ಬೇಲೂರು: ಮತಾಂತರ ಮಾಡುತ್ತಿದ್ದ ಚರ್ಚ್ ಮೇಲೆ ಭಜರಂಗದಳ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ, ಮತಾಂತರಕ್ಕೆ ಒಳಗಾಗುತ್ತಿದ್ದವರನ್ನು ರಕ್ಷಣೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಬೇಲೂರು ಪಟ್ಟಣದ ಹೊರವಲಯದ ಬಿಕ್ಕೋಡು ರಸ್ತೆಯ ಮಹಿಳಾ ಕಾಲೇಜು ಪಕ್ಕದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಈ ವೇಳೆ, ಮತಾಂತರಗೊಂಡಿದ್ದ ಜನರನ್ನು ಮನವೊಲಿಸಿ ವಾಪಸ್ ಹಿಂದು ಧರ್ಮದಲ್ಲಿ ಉಳಿಯುವಂತೆ ಮಾಡಿದ್ದಾರೆ.
ಮತಾಂತರಗೊಳಿಸುತ್ತಿದ್ದ ಸ್ಥಳಕ್ಕೆ ಹಿಂದುಪರ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದರಿಂದ ಆಕ್ರೋಶಕ್ಕೊಳಗಾದ ಚರ್ಚ್ನ ಪಾದ್ರಿಗಳು ಮತ್ತು ಅವರ ಅನುಯಾಯಿಗಳು ಹಿಂದುಪರ ಕಾರ್ಯಕರ್ತರ ಮೇಲೆ ಮುಗಿಬಿದ್ದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಐ ಯೋಗೇಶ್ ಚರ್ಚ್ನಲ್ಲಿನ ಎಲ್ಲ ಜನರನ್ನು ಅಲ್ಲಿಂದ ಹೊರಕಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬಳಿಕ ಮಾತನಾಡಿದ ವಿಶ್ವ ಹಿಂದು ಪರಿಷತ್ ಸಂಘಟನೆಯ ಅಧ್ಯಕ್ಷ ಕೃಷ್ಣೇಗೌಡ, 'ತಾಲೂಕಿನಾದ್ಯಂತ ಸುಮಾರು 30 ಕ್ಕೂ ಹೆಚ್ಚು ಅನಧಿಕೃತ ಕೇಂದ್ರಗಳಲ್ಲಿ ಹಿಂದೂಗಳನ್ನು ಮತಾಂತರ ಮಾಡಲು ಕ್ರೈಸ್ತ ಮಿಷನರಿಗಳು ಪೂರ್ವ ಸಿದ್ದತೆ ಮಾಡಿಕೊಂಡಿವೆ. ಈ ಬಗ್ಗೆ ನಾವು ದೂರು ಸಲ್ಲಿಸುತ್ತಿದ್ದು, ಅನಧಿಕೃತ ಕಟ್ಟಡದ ಬಗ್ಗೆ ಪುರಸಭೆ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.
ಭಜರಂಗದಳದ ತಾಲೂಕು ಸಂಚಾಲಕ ಮಂಜುನಾಥ್ ಮಾತನಾಡಿ, 'ಈ ಕೇಂದ್ರದಲ್ಲಿ ಇಲ್ಲಿವರೆಗೂ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳನ್ನು ಮತಾಂತರ ಮಾಡಲಾಗಿದೆ. ಇಂದು ಮೂವರು ಯುವಕರನ್ನು ಮತಾತಂತರ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಬಂದಾಗ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿದರು.