ನವಲಗುಂದ (ಹುಬ್ಬಳ್ಳಿ): ಈಗಾಗಲೇ ಶಾಲಾ–ಕಾಲೇಜುಗಳು ಪ್ರಾರಂಭವಾಗಿವೆ. ಗ್ರಾಮಾಂತರ ಪ್ರದೇಶಗಳಿಂದ ನಗರ, ಪಟ್ಟಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್ ಸಿಗದೇ ಪ್ರಾಣ ಪಣಕ್ಕಿಟ್ಟು ಫುಟ್ ಬೋರ್ಡ್ನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.
ನವಲಗುಂದ ತಾಲೂಕಿನ ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಬೆನ್ನೂರು, ಶಿಶ್ವಿನಹಳ್ಳಿ ಮಾರ್ಗದ ಬಸ್ ಸಂಚಾರದಲ್ಲಿ ಕಂಡು ಬಂದ ದೃಶ್ಯಗಳಿವು. ಬೆಳಿಗ್ಗೆ 6:30ಕ್ಕೆ ಮೊದಲ ಬಸ್ ಬಂದ್ರೆ 7:30ಕ್ಕೆ ಎರಡನೇ ಬಸ್ ಬರುತ್ತೆ. ನಂತರ 10 ಗಂಟೆಗೆ ಈ ಮಾರ್ಗದಲ್ಲಿ ಬಸ್ ಸಂಚರಿಸುವುದು. ಇದರಿಂದ ಪ್ರತಿದಿನ ವಿದ್ಯಾರ್ಥಿಗಳು ಬಸ್ನ ಫುಟ್ ಬೋರ್ಡ್ನಲ್ಲಿ ನೇತಾಡಿಕೊಂಡು ಹೋಗುತ್ತಿದ್ದು, ಏನಾದರೂ ಅವಘಡ ಸಂಭವಿಸಿದರೆ ಹೇಗಪ್ಪಾ ಅನ್ನೋ ಚಿಂತೆಯಲ್ಲಿ ಪಾಲಕರಿದ್ದಾರೆ.
ಬಸ್ ಕೊರತೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಶಾಲೆ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ ಪಟ್ಟಣಕ್ಕೆ ಸಂಚರಿಸುವ ಸಾರ್ವಜನಿಕರು ಸಹ ಬಸ್ಗಳಿಲ್ಲದೆ ಪರದಾಟ ನಡೆಸುವಂತಾಗಿದೆ. ಕೂಡಲೇ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂಬುದು ಈ ಭಾಗದ ಜನರ ಮತ್ತು ವಿದ್ಯಾರ್ಥಿಗಳ ಆಗ್ರಹವಾಗಿದೆ. ಇದಕ್ಕೆ ಕೂಡಲೇ ನವಲಗುಂದ ಡಿಪೋ ವ್ಯವಸ್ಥಾಪಕರು ಇತ್ತ ಗಮನಹರಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.