದಾಳಿ ನಡೆಸಿದರು.

ರೇವಣ್ಣ ಅವರ ರಾಜಕಾರಣದ ವಿಚಾರಧಾರೆಗಳು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಗ್ಗುವುದಿಲ್ಲ. ರೇವಣ್ಣ ಅವರು ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಬಂದರೆ ಯಾವ ಸಂಕೋಚವೂ ಇಲ್ಲ. ರಾಜಕಾರಣ ಎಂದಾಗ ನಾನು ಬಿಜೆಪಿ. ಅವರು ಜೆಡಿಎಸ್. ನಾವು ನಮ್ಮ ನಮ್ಮ ಕೆಲಸ ಮಾಡಿಕೊಂಡು ಸೌಹಾರ್ದಯುತವಾಗಿ ಜನರ ಏಳಿಗೆಗೆ ಕೆಲಸ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ : ಗಡಿ ರಕ್ಷಣೆಗೆ ರಾಜ್ಯಸರ್ಕಾರ ಬದ್ಧ.. ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.