ಗದಗ ಜಿಲ್ಲೆಯಲ್ಲಿ ಭಾರಿ ಮಳೆ.. ಗ್ರಾಮಗಳು ಮುಳುಗುವ ಭೀತಿ, ಊಟ ನಿದ್ದೆ ಇಲ್ಲದೇ ಕಣ್ಣೀರು ಹಾಕುತ್ತಿರುವ ಜನ

author img

By

Published : Sep 8, 2022, 1:54 PM IST

Updated : Sep 8, 2022, 2:12 PM IST

Heavy rain in Gadag district

ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದ ಊಟ ನಿದ್ದೆ ಇಲ್ಲದೇ ಜನ ಕಣ್ಣೀರು ಹಾಕುತ್ತಿದ್ದಾರೆ. ಮಲಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದ್ದು ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಹಳ್ಳಿಗಳು ಮುಳಗುಡೆ ಭೀತಿಯಲ್ಲಿವೆ.

ಗದಗ: ಜಿಲ್ಲೆಯಲ್ಲಿ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ. ಗದಗ-ಬೆಟಗೇರಿಯಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರಗಳನ್ನ ಸೃಷ್ಟಿ ಮಾಡಿದೆ. ಅದರಲ್ಲೂ ಬೆಟಗೇರಿಯ ದೇವರ ದಾಸಿಮಯ್ಯ ವೃತ್ತದ ಬಳಿಯ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ರಾತ್ರಿಯಿಡೀ ಮಳೆನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿನ ವಸ್ತುಗಳು ನೀರುಪಾಲಾಗಿವೆ.

ಪಕ್ಕದ ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿನ ಮಹಿಳೆಯರು, ವೃದ್ಧರು ಇಡೀ ರಾತ್ರಿ ಊಟ ನಿದ್ರೆ ಇಲ್ಲದೇ ಮಳೆ ನೀರು ಹೊರಹಾಕುವುದರಲ್ಲೇ ಕಾಲ ಕಳೆದಿದ್ದಾರೆ. ಅದರಲ್ಲೂ ಸುಮಾರು 8 ಮನೆಗಳು ಬಿದ್ದು ದುಡಿದು ತಿನ್ನೋ ವೃದ್ಧ ದಂಪತಿ ಒದ್ದಾಡುತ್ತಿದ್ದ ದೃಶ್ಯ ಮನಕಲಕುವಂತಿದೆ. ಕೂರಲು, ಮಲಗಲು, ಅಡುಗೆ ಮಾಡಲು ಸಹ ಆಸ್ಪದ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಎರಡು ದಿನಗಳಿಂದ ಸರಿಯಾದ ಊಟ ಸಿಕ್ಕಿಲ್ಲ. ನಿನ್ನೆ ಡಾ. ಪಂಡಿತ ಪುಟ್ಟರಾಜ್ ಗವಾಯಿಗಳ ಹುಟ್ಟುಹಬ್ಬದ ಪ್ರಯುಕ್ತ ಭಕ್ತರು ಮಾಡಿಸಿದ್ದ ಪ್ರಸಾದವನ್ನೇ ತಿಂದು ದಿನ ದೂಡಿದ್ದಾರಂತೆ.

Heavy rain in Gadag district
ಗದ್ದೆಗೆ ನುಗ್ಗಿದ ಮಳೆ ನೀರು

ಉಳಿದುಕೊಳ್ಳಲು ನಮಗೆ ಸರಿಯಾದ ಮನೆಗಳಿಲ್ಲ. ಇಂದು ನಾಳೆ ಬೀಳೋ ಸೋರುವ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಈ ಏರಿಯಾಗೆ ಸರಿಯಾದ ಮೂಲ ಸೌಕರ್ಯಗಳನ್ನು ಮಾಡಿಲ್ಲ. ಇಷ್ಟೆಲ್ಲಾ ಆವಾಂತರ ಸೃಷ್ಟಿಯಾದ್ರೂ ಸಹ ನಗರಸಭೆಯ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಗಂಜಿ ಕೇಂದ್ರ ತೆರೆದು ಊಟದ ವ್ಯವಸ್ಥೆಯನ್ನಾದ್ರೂ ಮಾಡಿಲ್ಲ ಅಂತ ಇಲ್ಲಿನ ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.

ರಸ್ತೆ ಪಾಲಾದ ಅನ್ನಭಾಗ್ಯ ಅಕ್ಕಿ: ಅನ್ನಭಾಗ್ಯ ಯೋಜನೆಯ ಅಕ್ಕಿ ತುಂಬಿದ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಕ್ಕಿಯಲ್ಲ ರಸ್ತೆ ಪಾಲಾದ ಘಟನೆ ಸಹ ನಡೆದಿದೆ. ಗದಗದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೊರಟಿದ್ದ ಲಾರಿ ಲಕ್ಷ್ಮೇಶ್ವರ ಪಟ್ಟಣದ ಲಂಡಿ ಹಳ್ಳದ ಬಳಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದೆ. ಪರಿಣಾಮ ಲಾರಿಯ ಮುಂದಿನ ಬಂಪರ್ ಜಖಂಗೊಂಡಿದೆ.

