ಹಾಸನದಲ್ಲಿ ಸರಣಿ ಕಳ್ಳತನ.. ಬೆಚ್ಚಿಬಿದ್ದ ಮಾಜಿ ಪ್ರಧಾನಿ ಕ್ಷೇತ್ರದ ಜನರು

author img

By

Published : Aug 21, 2022, 7:36 PM IST

ಮನೆಬಾಗಿಲನ್ನು ಒಡೆದ ಕಳ್ಳರು

ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯ ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ಅಣ್ಣಾಜಿ ಗೌಡರ ಮನೆಯ ಬಾಗಿಲನ್ನು ಕಳ್ಳರು ಚಿದ್ರ ಮಾಡಿದ್ದಾರೆ. ನಂತರ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಹಾಸನ: ಮನೆಯ ಬಾಗಿಲನ್ನು ಎರಡು ಭಾಗಗಳಾಗಿ ಮಾಡಿ ಕಳ್ಳತನ ಎಸಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ದೋಚಿರುವ ಘಟನೆ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ. ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಯಾದ ಅಣ್ಣಾಜಿ ಗೌಡರ ಮನೆಯ ಬಾಗಿಲನ್ನು ಕಳ್ಳರು ಜಖಂಗೊಳಿಸಿದ್ದಾರೆ. ನಂತರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಏನಿದು ಘಟನೆ: ಕಳೆದ ಒಂದು ವಾರದಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಇದೀಗ 24 ಗಂಟೆಗಳಲ್ಲಿ ಎಂಟು ವಾಣಿಜ್ಯ ಮಳಿಗೆ ಸೇರಿದಂತೆ ಒಂದು ವಾಸದ ಮನೆಯಲ್ಲೂ ಕಳ್ಳತನ ಪ್ರಕರಣ ನಡೆದಿದ್ದು, ಹೊಳೆನರಸೀಪುರದ ಜನತೆ ಬೆಚ್ಚಿಬಿದ್ದಿದ್ದಾರೆ.

ಸರಣಿ ಕಳ್ಳತನದ ಬಗ್ಗೆ ಚಿಟ್ಟನಹಳ್ಳಿ ಬಡಾವಣೆಯ ಸ್ಥಳೀಯರಾದ ರಮೇಶ್​ ಅವರು ಮಾತನಾಡಿದರು

ಆಗಸ್ಟ್ 20 ರ ಶನಿವಾರ ರಾತ್ರಿ ಹೊಳೆನರಸೀಪುರದ ಗಾಂಧಿ ವೃತ್ತದಲ್ಲಿ ಇರುವಂತಹ ಬಟ್ಟೆ ಅಂಗಡಿಗೆ ಕನ್ನ ಹಾಕಿ ಬ್ರಾಂಡೆಡ್ ಬಟ್ಟೆಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಹೊಳೆನರಸೀಪುರದ ಪುರಸಭೆ ಎದುರಿಗಿರುವ ಏಳು ಅಂಗಡಿಗಳಲ್ಲಿ ಕಳ್ಳತನ ಮಾಡಿ ಸುಮಾರು ಐದಾರು ಲಕ್ಷ ಮೌಲ್ಯದ ಬಟ್ಟೆ ಮತ್ತು ದಿನಸಿ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾರೆ.

ಪರಿಚಯಸ್ಥರಿಂದಲೇ ಕಳ್ಳತನವಾಗಿರುವ ಶಂಕೆ: ಪಶು ವೈದ್ಯಕೀಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣ್ಣಾಜಿ ಗೌಡ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕರ್ತವ್ಯಕ್ಕೆ ತೆರಳಿದ್ದರು. ಇವರ ಚಲನವಲನಗಳನ್ನು ಗಮನಿಸಿರುವ ಖತರ್ನಾಕ್ ಕಳ್ಳರು ಮನೆಯ ಬೀಗವನ್ನು ತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನೆಯ ಬಾಗಿಲನ್ನೇ ಎರಡು ತುಂಡಾಗಿ ಮಾಡಿದ್ದಾರೆ. ನಂತರ ಮನೆಯೊಳಗೆ ಪ್ರವೇಶ ಮಾಡಿ ಅದರಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳು, ವಸ್ತುಗಳು ಮತ್ತು ನಗದನ್ನು ಕದ್ದಿದ್ದಾರೆ.

ಹದಗೆಟ್ಟ ಪೊಲೀಸ್ ವ್ಯವಸ್ಥೆ: ಕಳೆದ ಒಂದು ವಾರದಿಂದಲೂ ನಿರಂತರವಾಗಿ ಹೊಳೆನರಸೀಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ರಾತ್ರಿಯ ವೇಳೆ ಪೊಲೀಸ್ ಗಸ್ತು ಸರಿಯಾಗಿ ಇಲ್ಲದಿರುವುದೇ ಕಳ್ಳತನ ಪ್ರಕರಣಕ್ಕೆ ಪುಷ್ಠಿ ನೀಡುತ್ತಿದೆ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.

ಡಿವೈಎಸ್​ಪಿ ಕೇಂದ್ರವಿದ್ದರೂ ಭದ್ರತೆ ಇಲ್ಲ: ಹೊಳೆನರಸೀಪುರ ಪಟ್ಟಣದಲ್ಲಿ ನಗರ ಗ್ರಾಮಾಂತರ ಹಾಗೂ ವೃತ್ತ ನಿರೀಕ್ಷಕರು ಸೇರಿದಂತೆ ಡಿವೈಎಸ್​ಪಿ ಕಚೇರಿ ಕೂಡ ಇದೆ. ಇಷ್ಟೆಲ್ಲಾ ಪೊಲೀಸ್ ವ್ಯವಸ್ಥೆ ಇದ್ದರೂ ಹೃದಯ ಭಾಗದಲ್ಲಿ ಏಳು ಅಂಗಡಿಗಳಿಗೆ ಕನ್ನ ಹಾಕಲಾಗಿದೆ ಎಂದರೆ ಪೊಲೀಸ್ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸ್ಥಳಕ್ಕೆ ಎಸ್​ಪಿ ಹರಿರಾಮ ಶಂಕರ್ ಸೇರಿದಂತೆ ಹೊಳೆನರಸೀಪುರ ಪೊಲೀಸರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಶ್ವಾನದಳ ಬೆರಳಚ್ಚು ತಜ್ಞರಿಂದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

ಓದಿ: ಭಟ್ಕಳದಲ್ಲಿ ಬಾಲಕನ ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.