ಬಂಧಿತರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಿ: ಹೋರಾಟದ ಎಚ್ಚರಿಕೆ ನೀಡಿದ ಎಸ್​ಡಿಪಿಐ

author img

By

Published : Sep 22, 2022, 6:24 PM IST

SDPI warns about protest

ಎನ್​ಐಎ ಅಧಿಕಾರಿಗಳು ದಾಳಿ ವೇಳೆ ಬಂಧಿಸಿರುವ ಐದು ಮಂದಿಯನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕು. ಇಲ್ಲವೇ ಹೋರಾಟ ಮಾಡಲಾಗುವುದು ಎಂದು ಎಂದು ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಎನ್​ಐಎ ಮತ್ತು ರಾಜ್ಯ ಪೊಲೀಸರ ದಾಳಿಯಲ್ಲಿ ಬಂಧಿತರಾಗಿರುವ 5 ಮಂದಿ ಪಿಎಫ್​ಐ ಮುಖಂಡರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಹೋರಾಟ ನಡೆಸಲಾಗುವುದು ಎಂದು ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಮುಂಜಾನೆ 3.30ರ ಸುಮಾರಿಗೆ ಎನ್​ಐಎ ಅತಿಕ್ರಮಣವಾಗಿ ದಾಳಿ ಮಾಡಿದೆ. ನೀವು ಯಾವ ಆಧಾರದಲ್ಲಿ ದಾಳಿ ಮಾಡಿದ್ದೀರಿ ಎಂದು ಕೇಳಿದಾಗ ಅವರು ತೋರಿಸಿದ ಕೋರ್ಟ್ ಆರ್ಡರ್​ನಲ್ಲಿ ಪಿಎಫ್ಐ ಕಚೇರಿ ಎಂದು ಇತ್ತು. ಅದನ್ನು ಹೇಳಿದಾಗ ಒಂದೇ ಮಳಿಗೆಯಲ್ಲಿ ಇದ್ದ ಕಾರಣಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.

ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಕೆ

ಎನ್‌ಐಎ ಅವರು ಕಚೇರಿಯ ಕೆಳಗಿನ ಬೀಗ ತುಂಡರಿಸಿ ಗ್ಲಾಸ್ ಡೋರ್ ಒಡೆದು, ಜಿಲ್ಲಾಧ್ಯಕ್ಷರ ಟೇಬಲ್​ನಲ್ಲಿದ್ದ ದಾಖಲೆಗಳನ್ನು ಎಳೆದು ಹಾಕಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಚೇರಿಯ ಅಗ್ರಿಮೆಂಟ್ ಕಾಪಿ, ಎಸ್​ಡಿಪಿಐ ಕಾರ್ಯಕ್ರಮದ ಫೈಲ್, ಫೋಟೋ, ಲ್ಯಾಪ್‌ಟಾಪ್, 2 ಹಾರ್ಡ್ ಡಿಸ್ಕ್, ಎರಡು ಬುಕ್ ಲೆಟ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ನುರಿತ ವಕೀಲರ ಮೂಲಕ ಕಾನೂನು ಹೋರಾಟ ಮಾಡಲಾಗುವುದು ಎಂದರು.

ಇದನ್ನೂ ಓದಿ: ಎಲ್ಲೆಲ್ಲಿ ಉಗ್ರಗಾಮಿಗಳು ಸಿಕ್ಕಿದ್ದಾರೆ ಅವರೆಲ್ಲರೂ ಮುಸ್ಲಿಮರೇ.. SDPI, PFI ನಿಷೇಧದ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೇವೆ: ಈಶ್ವರಪ್ಪ

ಜಿಲ್ಲೆಯಲ್ಲಿ ಪಿಎಫ್ಐನ 5 ಮಂದಿ ನಾಯಕರನ್ನು ಬಂಧಿಸಿದ್ದಾರೆ. 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದಲ್ಲಿ, ಸಂವಿಧಾನಾತ್ಮಕವಾಗಿ ಹೋರಾಟ ನಾಳೆಯಿಂದ ಮಾಡುತ್ತೇವೆ. ಎನ್​ಐಎ ದಾಳಿ ರಾಜಕೀಯ ಪ್ರೇರಿತವಾಗಿದೆ. ಎಸ್​ಡಿಪಿಐ ರಾಜಕೀಯವಾಗಿ ವೇಗವಾಗಿ ಬೆಳೆಯುತ್ತಿದೆ ಎಂಬ ನೆಲೆಯಲ್ಲಿ ಬಿಜೆಪಿ ಬಗ್ಗೆ ಸಾರ್ವಜನಿಕವಾಗಿ ಇರುವ ಕೆಟ್ಟ ಅಭಿಪ್ರಾಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನು ಮರೆಮಾಚಲು, ಬಿಜೆಪಿ ಕಾರ್ಯಕರ್ತರನ್ನು ಖುಷಿಪಡಿಸಲು ಈ ದಾಳಿ ನಡೆಸಿದ್ದಾರೆ ಎಂದು ಹೇಳಿದರು.

ಬಳಿಕ ಮಾತನಾಡಿದ ಎಸ್​ಡಿಪಿಐ ಮುಖಂಡ ಜಲೀಲ್ ಕೃಷ್ಣಾಪುರ ಅವರು, ಗೃಹ ಸಚಿವರು ಎಸ್​ಡಿಪಿಐ, ಪಿಎಫ್ಐ ನಿಷೇಧ ಮಾಡುವ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಎಸ್​ಡಿಪಿಐ ಚುನಾವಣಾ ಆಯೋಗದಲ್ಲಿ ನೋಂದಣಿಯಾದ ರಾಜಕೀಯ ಪಕ್ಷ. ಆ ರೀತಿ ಮಾಡಿದರೆ ಕಾನೂನು ಹೋರಾಟದ ಮೂಲಕ ಜಯಗಳಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.