ಅಡಕೆಗೆ ಚಿನ್ನದ ಬೆಲೆ: ತೋಟಕ್ಕೆ ನುಗ್ಗಿ ಅಡಕೆ ಕಳವು ಮಾಡುತ್ತಿರುವ ಖದೀಮರು

author img

By

Published : Sep 22, 2021, 8:30 AM IST

ಅಡಿಕೆ

ದಾವಣಗೆರೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಅಡಕೆ ಕಳ್ಳರ ಕಾಟ ಜೋರಾಗಿದೆ. ಒಣ ಅಡಕೆಗೆ ಕನ್ನ ಹಾಕುತ್ತಿದ್ದ ಕಳ್ಳರು ಇದೀಗ ತೋಟಗಳಿಗೆ ನುಗ್ಗಿ, ಮರವೇರಿ ಹಸಿ ಅಡಕೆಯನ್ನು ಹೊತ್ತೊಯ್ಯುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ದಾವಣಗೆರೆ: ಸದ್ಯಕ್ಕೆ ಅಡಕೆ ಬೆಲೆ ಏರಿಕೆಯಾಗದ ಹಿನ್ನೆಲೆ ಇದನ್ನೇ ಬಂಡವಾಳವಾಗಿಸಿಕೊಂಡ ಖದೀಮರು ತೋಟಗಳಿಗೆ ನುಗ್ಗಿ ಅಡಕೆ ಕಳವು ಮಾಡುತ್ತಿದ್ದಾರೆ. ಅಡಕೆ ಕಳ್ಳತನದಿಂದ ರೋಸಿ ಹೋಗಿರುವ ರೈತರು ರಾತ್ರಿ ಇಡಿ ತೋಟ ಕಾಯುವ ಗೋಜಿಗೆ ಬಿದ್ದಿದ್ದಾರೆ.

ಹೌದು, ಒಣಗಿಸಿ ಮಾರಾಟ ಮಾಡಲು ಯೋಗ್ಯವಾದ ಅಡಕೆಗೆ ಕನ್ನ ಹಾಕುತ್ತಿದ್ದ ಖದೀಮರು ಇದೀಗ ಅಡಕೆ ತೋಟಗಳಿಗೆ ಲಗ್ಗೆ ಇಡುತ್ತಿದ್ದಾರೆ. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಸುಲ್ತಾನಿ ಪುರ, ಅಣ್ಣಾ ಪುರ,ಬಾವೀ ಹಾಳ್, ಹೊನ್ನನಾಯಕನ ಹಳ್ಳಿ, ಓಬೇನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಅಡಕೆ ಕಳ್ಳರ ಕಾಟ ಜೋರಾಗಿದೆ. ಒಣ ಅಡಕೆಗೆ ಕನ್ನ ಹಾಕುತ್ತಿದ್ದ ಕಳ್ಳರು ತೋಟಗಳಿಗೆ ನುಗ್ಗಿ, ಮರವೇರಿ ಹಸಿ ಅಡಕೆಯನ್ನು ಹೊತ್ತೊಯ್ಯುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಅಡಕೆ ಕಳ್ಳರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯ

ಕಷ್ಟಪಟ್ಟು ವರ್ಷಾನುಗಟ್ಟಲೇ ದುಡಿದು ಬೆಳೆಗಾಗಿ ಕಾಯುತ್ತಿರುವ ರೈತರ ಕೈಗೆ ಫಸಲು ಸೇರದೆ, ಖದೀಮರ ಪಾಲಾಗುತ್ತಿದೆ. ಇದರಿಂದ ಬೇಸತ್ತ ರೈತರು‌ ಮಾಯಕೊಂಡ ಪೊಲೀಸರ ಗಮನಕ್ಕೆ ತಂದಿದ್ದು, ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲವಂತೆ. ಇದರಿಂದ ಚಿಂತೆಗೀಡಾದ ಅನ್ನದಾತರು ತಮ್ಮ ತೋಟಗಳಲ್ಲಿ ಮಲಗುವ ಮೂಲಕ ಹಗಲಿರುಳು ತೋಟ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಲ್ಲದೇ, ಜಮೀನುಗಳಲ್ಲಿ ಬೋರ್​ವೆಲ್​ಗಳಿಗೆ ಆಳವಡಿಸಿರುವ ಕೇಬಲ್ ಅನ್ನು ಕೂಡ ಕಳ್ಳರು ಕದಿಯುತ್ತಿದ್ದು, ಖದೀಮರಿಗೆ ಸೂಕ್ತ ಕಡಿವಾಣ ಹಾಕುವಂತೆ ರೈತರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.