ಐಐಐಟಿ ಧಾರವಾಡಕ್ಕೆ ರಾಷ್ಟ್ರಪತಿ ಭೇಟಿ: ಬುಡಕಟ್ಟು ಆದಿವಾಸಿಗಳಿಗಾಗಿ ರೋಬೋಟ್ ಸಂಶೋಧನೆ

author img

By

Published : Sep 23, 2022, 5:38 PM IST

Robot research for tribals

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26 ರಂದು ಧಾರವಾಡದ ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಸಂಸ್ಥೆಯೂ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಸಿದ್ಧಪಡಿಸುತ್ತಿದೆ.

ಧಾರವಾಡ: ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಗೆ ರಾಷ್ಟ್ರಪತಿ ಆಗಮಿಸಲಿದ್ದಾರೆ. ಇದೇ ಸಂಸ್ಥೆಯಿಂದ ರಾಷ್ಟ್ರಪತಿಗಳ ಮೂಲ ರಾಜ್ಯವಾದ ಒಡಿಶಾದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಸಿದ್ಧಪಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ರಾಷ್ಟ್ರಪತಿಯಿಂದ ಉದ್ಘಾಟನೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26 ರಂದು ಮಧ್ಯಾಹ್ನ ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಶುಭ ಸಂದರ್ಭದಲ್ಲಿಯೇ ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ಹುಮುನೊಯ್ಡ ರೋಬೋಟ್ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ.

ಇತರ ಭಾಷೆಗಳಿಗೆ ಧ್ವನಿಭಾಷಾನುವಾದ: ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿಭಾಷಾನುವಾದದ ಉಪಕರಣವನ್ನು ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕರು ಹಾಗೂ ಈ ಯೋಜನೆಯ ಪ್ರಧಾನ ಪರೀಕ್ಷಕ ಡಾ. ಕೆ ಟಿ ದೀಪಕ್​ ತಿಳಿಸಿದ್ದಾರೆ.

Robot research for tribals
ಬುಡಕಟ್ಟು ಆದಿವಾಸಿಗಳಿಗಾಗಿ ರೋಬೋಟ್ ಸಂಶೋಧನೆ

ಯಾವ ಭಾಷೆಗಳ ಆಯ್ಕೆ: ಪ್ರಸ್ತುತ ಈ ರೋಬೋಟ್ ತಂತ್ರಜ್ಞಾನದ ಮೂಳಕ ಬುಡಕಟ್ಟು ಜನರಿಗೆ ಇಂಗ್ಲಿಷ್​ ಭಾಷೆಯಲ್ಲಿ ಲಭ್ಯವಿರುವ ಮಾಹಿತಿ ಅವರ ಭಾಷೆಯಲ್ಲಿ ದೊರೆಯಲಿದೆ. ಈ ಯೋಜನೆಯಲ್ಲಿ ಒಡಿಶಾದ ಕುಯಿ ಮತ್ತು ಮುಂಡಾರಿ ಭಾಷೆ ಹಾಗೂ ಕರ್ನಾಟಕದ ಲಂಬಾಣಿ, ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇದರಿಂದಾಗಿ ಇಂಗ್ಲಿಷ್​ ಭಾಷೆಯಿಂದ ಹೇಳಲ್ಪಟ್ಟ ಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಇಂಗ್ಲಿಷ್​ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದಂತಹ ತಂತ್ರಲಿಪಿಯನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ ದೀಪಕ್ ತಿಳಿಸಿದರು.

ಇದನ್ನೂ ಓದಿ: ಐಐಐಟಿ ತರಗತಿ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಸೂಚನೆ

ಸಾವಿರಾರು ವರ್ಷಗಳ ಇತಿಹಾಸವಿರುವ ಲಿಪಿಯಲ್ಲಿನ ಭಾಷೆ ಸಾಕಾಷ್ಟು ಜ್ಞಾನವಿರುವ ಈ ಬುಡಕಟ್ಟು ಜನಾಂಗದಲ್ಲಿ ತಂತ್ರಜ್ಞಾನ ಉಪಯೋಗವಾದರೆ ಜೀವವೈವಿಧ್ಯತೆ, ಪ್ರಾಣಿಗಳ ಜ್ಞಾನ, ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕೃತಿ ಡಿಜಿಟಲ್ ರೂಪದಲ್ಲಿ ಹಿಡಿದಿಟ್ಟುಕೊಂಡು ಹೊರ ಜಗತ್ತಿಗೆ ಗೊತ್ತಾಗಲಿದೆ. ಸರ್ಕಾರಿ ಯೋಜನೆಗಳ ಬಗ್ಗೆ ಅರಿವು, ಸದುಪಯೋಗಪಡಿಸಿಕೊಳ್ಳುವ ಬಗ್ಗೆಯೂ ಇದರಿಂದ ತಿಳಿದುಕೊಳ್ಳಬಹುದಾಗಿದೆ ಎಂದು ಡಾ.ಕೆ ಟಿ ದೀಪಕ್ ತಿಳಿಸಿದರು.

