ಹಡೆಬಳ್ಳಿಯಿಂದ ಕ್ಯಾನ್ಸರ್ ಶಮನಕ್ಕೆ ಔಷಧಿ: ಮಂಗಳೂರು ವಿವಿಗೆ ಮೊದಲ ಪೇಟೆಂಟ್

author img

By

Published : Sep 23, 2021, 10:55 PM IST

Tentradrine

ಹಡೇ ಬಳ್ಳಿಯ ಅಂಗಾಂಗ ಕಸಿ ಮಾಡಿದ ಬಳಿಕ ರಾಸಾಯನಿಕ ಅಂಶ ಕಂಡು ಹಿಡಿಯುವ ವೇಳೆ ಕ್ಯಾನ್ಸರ್​ಗೆ ಮಾರಕವಾಗಬಲ್ಲ ಟೆಂಟ್ರಾಡ್ರೈನ್ ಅಂಶ ಪತ್ತೆಯಾಗಿದೆ. ಭಾರತದಲ್ಲಿ ಈವರೆಗೆ ಯಾರೂ ಈ ವಿಚಾರದಲ್ಲಿ ಸಂಶೋಧನೆ ಮಾಡಿಲ್ಲ. ಆದರೆ ಕ್ಯಾನ್ಸರ್​​​ಗೆ ರಾಮಬಾಣವಾಗುವ ಅಂಶವನ್ನು ಮಂಗಳೂರಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಇದು ಭಾರತದ‌ ಮೊದಲ ಸಂಶೋಧನೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ಮಂಗಳೂರು: ಹಡೆ ಬಳ್ಳಿಯನ್ನು ಸಂಶೋಧನೆ ಮಾಡಿ, ಅದನ್ನು ಶುದ್ಧೀಕರಣ ಮಾಡಿ ಕ್ಯಾನ್ಸರ್​​​ಗೆ ರಾಮಬಾಣವಾಗುವ ಅಂಶವನ್ನು ಮಂಗಳೂರಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಅಂಶಕ್ಕೆ ಭಾರತ ಸರ್ಕಾರದಿಂದ ಪೇಟೆಂಟ್ ಪಡೆದಿದ್ದಾರೆ.

ಮಂಗಳೂರು ವಿವಿ ವಿಜ್ಞಾನಿಗಳು 2014-15ರಲ್ಲಿ ಮೊದಲ ಬಾರಿಗೆ ಟೆಂಟ್ರಾಡ್ರೈನ್ ಬಗ್ಗೆ ಸಂಶೋಧನೆ ಕೈಗೊಂಡಾಗ ಹಡೆಬಳ್ಳಿಯಲ್ಲಿ ಟೆಂಟ್ರಾಡ್ರೈನ್ ಅಂಶ ಇರುವುದನ್ನು ಗೊತ್ತು ಮಾಡಿದ್ದಾರೆ. ಅಲ್ಲದೇ, ಈ ಬಳ್ಳಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ಕ್ಯಾನ್ಸರ್ ಶಮನಕಾರಿ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ಪ್ರೊ.ಕೆ.ಆರ್.ಚಂದ್ರಶೇಖರ್ ಮಾಹಿತಿ

2017ರಲ್ಲಿ ಪೇಟೆಂಟ್​​​ಗೆ ಸಲ್ಲಿಸಲಾಗಿದ್ದು, ಇದೀಗ 20 ವರ್ಷಗಳ ಅವಧಿಗೆ ಪೇಟೆಂಟ್ ಪ್ರಮಾಣ ಲಭಿಸಿದೆ. ಇದು ಮಂಗಳೂರು ವಿವಿಗೆ ದೊರೆತ ಮೊದಲ ಪೇಟೆಂಟ್ ಕೂಡಾ ಆಗಿದೆ. ಈ ಪ್ರಯೋಗದ ಮೂಲಕ ಸುಲಭವಾಗಿ ಬೇರೆ ಕಾಂಪ್ಲೆಕ್ಸ್ ಮಿಕ್ಸ್​​​ಚರ್​​ನಿಂದ ಬೇರ್ಪಡಿಸಲು ಸಾಧ್ಯವೇ ಎಂದು ವಿವಿ ಪ್ರಯೋಗಾಲಯದಲ್ಲಿಯೇ ಶುದ್ಧೀಕರಣ (ಪ್ಯೂರಿಟಿ) ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶೇ.98 ಶುದ್ಧೀಕರಣ ಬರುತ್ತದೆ ಎಂದು ಸಾಬೀತಾಗಿದೆ.

