ಹಾಸನ: ಪ್ರೀತಿ ನಿರಾಕರಿಸಿದ ಯುವತಿಗೆ ಕಾರು ಗುದ್ದಿಸಿ ಕೊಂದ ದುರುಳನ ಬಂಧನ

author img

By

Published : Aug 19, 2022, 6:37 PM IST

ಯವತಿಯ ಹತ್ಯೆ ಹಿಂದೆ ಪ್ರೇಮ ಪ್ರಕರಣ

ಹಾಸನ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿ ನಡೆದ ಸರಣಿ ಅಪಘಾತದ ಹಿಂದಿನ ಆಘಾತಕಾರಿ ಸತ್ಯ ಸಂಗತಿ ಇದೀಗ ಹೊರಬಂದಿದೆ.

ಹಾಸನ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕಾರು ಗುದ್ದಿಸಿ ಹತ್ಯೆಗೈದ ದುರುಳ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹಾಗೂ ಅಪಘಾತದ ದೃಶ್ಯ
ಆರೋಪಿ ಹಾಗೂ ಅಪಘಾತದ ದೃಶ್ಯ

ವಿವರ: ಹಾಸನ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿ ಸರಣಿ ಅಪಘಾತ ನಡೆದಿತ್ತು. ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಯುವತಿ ಶರಣ್ಯಳಿಗೆ ಆಲ್ಟೋ ಕಾರೊಂದು ಗುದ್ದಿದ್ದು, ಬಳಿಕ ಹಾಲಿನ ವಾಹನ, ಗೂಡ್ಸ್ ಆಟೋ ಸೇರಿದಂತೆ 2 ಬೈಕ್ ಹಾಗೂ ಸಾರಿಗೆ ಬಸ್‌ಗೂ ಡಿಕ್ಕಿ ಹೊಡೆದಿತ್ತು. ಹೀಗಿದ್ದರೂ ಚಾಲಕ ಬದುಕುಳಿದು ಪರಾರಿಯಾಗಿದ್ದ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶರಣ್ಯ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್‌ 4ರಂದು ಸಾವನ್ನಪ್ಪಿದ್ದಳು.

ಅಪಘಾತವೆಸಗಿ ಪರಾರಿಯಾಗಿದ್ದ ಪಾಗಲ್​ ಪ್ರೇಮಿ ಅಂದರ್

ಅಂದೇ ಶರಣ್ಯಳ ಅಣ್ಣ ಸಚಿನ್ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆಗಸ್ಟ್ 12ರಂದು ಸಕಲೇಶಪುರದಲ್ಲಿ ಆರೋಪಿ ಭರತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ.

ಅರಸೀಕೆರೆ ತಾಲೂಕಿನ ಹೆಂಜಗೊಂಡನಹಳ್ಳಿ ಗ್ರಾಮದ ಶರಣ್ಯ ಎಂಬ ಯುವತಿ ಬೂವನಹಳ್ಳಿಯಲ್ಲಿರುವ ಭಾರತಿ ಅಸೋಸಿಯೇಟ್ಸ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಳು. ಬೊಮ್ಮನಾಯಕನಹಳ್ಳಿ ಗ್ರಾಮದ ಭರತ್ ಜಿ.ಆರ್ ಶರಣ್ಯಳ ಹಿಂದೆ ಬಿದ್ದಿದ್ದ. ನನ್ನ ಪ್ರೀತಿಯನ್ನು ಒಪ್ಪಿಕೋ ಎಂದು ಪದೇ ಪದೇ ಪೀಡಿಸುತ್ತಿದ್ದು, ಇದಕ್ಕೆ ಶರಣ್ಯ ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಆತ, ಮೈಸೂರಿನಿಂದ ಕಾರು ಬಾಡಿಗೆಗೆ ತಂದು ಆಗಸ್ಟ್ 3 ರಂದು ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಶರಣ್ಯಳಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದ. ತನಿಖೆ ಬಳಿಕ ಈ ಅಪಘಾತ ಪ್ರಕರಣ ಕೊಲೆಯೆಂದು ಗೊತ್ತಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಕೈ ಕತ್ತರಿಸಿಕೊಂಡು ಹೈಡ್ರಾಮಾ..ನಡುರಸ್ತೆಯಲ್ಲಿ ಬಾಲಕಿಯ ಹುಚ್ಚಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.