44.53 ಲಕ್ಷ ಅನುದಾನ: ಧಾರವಾಡದ ಹೈದರಾಬಾದ್ ಹಾಗೂ ಭೂವನೇಶ್ವರ ಐಐಟಿ ಸಂಸ್ಥೆಗಳ ಸಹಯೋಗದಲ್ಲಿ ಈ ಸಂಶೋಧನೆ ನಡೆಯುತ್ತಿದೆ. ಸಹ ಪರೀಕ್ಷಕರಾದ ಡಾ. ಪ್ರಕಾಶ ಪವಾರ ಹಾಗೂ ಡಾ.ಸಿಬಾ ಶಂಕರಪಾಡಿ ಇದರಲ್ಲಿ ತೊಡಗಿದ್ದಾರೆ. ನವದೆಹಲಿಯ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ 44.53 ಲಕ್ಷ ಅನುದಾನ ನೀಡಿದೆ.

Robot research for tribals
ಬುಡಕಟ್ಟು ಆದಿವಾಸಿಗಳಿಗಾಗಿ ರೋಬೋಟ್ ಸಂಶೋಧನೆ

ಸ್ವಯಂಚಾಲಿತ ಮಾನವರೂಪಿ ರೋಬೋಟ್: ವಯಸ್ಸಾದ, ಹಿರಿಯರ ಸೇವೆಗೆ ಅನುಕೂಲವಾಗುವ ದೃಷ್ಟಿಯಿಂದ ಸ್ವಯಂಚಾಲಿತ ಮಾನವರೂಪಿ ರೋಬೋಟ್‍ನ್ನು ಸಹ ಐಐಐಟಿ ಧಾರವಾಡದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಪ್ರಧಾನ ಪರೀಕ್ಷಕ ಡಾ.ಕೆ ಟಿ ದೀಪಕ್ ಅವರು ತಿಳಿಸಿದ್ದಾರೆ. ಪ್ರಸ್ತುತ ಸಂಶೊಧನಾ ಯೋಜನೆಯು ಭಾರತದ ವಾತಾವರಣಕ್ಕೆ ಒಗ್ಗುವಂತಹ, ವಯಸ್ಸಾದವರ ಆರೈಕೆಗಾಗಿ ಮಾನವರೂಪಿ ರೋಬೋಟನ್ನು ತಯಾರಿಸುವುದಾಗಿದೆ.

ಅಲ್ಪ ಸಮಯದಲ್ಲಿ ತಯಾರಿ: ಅದಲ್ಲದೆ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಮಾರ್ಪಾಡು ಮಾಡುವುದರಿಂದ ಇತರ ಉಪಯೋಗಗಳಿಗೂ ಬಳಸಬಹುದಾಗಿದೆ. ನಿಯೋಜಿಸಿದ ರೋಬೋಟ್ ನಿಯಮಿತ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ಮಾನಸಿಕ ಸೌಖ್ಯಕ್ಕಾಗಿ ಬಹುವಿಧಗಳಿಂದ ಸಂವಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ರೋಬೋಟ್ ಅಲ್ಪ ಸಮಯದಲ್ಲಿ ತಯಾರಿಸುವುದು ಕಷ್ಟದ ಸಂಗತಿ ಎಂದು ಡಾ.ಕೆ ಟಿ ದೀಪಕ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ತಿಹಾನ್ ಐಐಟಿ ಏಜೆನ್ಸಿ ಮೂಲಕ ರೂ.70 ಲಕ್ಷಗಳ ಅನುದಾನದದಲ್ಲಿ ಸ್ವಯಂಚಾಲಿತ ಮಾನವರೂಪಿ ರೋಬೋಟ್ ತಯಾರಿಸಲಾಗುತ್ತಿದೆ. ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಕವಿ ಮಹೇಶ್, ಡಾ.ರಾಜೇಂದ್ರ ಹೆಗಡಿ, ಡಾ.ಪವನ್ ಕುಮಾರ್ ಸಿ, ಡಾ.ರಮೇಶ ಆತೆ, ಡಾ.ಚಿನ್ಮಯಾನಂದ ಎ. ತೊಡಗಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.