ಗದಗ ಜಿಲ್ಲೆಯಲ್ಲಿ ಭಾರಿ ಮಳೆ

ಜೊತೆಗೆ ಲಾರಿಯಲ್ಲಿದ್ದ ಅಕ್ಕಿ ಚೀಲಗಳು ನೆಲಕ್ಕೆ ಬಿದ್ದು ರಸ್ತೆಯಲ್ಲಿ ಚೆಲ್ಲಾಡಿವೆ. ಬೈಕ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ ಅಂತ ಹೇಳಲಾಗ್ತಿದೆ. ಇನ್ನು, ಲಾರಿ ಚಾಲಕ ಬಸವರಾಜ್ ಕರಕನಗೌಡರ ಎಂಬಾತನಿಗೆ ಕಾಲಿಗೆ ಗಾಯವಾಗಿದ್ದು, ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಡೆ ಕುಸಿದು ವೃದ್ದೆ ಸಾವು: ಗದಗನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಮನೆಯ ಗೋಡೆಗಳು ನೆನೆದು ಕುಸಿದು ಬಿದ್ದ ಪರಿಣಾಮ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನ ನಡೆದಿದೆ. ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ದುರ್ಗಾದೇವಿ ದೇವಸ್ಥಾನದ ಹತ್ತಿರ ತಗಡಿನ ಶೆಡ್​​ನಲ್ಲಿ ವಾಸವಿದ್ದ ಲಕ್ಷ್ಮವ್ವ ಹನಮಪ್ಪ ಮಾದರ (80) ಮೃತಪಟ್ಟವರು.

ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಈ ದುರ್ಘಟನೆ ಜರುಗಿದೆ. ಸುದ್ದಿ ತಿಳಿದು ರೋಣ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಣ್ಣಿನಲ್ಲಿ ಸಿಲುಕಿದ್ದ ವೃದ್ಧೆಯ ಮೃತದೇಹವನ್ನು ಹೊರತೆಗೆದಿದ್ದಾರೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Heavy rain in Gadag district
ಗದ್ದೆಗೆ ನುಗ್ಗಿದ ಮಳೆ ನೀರು

ಗ್ರಾಮ ಸಂಪೂರ್ಣ ಜಾಲವೃತ: ಮಲಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದ್ದು ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಹಳ್ಳಿಗಳು ಮುಳಗುಡೆ ಭೀತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ರೋಣ ತಾಲೂಕಿನ ಹೊಳೆ ಹಡಗಲಿ ಗ್ರಾಮಕ್ಕೆ ನುಗ್ಗಿದ ನದಿ ನೀರಿನಿಂದ ಗ್ರಾಮವು ಅರ್ಧಕ್ಕಿಂತ ಹೆಚ್ಚು ಮುಳುಗಡೆಯಾಗಿದೆ. ಮನೆಗಳು ಹಾಗೂ ಶಾಲೆಗೆ ನುಗ್ಗಿದ ನೀರಿನಿಂದ ಗ್ರಾಮಸ್ಥರು ಜಾನುವಾರು ಸಮೇತ ಗ್ರಾಮದಲ್ಲಿ ನವ ಗ್ರಾಮಕ್ಕೆ ವಲಸೆ ಹೋಗಿದ್ದಾರೆ. ಈ ಮೊದಲು ಜಿಲ್ಲಾಡಳಿತ ಮೊದಲೇ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು.

ಹಾಗಾಗಿ ಗ್ರಾಮಸ್ಥರು ನವ ಗ್ರಾಮಕ್ಕೆ ಸ್ಥಳಾಂತರವಾಗಿದ್ದಾರೆ. ಪದೇ ಪದೇ ಮಲಪ್ರಭಾ ನದಿಯ ಪ್ರವಾಹಕ್ಕೆ ಇಡೀ ಗ್ರಾಮವೇ ಮುಳುಗಡೆ ಆಗುತ್ತದೆ. ಇದಲ್ಲದೆ ಜಮೀನುಗಳಲ್ಲಿ ನುಗ್ಗಿದ ನದಿ ನೀರಿನಿಂದ ನೂರಾರು ಎಕರೆಯಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿವೆ.

ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ತಗ್ಗಿದ ಮಳೆ, ಟ್ರಾಫಿಕ್ ಜಾಮ್.. ತೊಂದರೆಗೆ ಸಿಲುಕಿದ ಸಾವಿರಾರು ಕುಟುಂಬಗಳು

Last Updated :Sep 8, 2022, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.