ಮುಂದಿನ 15 ದಿನದೊಳಗೆ 15 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್

author img

By

Published : Jan 19, 2023, 9:09 AM IST

b c nagesh

15 ಸಾವಿರ ಶಿಕ್ಷಕರ ನೇಮಕಾತಿಗೆ ಅಂತಿಮ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ 15,000 ಶಿಕ್ಷಕರ ಸಿಇಟಿ ಆಗಿದೆ ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಕಡಬದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್

ಸುಬ್ರಹ್ಮಣ್ಯ/ಕಡಬ: ಹೊಸ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಪ್ರಾರಂಭಿಸುತ್ತಿದ್ದೇವೆ. ಆದರೆ ಸದ್ಯಕ್ಕಿದು ಆಯ್ದ ಶಾಲೆಗಳಲ್ಲಿ ಮಾತ್ರ. ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ, ಸುಳ್ಯದ ಬೆಳ್ಳಾರೆ ಹಾಗೂ ಕಡಬದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ವರ್ಷ ಸುಮಾರು 400-500 ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಆರಂಭವಾಗಲಿದೆ. ಎಸ್ಎಸ್​ಎಲ್​ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ಹಿಂದಿನಂತೆಯೇ ನಡೆಯಲಿವೆ. ಈಗಾಗಲೇ ದಿನಾಂಕ ಘೋಷಿಸಲಾಗಿದೆ. ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.

ಮಕರ ಸಂಕ್ರಾಂತಿಯ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ರ ಬದಲು 15ಕ್ಕೆ ರಜೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ವರ್ಷದಲ್ಲಿ ಐದು ರಜೆಗಳನ್ನು ನೀಡುವ ಅವಕಾಶ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅದರಂತೆ ಅವರು ರಜೆ ನೀಡುತ್ತಾರೆ‌. ರಜೆ ನೀಡುವಲ್ಲಿಯೂ ಕೆಲವು ಬದಲಾವಣೆ ಮಾಡಲಾಗಿದೆ. ಇನ್ನು, ಅತಿಥಿ ಶಿಕ್ಷಕರಿಗೆ ವೇತನ ಪಾವತಿ ಆಗದಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಒಂದೆರಡು ತಿಂಗಳು ತಡ ಆಗಬಹುದು ಅಥವಾ ಆರಂಭದಲ್ಲಿ ತಡ ಆಗಬಹುದೇ ಹೊರತು ವೇತನ ಪಾವತಿ ಆಗದೇ ಇರುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಹಂತ ಹಂತವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

15 ಸಾವಿರ ಶಿಕ್ಷಕರ ನೇಮಕಾತಿ: ಮುಂದಿನ 15 ದಿನದೊಳಗೆ 15 ಸಾವಿರ ಶಿಕ್ಷಕರ ನೇಮಕಾತಿ ಅಂತಿಮ ಪ್ರಕ್ರಿಯೆ ನಡೆಯುತ್ತದೆ. 15,000 ಶಿಕ್ಷಕರ ಸಿಇಟಿ ಈಗಾಗಲೇ ಆಗಿದೆ. ಕಾನೂನು ಕಾರಣಕ್ಕಾಗಿ ಸ್ವಲ್ಪ ವಿಳಂಬವಾಗಿದೆ. ಈ ಹಿಂದೆ ರಾಜ್ಯದಲ್ಲಿದ್ದ ಸರ್ಕಾರ ಐದು ವರ್ಷದಲ್ಲಿ ಕೇವಲ 3,517 ಕೊಠಡಿಗಳನ್ನು ಕಟ್ಟಿದೆ. 5,600 ಕೊಠಡಿಗಳನ್ನು ದುರಸ್ತಿ ಮಾಡಿದ್ದಾರೆ. ನಾವು ಕೇವಲ ಮೂರು ವರ್ಷದಲ್ಲಿ ಸುಮಾರು 22,000 ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. 1 ಲಕ್ಷಕ್ಕೂ ಮಿಕ್ಕಿ ಕೊಠಡಿಗಳನ್ನು ದುರಸ್ತಿ ಮಾಡಿದ್ದೇವೆ.

34,000 ಅತಿಥಿ ಶಿಕ್ಷಕರನ್ನು ಶಾಲಾ ಪ್ರಾರಂಭದಲ್ಲೇ ತೆಗೆದುಕೊಂಡು ಸಂಬಳ ಕೂಡ ಜಾಸ್ತಿ ಮಾಡಿದ್ದೇವೆ. 15,000 ಜಿಪಿಟಿ ಶಿಕ್ಷಕರು, 2500 ಹೈಸ್ಕೂಲ್​ ಶಿಕ್ಷಕರು, 1000 ಪಿಯು ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಿದ್ದೇವೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗುತ್ತಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಸಚಿವ ಅಂಗಾರ ಅವರ ಒತ್ತಡದಿಂದಾಗಿ ರಾಜ್ಯದಲ್ಲೇ ಅತೀ ಹೆಚ್ಚು ಅಂದ್ರೆ 39 ಕೊಠಡಿಗಳನ್ನು ಒಂದು ವರ್ಷದಲ್ಲಿ ನೀಡಿದ್ದೇವೆ ಎಂದರು.

ಸಚಿವ ಎಸ್. ಅಂಗಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುಧಾಕರ ಕೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಕಡಬ ಆರಕ್ಷಕ ಠಾಣಾಧಿಕಾರಿ ಆಂಜನೇಯ ರೆಡ್ಡಿ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿದ್ದರು.

ಇದನ್ನೂ ಓದಿ: 'ಕರ್ನಾಟಕ ಮಾದರಿ ಕಲಿಕಾ ಚೇತರಿಕೆ ಕಾರ್ಯಕ್ರಮ ಬೇರೆ ರಾಜ್ಯದಲ್ಲೂ ಅಳವಡಿಕೆ ಮಾಡಬೇಕು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.