ಮಂಗಳೂರು ವಿವಿ ಸಸ್ಯಶಾಸ್ತ್ರ ವಿಭಾಗದ ಸಂಶೋಧಕರಾಗಿದ್ದ ಪ್ರೊ.ಕೆ.ಆರ್.ಚಂದ್ರಶೇಖರ್ ಮತ್ತು ಪ್ರೊ.ಭಾಗ್ಯ ನೆಕ್ರಕಲಾಯ ಅವರ 'A Process For The Extraction And Purification Of Tetrondine' ಎಂಬ ಸಂಶೋಧನಾ ಪ್ರಕ್ರಿಯೆಗೆ ಪೇಟೆಂಟ್ ದೊರಕಿದೆ. ಈ ಪ್ರಕ್ರಿಯೆಯು ಕ್ಯಾನ್ಸರ್‌ಗೆ ಔಷಧಿಯ ಮೂಲ ಎಂದು ಗುರುತಿಸಿಕೊಂಡಿದೆ. ಪ್ರೊ.ಕೆ.ಆರ್.ಚಂದ್ರಶೇಖರ್ ಅವರು ಮಂಗಳೂರು ವಿವಿಯಲ್ಲಿ ನಿವೃತ್ತಿಯಾದ ಬಳಿಕ ಇದೀಗ ದೇರಳಕಟ್ಟೆಯ ವಿವಿಯಲ್ಲಿ ವಿಜ್ಞಾನಿಯಾಗಿ ಹಾಗೂ ಆಂತರಿಕ ಗುಣಮಟ್ಟದ ಖಾತರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ.ಭಾಗ್ಯ ನೆಕ್ರಕಲಾಯ ಅವರು ಯೆನೆಪೊಯ ವಿವಿಯ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಪ್ರೊ.ಕೆ.ಆರ್.ಚಂದ್ರಶೇಖರ್ ಅವರು ಮಾತನಾಡಿ, ಈ ಬಗ್ಗೆ ಮುಂದಿನ ಸಂಶೋಧನೆ ಕೈಗೊಳ್ಳಲು‌ ಸಾಕಷ್ಟು ಹಣದ ಅಗತ್ಯವಿದೆ. ಆದ್ದರಿಂದ ಯಾವುದಾದರೂ ಫಾರ್ಮಾಸಿಟಿಕಲ್ ಕಂಪೆನಿ ಕೈಜೋಡಿಸಿದಲ್ಲಿ ಮುಂದೊಂದಿನ ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಂತೆ ಕ್ಯಾನ್ಸರ್ ನಿರೋಧಕ ಔಷಧಿಯಾಗಿ ಹೊರಬರುವ ಸಾಧ್ಯತೆ ಇದೆ ಎಂದರು.

ಈ ಹಿಂದೆ ಚೀನಾದಲ್ಲೂ ಈ ರೀತಿಯ ಬಳ್ಳಿಯ ಸಂಶೋಧನೆಯನ್ನು ಅಲ್ಲಿನ ವಿಜ್ಞಾನಿಗಳು ಮಾಡಿದ್ದರು. ಅಲ್ಲಿನ ಬಳ್ಳಿಯಲ್ಲೂ ಟೆಂಟ್ರಾಡ್ರೈನ್ ಅಂಶವನ್ನು ಪತ್ತೆ ಮಾಡಿದ್ದರು. ಇದಾದ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ.

ಹಡೆಬಳ್ಳಿ ದ.ಕ., ಉಡುಪಿ, ಕಾಸರಗೋಡು ಭಾಗಗಳಲ್ಲಿ ಸಾಮಾನ್ಯವಾಗಿ ದೊರಕುವ ಸಣ್ಣ ಬಳ್ಳಿಯಾಗಿದ್ದು, ಇದರ ಎಲೆಯನ್ನು ಹಿಂದೆ ಹಳ್ಳಿಗಳಲ್ಲಿ ನುಣ್ಣಗೆ ಅರೆದು ಪೇಸ್ಟ್ ರೂಪದಲ್ಲಿ ತಲೆ ತಣ್ಣಗಾಗಲು ಹಚ್ಚುತ್ತಿದ್ದರು. ಅಲ್ಲದೆ ಇದನ್ನು ವಿಷ ನಿವಾರಕವಾಗಿಯೂ ಬಳಸಲಾಗುತ್ತಿತ್ತು.

ಸಾಮಾನ್ಯವಾಗಿ ಈ ಹಡೇ ಬಳ್ಳಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗದಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ಗ್ರಾಮೀಣ ಭಾಗದ ಜನರು ಈ ಬಳ್ಳಿಯನ್ನು ಅರೆದು ದೇಹ ತಂಪಾಗಲು ಹಣೆಗೆ ಹಚ್ಚುತ್ತಿದ್ದರು. ನೆಗಡಿ ಜ್ವರ ಶೀತ,ಮಧುಮೇಹ ಸೇರಿದಂತೆ ಕೆಲ ರೋಗಗಳಿಗೆ ಇದು ರಾಮಬಾಣವಾಗಿದೆ.

ಇದನ್ನೂ ಓದಿ: ಆರ್ಥಿಕ ಶಿಸ್ತು ತರಲು ಅಪ್ರಿಯವಾದರೂ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.