ಗಣರಾಜ್ಯೋತ್ಸವಕ್ಕೆ ಕರ್ನಾಟಕದ 'ನಾರಿಶಕ್ತಿ' ಸ್ತಬ್ಧಚಿತ್ರ: ಕರ್ತವ್ಯ ಪಥದಲ್ಲಿ ತಾಲೀಮು

ಗಣರಾಜ್ಯೋತ್ಸವಕ್ಕೆ ಕರ್ನಾಟಕದ 'ನಾರಿಶಕ್ತಿ' ಸ್ತಬ್ಧಚಿತ್ರ: ಕರ್ತವ್ಯ ಪಥದಲ್ಲಿ ತಾಲೀಮು
ನವದೆಹಲಿಯಲ್ಲಿ ನಡೆಯಲಿರುವ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪರೇಡ್ನಲ್ಲಿ ಭಾಗವಹಿಸಲು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅನುಮತಿ ಸಿಕ್ಕಿತ್ತು.
ಹುಬ್ಬಳ್ಳಿ : ನವದೆಹಲಿಯಲ್ಲಿ ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ರಾಜ್ಯದ ಸ್ತಬ್ಧಚಿತ್ರಕ್ಕೆ ಕೊನೆಗೂ ಅವಕಾಶ ಸಿಕ್ಕಿದೆ. ಪ್ರತಿ ವರ್ಷ ದೆಹಲಿಯ ಕರ್ತವ್ಯ ಪಥ್ನಲ್ಲಿ ನಡೆಯುವ ಗಣತಂತ್ರ ದಿನಾಚರಣೆಯ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನ ಇರುತ್ತಿತ್ತು. ಆದರೆ, ಈ ವರ್ಷ ಆರಂಭದಲ್ಲಿ ಅನುಮತಿ ದೊರಕದೇ ಇದ್ದುದು ಕನ್ನಡಿಗರಲ್ಲಿ ಬೇಸರ ಉಂಟುಮಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅನುಮತಿ ಸಿಕ್ಕಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ತಮಿಳುನಾಡು, ಕೇರಳ ಸೇರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಕರ್ನಾಟಕದ ಟ್ಯಾಬ್ಲೊಗೆ ಅವಕಾಶ ದೊರತಿರಲಿಲ್ಲ. ಬೇರೆ ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರದ ಆಯ್ಕೆ ಸಮಿತಿ ಅವಕಾಶ ನಿರಾಕರಿಸಿದೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ಸಿಕ್ಕಿದ್ದು ಈ ಬಾರಿಯ ಸ್ತಬ್ಧಚಿತ್ರ ಹೊಸ ಸಂದೇಶವನ್ನು ದೇಶಕ್ಕೆ ನೀಡಲಿದೆ. ಸಾಧಕರ ಸೇವೆಯನ್ನು ಸ್ಮರಿಸಲಿದೆ ಎಂದು ಜೋಶಿ ಟ್ವೀಟ್ ಮಾಡುವ ಅಭಿಪ್ರಾಯ ತಿಳಿಸಿದ್ದಾರೆ.
-
ತಮ್ಮ ಸಂಪೂರ್ಣ ಜೀವನವನ್ನು ನಾಡಿನ ಹಿತಕ್ಕಾಗಿ ಸಮರ್ಪಿಸಿ, ನಿಸ್ವಾರ್ಥ ಸೇವೆಗೈದ ನಾಡು ಕಂಡ ಶ್ರೇಷ್ಠ ನಾರಿಶಕ್ತಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಕರ್ನಾಟಕದ ಸ್ಥಬ್ದಚಿತ್ರದಲ್ಲಿ ರಾರಾಜಿಸಲಿದ್ದಾರೆ ಕರ್ನಾಟಕದ ಶ್ರೇಷ್ಠ ನಾರಿಯರು. pic.twitter.com/CveJk6wdA1
— Pralhad Joshi (@JoshiPralhad) January 23, 2023
ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ನಾರಿಶಕ್ತಿ ಹೆಸರಿನ ಸ್ತಬ್ಧಚಿತ್ರದ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ತಾಲೀಮು ಭರದಿಂದ ಸಾಗಿದೆ. ರಾಜ್ಯದ ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಗೂ ಸಾಲು ಮರದ ತಿಮ್ಮಕ್ಕ ಅವರ ಪ್ರತಿಕೃತಿಗಳನ್ನು ಹೊಂದಿದ ಸ್ತಬ್ಧಚಿತ್ರ ಹೊತ್ತ ವಾಹನ ಸೋಮವಾರ ಕರ್ತವ್ಯಪಥದಲ್ಲಿ ಸಾಗುತ್ತಾ ತಾಲೀಮು ನಡೆಸಿತು.
8,000 ಗಿಡಗಳನ್ನು ನೆಟ್ಟಿರುವ ತುಮಕೂರಿನ ಗುಬ್ಬಿಯ ಹಸಿರು ಯೋಧೆ ಸಾಲುಮರದ ತಿಮ್ಮಕ್ಕ, 30,000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟ ಉತ್ತರ ಕನ್ನಡದ ಅಂಕೋಲಾದ ತುಳಸಿಗೌಡ ಹಾಗೂ 70 ವರ್ಷಗಳಲ್ಲಿ ಉಚಿತವಾಗಿ 2,000ಕ್ಕೂ ಹೆಚ್ಚು ಸಾಂಪ್ರದಾಯಿಕ ಹೆರಿಗೆ ಮಾಡಿಸಿರುವ ಸೂಲಗಿತ್ತಿ ಪಾವಗಡದ ನರಸಮ್ಮ ಅವರ ಪ್ರತಿಮೆಗಳನ್ನು ಟ್ಯಾಬ್ಲೋ ಹೊಂದಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ಗೆ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆ
