ಹಾಸನದಲ್ಲಿ ಗಾಂಧಿ ಪ್ರತಿಮೆ ವಿರೂಪ : ಸಾರ್ವಜನಿಕರಿಂದ ಆಕ್ರೋಶ

author img

By

Published : Jan 25, 2023, 8:47 PM IST

Updated : Jan 25, 2023, 8:58 PM IST

Etv defacement-of-gandhi-statue-hasana

ಹಾಸನದಲ್ಲಿ ಗಾಂಧಿ ಪ್ರತಿಮೆ ವಿರೂಪ - ಸಾರ್ವಜನಿಕರಿಂದ ವಿರೋಧ - ಗಾಂಧಿಭವನ ಉದ್ಘಾಟನೆ ಮುಂದೂಡಿದ ಜಿಲ್ಲಾಡಳಿತ

ಹಾಸನದಲ್ಲಿ ಗಾಂಧಿ ಪ್ರತಿಮೆ ವಿರೂಪ : ಸಾರ್ವಜನಿಕರಿಂದ ಆಕ್ರೋಶ

ಹಾಸನ : ನಗರದ ಎಂ.ಜಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ರಚನಾ ಮಾದರಿಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಗಾಂಧೀಜಿಯ ದೇಹದ ಆಕಾರವನ್ನು ವಿಕೃತಗೊಳಿಸಲಾಗಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರತಿಮೆಯ ಉದ್ಘಾಟನೆಯು ನಾಳೆ ನಡೆಯಬೇಕಿತ್ತು. ಆದರೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಡಳಿತವು ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

ಹಾಸನವು ವಿಶ್ವವಿಖ್ಯಾತ ಗೊಮ್ಮಟೇಶ್ವರ ಸೇರಿದಂತೆ ಹಲವಾರು ಪ್ರಾಚೀನ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಹಾಸನವನ್ನು ಶಿಲ್ಪಕಲೆಗಳ ನೆಲೆಬೀಡು ಎಂದೇ ಕರೆಯಲಾಗುತ್ತದೆ. ಆದರೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಇನ್ನು 74ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಾಸನದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಜೊತೆಗೆ ಗಾಂಧಿ ಭವನದ ಆವರಣದಲ್ಲಿ ಗಾಂಧಿ ಪ್ರತಿಮೆಯನ್ನೂ ನಿರ್ಮಾಣ ಮಾಡಲಾಗಿದ್ದು, ಮೂರ್ತಿಯನ್ನು ವಿರೂಪಗೊಳಿಸಲಾಗಿದೆ. ಇದರ ಲೋಕಾರ್ಪಣೆ ನಾಳೆ 74ನೇ ಗಣರಾಜ್ಯೋತ್ಸವದಂದು ನಡೆಯುವುದಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಗಾಂಧಿ ಪ್ರತಿಮೆ ವಿರೂಪಗೊಳಿಸಿರುವ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಮರಿಯ ಜೋಸೆಫ್ ಕಾಮಗಾರಿಯ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಈ ತರ ವಿರೂಪಗೊಳಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು. ಇನ್ನು, ರಾಷ್ಟ್ರ ನಾಯಕರಾದ ಅಂಬೇಡ್ಕರ್​ ಮತ್ತು ಗಾಂಧೀಜಿಯವರನ್ನು ಈ ರೀತಿ ಬಿಂಬಿಸವವರ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೆ ಈ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಗಮಹರಿಸಿಲ್ಲವೇ ಎಂದು ಪ್ರಶ್ನಿಸಿದರು. ಸಾರ್ವಜನಿಕ ತೆರಿಗೆ ಹಣದಿಂದ ಈ ರೀತಿ ಹಣವನ್ನು ಪೋಲು ಮಾಡಿರುವುದು ಖಂಡನೀಯ. ಇಂತಹ ಕಲಾಕೃತಿ ನಿರ್ಮಾಣ ಮಾಡುವಾಗ ನುರಿತರ ಸಲಹೆಯನ್ನು ಪಡೆಯಬೇಕು. ಘಟನೆ ಸಂಬಂಧ ಜಿಲ್ಲಾಡಳಿತ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮರಿಯ ಜೋಸೆಫ್ ಆಗ್ರಹಿಸಿದರು.

ಗಾಂಧೀಜಿಯವರ ಅನುಯಾಯಿಗಳ ಮೂರ್ತಿಗಳು ಸಹ ವಿರೂಪ.. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮೂರ್ತಿಯಷ್ಟೇ ಅಲ್ಲದೆ, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರ ಅನುಯಾಯಿಗಳ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆಯಂತೆ.

ಉದ್ಘಾಟನೆ ರದ್ದು.. ಗಾಂಧಿ ಪ್ರತಿಮೆ ಆಕಾರ, ಸ್ವರೂಪದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್​ ಅರ್ಚನಾ ಪ್ರಕಟಣೆ ಹೊರಡಿಸಿದ್ದಾರೆ. ಗಾಂಧಿಭವನದ ಆವರಣದಲ್ಲಿ ನಿರ್ಮಿಸಿದ್ದ ಗಾಂಧೀಜಿಯವರ ಪ್ರತಿಕೃತಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಿ ನಂತರ ಕಟ್ಟಡ ಉದ್ಘಾಟನೆ ನೆರವೇರಿಸಲು ತೀರ್ಮಾನಿಸಲಾಗಿದೆ. ತಕ್ಷಣವೇ ಪ್ರತಿಮೆಗಳನ್ನು ನುರಿತ ಕಲಾವಿದರಿಂದ ಸರಿಪಡಿಸಲು ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಪ್ರತಿಮೆ ಸರಿಪಡಿಸಿದ ಬಳಿಕ ಉದ್ಘಾಟನೆ ಮಾಡುವ ಉದ್ದೇಶದಿಂದ ಗುರುವಾರ ನಿಗದಿಪಡಿಸಿದ್ದ ಗಾಂಧಿ ಭವನ ಉದ್ಘಾಟನೆ ಮುಂದೂಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೆ, ಕಲಾಕೃತಿಗಳನ್ನು ಸರಿಪಡಿಸಿದ ನಂತರ ಕಟ್ಟಡ ಉದ್ಘಾಟನೆ ನಡೆಸುವಂತೆ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಆಯುಕ್ತರಾದ ಹರ್ಷ ಅವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ದಶಕಗಳ ಹೋರಾಟದ ನಂತರ ಪಾಲಿಕೆಗೆ ಲೇಔಟ್ ಹಸ್ತಾಂತರಿಸಲು ಮುಂದಾದ ಬಿಡಿಎ

Last Updated :Jan 25, 2023, 8:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.